ಏನ್ರೀ ಬಿಎಸ್ ವೈ ಭೇಟಿ ಮಾಡಿದ್ರಾ..? ಸಿಎಂ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಸಚಿವ

By Web DeskFirst Published Aug 9, 2018, 11:45 AM IST
Highlights

ಏನ್ರಿ ಬಿಎಸ್ ವೈ ಭೇಟಿ ಮಾಡಿದ್ರಾ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನೇರವಾಗಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಪ್ರಶ್ನೆ ಮಾಡಿದ್ದು ಇದಕ್ಕೆ ಉತ್ತರಿಸಲಾಗದೇ ಅವರು ಕಕ್ಕಾಬಿಕ್ಕಿಯಾದರು. 

ಬೆಂಗಳೂರು: ಏನ್ರೀ ದೆಹಲಿಯಿಂದ ಯಾವಾಗ ಬಂದ್ರಿ.. ಯಡಿಯೂರಪ್ಪ ಅವರಿಗೆ ವಿಶ್ ಮಾಡಿದ್ರಾ... ಹೀಗೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದಾಗ ಕಾಂಗ್ರೆಸ್ ಹೈಕಮಾಂಡನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಏನು ಉತ್ತರ ನೀಡಬೇಕೆಂದು ಗೊತ್ತಾಗದೇ ಬಲವಂತದ ನಗೆ ತಂದುಕೊಂಡರು. 

ಬುಧವಾರ ವಿಧಾನಸೌಧ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ ಅವರನ್ನು ನೋಡಿ ಸಿಎಂ ಈ ಮಾತನ್ನು ಹೇಳಿದಾಗ ಪಕ್ಕದಲ್ಲೇ ಇದ್ದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಹ ಸಣ್ಣಗೆ ನಕ್ಕರು.

ರಮೇಶ್ ಜಾರಕಿಹೊಳಿ ಅವರು ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ತಮ್ಮ ಬೆಂಬಲಿಗ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಲು ಹೈಕಮಾಂಡ್ ಭೇಟಿ ಮಾಡಲು ತೆರಳಿದ್ದರು. ದೆಹಲಿಗೆ ತೆರಳುವ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಅವರ ಜೊತೆ ವಿಮಾನದಲ್ಲಿ ತೆರಳಿದ್ದರೆಂದು ಹಾಗೂ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆಂಬ ವದಂತಿಗಳು ಹರಡಿದ್ದವು. ಆದರೆ ಈ ವದಂತಿಯನ್ನು ತಳ್ಳಿ ಹಾಕಿದ್ದ ರಮೇಶ್ ಜಾರಕಿಹೊಳಿ ತಾವು ಹುಟ್ಟಾ ಕಾಂಗ್ರೆಸ್ಸಿಗರಾಗಿದ್ದು, ಪಕ್ಷ ಬಿಡುವುದಿಲ್ಲ, ಬದಲಾಗಿ ಬಿಜೆಪಿಯ ಶಾಸಕರನ್ನೇ ಕಾಂಗ್ರೆಸ್‌ಗೆ ಕರೆತರುವುದಾಗಿ ಸ್ಪಷ್ಟನೆ ನೀಡಿದ್ದರು.

click me!