ಸಂಧಾನಕ್ಕೆ ಕಸರತ್ತು : ಬಿಕ್ಕಟ್ಟು ಪರಿಹಾರಕ್ಕೆ ‘ದೋಸ್ತಿ’ಗಳ ಯತ್ನ

Published : Jan 09, 2019, 07:09 AM IST
ಸಂಧಾನಕ್ಕೆ ಕಸರತ್ತು : ಬಿಕ್ಕಟ್ಟು ಪರಿಹಾರಕ್ಕೆ ‘ದೋಸ್ತಿ’ಗಳ ಯತ್ನ

ಸಾರಾಂಶ

ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನಡೆದಿರುವ ಬಿಕ್ಕಟ್ಟಿಗೆ ಪರಿಹಾರೋಪಾಯ ಕಂಡು ಹಿಡಿಯಲು ಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಉಭಯ ಪಕ್ಷಗಳ ನಾಯಕರ ನಡುವೆ ಮಾತುಕತೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು :  ನಿಗಮ ಮಂಡಳಿ ಅಧ್ಯಕ್ಷರು ಹಾಗೂ ವಿವಿಧ ನೇಮಕಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನಡೆದಿರುವ ಬಿಕ್ಕಟ್ಟಿಗೆ ಪರಿಹಾರೋಪಾಯ ಕಂಡು ಹಿಡಿಯಲು ಕಸರತ್ತು ಮುಂದುವರೆದಿದೆ.

ದೆಹಲಿಯಿಂದ ಆಗಮಿಸಿ ತಮ್ಮ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ನಂತರ ದೂರವಾಣಿ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದರೂ ಇತ್ಯರ್ಥಗೊಂಡಿಲ್ಲ. ಶೀಘ್ರದಲ್ಲೇ ಉಭಯ ಪಕ್ಷಗಳ ನಾಯಕರ ನಡುವೆ ಮಾತುಕತೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ತಡೆಹಿಡಿಯಲ್ಪಟ್ಟಿರುವ ಹಲವು ನೇಮಕಗಳಿಗೆ ಸಂಬಂಧಿಸಿದಂತೆ ಸಹಿ ಹಾಕಿ ಆದೇಶ ಹೊರಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈವರೆಗೆ ಸಂಪೂರ್ಣ ಒಪ್ಪಿಗೆ ನೀಡಿಲ್ಲ. ಬದಲಾಗಿ ಚರ್ಚೆ ನಡೆಸೋಣ ಎಂಬ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಕರ್ನಾ​ಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹೊರ​ತು​ಪ​ಡಿಸಿ ಉಳಿದ ಎಲ್ಲ ನಿಗಮ ಮಂಡ​ಳಿ ಹಾಗೂ ವಿವಿಧ ಹುದ್ದೆ​ಗ​ಳಿಗೆ ಶೀಘ್ರವೇ ನೇಮಕ ಮಾಡುವ ಭರ​ವ​ಸೆ​ಯನ್ನು ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವರು ನೀಡಿದ್ದಾರೆ ಎಂದು ಕಾಂಗ್ರೆಸ್‌ ಮೂಲ​ಗಳು ತಿಳಿ​ಸಿ​ವೆ.

ಕಗ್ಗಂಟು ಇರೋದು ಇಲ್ಲಿ: ಇದನ್ನು ನಿರಾಕರಿಸುತ್ತಿರುವ ಮುಖ್ಯಮಂತ್ರಿಗಳ ಆಪ್ತ ವಲಯ, ಬಿಡಿಎ ನೇಮಕಕ್ಕೆ ಆದೇಶ ಹೊರಡಿಸುವುದಕ್ಕೆ ಅಭ್ಯಂತರವೇನೂ ಇಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇಮಕ ಮಾಡಲು ತಾಂತ್ರಿಕ ಅಡಚಣೆ ಎದುರಾಗಿದೆ. ಆದರೆ, ದೆಹಲಿ ಪ್ರತಿನಿಧಿ, ಯೋಜನಾ ಮಂಡಳಿ ಉಪಾಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸೇರಿದಂತೆ ಜೆಡಿಎಸ್‌ ಖಾತೆ ಅಡಿಯಲ್ಲಿ ಬರುವ ಕೆಲವು ನಿಗಮ ಮಂಡಳಿಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡುವ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕಿದೆ ಎಂದು ತಿಳಿಸಿದೆ.

ಆಯಾ ಪಕ್ಷಗಳಿಗೆ ಹಂಚಿಕೆಯಾಗಿರುವ ಖಾತೆಗಳ ಅಡಿಯಲ್ಲಿ ಬರುವ ನಿಗಮ ಮಂಡಳಿಗಳ ಅಧ್ಯಕ್ಷಗಿರಿಯೂ ಆಯಾ ಪಕ್ಷಗಳಿಗೇ ಸೀಮಿತವಾಗಿರಬೇಕು. ಆದಾಗ್ಯೂ ಜೆಡಿಎಸ್‌ ಪಾಲಿಗೆ ಬಂದಿರುವ ಸಾರಿಗೆ ಇಲಾಖೆ ಅಡಿಯಲ್ಲಿನ ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ ಶಾಸಕ ಶಿವರಾಮ್‌ ಹೆಬ್ಬಾರ್‌ ಅವರಿಗೆ ನೀಡಲಾಗಿದೆ. ಸಾರಿಗೆ ಇಲಾಖೆ ಅಡಿ ಬರುವ ಇನ್ನುಳಿದ ಮೂರು ನಿಗಮ ಮಂಡಳಿಗಳು, ಲೋಕೋಪಯೋಗಿ ಮತ್ತು ರೇಷ್ಮೆ ಖಾತೆ ಅಡಿಯಲ್ಲಿನ ನಿಗಮ ಮಂಡಳಿಗಳು ಜೆಡಿಎಸ್‌ನವರಿಗೇ ಸೇರಬೇಕು ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ. ಹೀಗಾಗಿ, ಇದು ಉಭಯ ಪಕ್ಷಗಳ ನಾಯಕರ ಮಾತುಕತೆ ನಂತರವೇ ಸ್ಪಷ್ಟಚಿತ್ರಣ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.

ನಿಗಮ ಮಂಡಳಿ ಗೊಂದಲ ಹಿನ್ನೆ​ಲೆ​ಯಲ್ಲಿ ವೇಣು​ಗೋ​ಪಾಲ್‌ ನೇತೃ​ತ್ವ​ದಲ್ಲಿ ಸಭೆ ಸೇರಿದ್ದ ಕಾಂಗ್ರೆಸ್‌ ನಾಯ​ಕರು ಈ ವೇಳೆ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವ​ರನ್ನು ಸಂಪ​ರ್ಕಿಸಿ ಮಾಲಿನ್ಯ ನಿಯಂತ್ರಣ ಮಂಡ​ಳಿಯೂ ಸೇರಿ​ದಂತೆ ಕಾಂಗ್ರೆಸ್‌ ನೀಡಿ​ರುವ ಪಟ್ಟಿಗೆ ಶೀಘ್ರ ಒಪ್ಪಿಗೆ ನೀಡ​ಬೇಕು ಎಂದು ಕೋರಿದ್ದು, ಈ ವೇಳೆ ತಾಂತ್ರಿಕ ಕಾರ​ಣ​ಗ​ಳಿ​ಗಾಗಿ ಕರ್ನಾ​ಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆ​ಗೆ ನೇಮಕ ಮಾಡಲು ಸಾಧ್ಯ​ವಿಲ್ಲ ಎಂದು ಕುಮಾ​ರ​ಸ್ವಾಮಿ ತಿಳಿ​ಸಿದ್ದಾರೆ ಎನ್ನ​ಲಾ​ಗಿದೆ.

ಉಳಿ​ದಂತೆ ಕಾಂಗ್ರೆಸ್‌ ನೀಡಿ​ರುವ ಪಟ್ಟಿಗೆ ಶೀಘ್ರವೇ ಒಪ್ಪಿಗೆ ನೀಡುವ ಭರ​ವ​ಸೆ​ಯನ್ನು ಅವರು ನಾಯ​ಕ​ರಿಗೆ ನೀಡಿ​ದರು ಎಂದು ಕಾಂಗ್ರೆಸ್‌ ಮೂಲ​ಗಳು ಹೇಳು​ತ್ತ​ವೆ. ಇದಕ್ಕೆ ಕಾಂಗ್ರೆಸ್‌ ನಾಯ​ಕರು ಒಪ್ಪಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ವಿಚಾ​ರದ ಬಗ್ಗೆ ಮತ್ತೊಮ್ಮೆ ಮಾತು​ಕತೆ ನಡೆ​ಸುವ ನಿರ್ಧಾರ ಕೈಗೊಂಡರು ಎನ್ನ​ಲಾ​ಗಿ​ದೆ.

ಈ ಸಭೆ​ಯಲ್ಲಿ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ, ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌, ಕಾರ್ಯಾ​ಧ್ಯಕ್ಷ ಈಶ್ವರ್‌ ಖಂಡ್ರೆ, ಉಪ ಮುಖ್ಯ​ಮಂತ್ರಿ ಡಾ. ಜಿ. ಪರ​ಮೇ​ಶ್ವರ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ್‌ ಪಾಲ್ಗೊಂಡಿ​ದ್ದರು ಎಂದು ಮೂಲ​ಗಳು ತಿಳಿ​ಸಿ​ವೆ.

ವೇಣು​ಗೋ​ಪಾಲ್‌ ಭೇಟಿ​ಯಾ​ಗದ ಸಿಎಂ

ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ರಾಜ್ಯ ಕಾಂಗ್ರೆಸ್‌ ನಾಯ​ಕರು ನಡೆ​ಸಿದ ಸಭೆ​ಯಲ್ಲಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವರು ಪಾಲ್ಗೊ​ಳ್ಳ​ಬೇ​ಕಿತ್ತು. ಆದರೆ, ಅನಾ​ರೋ​ಗ್ಯದ ಕಾರಣ ನೀಡಿ ಕುಮಾ​ರ​ಸ್ವಾಮಿ ಅವರು ಈ ಭೇಟಿ​ಯಿಂದ ದೂರ ಉಳಿ​ದರು ಎಂದು ಎಂದು ಕಾಂಗ್ರೆಸ್‌ ಮೂಲ​ಗಳು ತಿಳಿ​ಸಿ​ವೆ.

ವಾಸ್ತ​ವ​ವಾಗಿ ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌, ಸಿದ್ದ​ರಾ​ಮಯ್ಯ ಹಾಗೂ ಕಾಂಗ್ರೆಸ್‌ ನಾಯ​ಕರು ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವ​ರನ್ನು ನೇರ​ವಾಗಿ ಭೇಟಿ ಮಾಡಿ ಮಾತು​ಕತೆ ನಡೆ​ಸುವ ಬಯಕೆ ಹೊಂದಿ​ದ್ದರು. ಆದರೆ, ಈ ಭೇಟಿಗೆ ಕುಮಾರಸ್ವಾಮಿ ಹಿಂಜ​ರಿದ ಕಾರಣ ಪ್ರತ್ಯೇಕವಾಗಿ ಸಭೆ ನಡೆ​ಸಿದ ಕಾಂಗ್ರೆಸ್‌ ನಾಯ​ಕರು ಈ ವೇಳೆ ದೂರ​ವಾ​ಣಿ​ಯಲ್ಲಿ ಕುಮಾ​ರ​ಸ್ವಾಮಿ ಅವ​ರೊಂದಿಗೆ ಚರ್ಚಿ​ಸಿ​ದರು ಎಂದು ಮೂಲ​ಗಳು ಹೇಳಿ​ವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ