
ನವದೆಹಲಿ [ಜೂ.29]: ಒಂದು ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ನಾಗರಿಕರು ದೇಶದ ಯಾವುದೇ ರಾಜ್ಯದಲ್ಲಿ ಬೇಕಾದರೂ ಪಡಿತರ ಪಡೆಯುವ ‘ಒಂದು ದೇಶ ಒಂದೇ ಪಡಿತರ ಚೀಟಿ’ ಎಂಬ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ. ಉದ್ಯೋಗ ಅರಸಿ ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗುವ ಜನರಿಗೆ ಈ ಕ್ರಮದಿಂದ ಅನುಕೂಲವಾಗಲಿದೆ. ಅಲ್ಲದೆ, ಒಂದಕ್ಕಿಂತ ಹೆಚ್ಚು ಕಡೆ ಪಡಿತರ ಚೀಟಿ ಪಡೆಯುವ ಅಕ್ರಮಕ್ಕೂ ಕಡಿವಾಣ ಬೀಳಲಿದೆ.
ಯೋಜನೆ ಅನುಷ್ಠಾನ ಸಂಬಂಧ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮವಿಲಾಸ್ ಪಾಸ್ವಾನ್ ಅವರು ದೆಹಲಿಯಲ್ಲಿ ರಾಜ್ಯ ಸರ್ಕಾರಗಳ ಆಹಾರ ಕಾರ್ಯದರ್ಶಿಗಳು ಹಾಗೂ ಇನ್ನಿತರೆ ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ.
‘ಒಂದು ದೇಶ, ಒಂದು ಪಡಿತರ ಚೀಟಿ’ ಜಾರಿಗೆ ಬೇಕಾದ ಔಪಚಾರಿಕ ಪ್ರಕ್ರಿಯೆಗಳನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ‘ಪಾಯಿಂಟ್ ಆಫ್ ಸೇಲ್ಸ್’ (ಪಿಒಎಸ್) ಯಂತ್ರಗಳು ಎಲ್ಲ ಪಡಿತರ ಮಳಿಗೆಗಳಲ್ಲಿ ಅಳವಡಿಕೆಯಾದರೆ ಯೋಜನೆಯನ್ನು ಜಾರಿಗೆ ತರಬಹುದು. ಆಂಧ್ರಪ್ರದೇಶ, ಹರಾರಯಣ ಮತ್ತಿತರ ರಾಜ್ಯಗಳಲ್ಲಿ ಈಗಾಗಲೇ ಪಿಒಎಸ್ ಯಂತ್ರಗಳು ಪಡಿತರ ಮಳಿಗೆಗಳಲ್ಲಿ ಇವೆ. ಶೇ.100ರಷ್ಟುರಾಜ್ಯಗಳಲ್ಲಿ ಅಳವಡಿಕೆಯಾದರೆ ಹೊಸ ವ್ಯವಸ್ಥೆ ಅನುಷ್ಠಾನಗೊಳಿಸಬಹುದು ಎಂದು ಮಾಧ್ಯಮಗಳಿಗೆ ತಿಳಿಸಿದರು. ಉದ್ದೇಶಿತ ಯೋಜನೆಯಿಂದ ಪಡಿತರ ಚೀಟಿದಾರರು ಒಂದೇ ಪಡಿತರ ಅಂಗಡಿಗೆ ಹೋಗಬೇಕು ಎಂಬ ಅನಿವಾರ್ಯ ತಪ್ಪಲಿದೆ. ಭ್ರಷ್ಟಾಚಾರವೂ ತಗ್ಗಲಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ, ಆಂಧ್ರ, ಗುಜರಾತ್, ಹರಾರಯಣ, ಜಾರ್ಖಂಡ್, ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಪಡಿತರ ಚೀಟಿದಾರರು ಯಾವುದೇ ರೇಷನ್ ಅಂಗಡಿಯಿಂದ ಪಡಿತರ ಪಡೆಯುವ ವ್ಯವಸ್ಥೆ ಈಗಾಗಲೇ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.