ಬೆಂಗಳೂರು: ತಮ್ಮ ಸಹೋದ್ಯೋಗಿಯ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ವಾರ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರನ್ನು ಕಸ್ಟಡಿಗೆ ಪಡೆದು ಸರಿಸುಮಾರು ಎರಡು ದಿನಗಳಾಗಿದ್ದರೂ ಕೊಲೆ ಸಂಚಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಿಸಿಬಿ ಪೊಲೀಸರಿಗೆ ಸಾಧ್ಯವಾಗಿಲ್ಲ.
ಶುಕ್ರವಾರ ಮಧ್ಯಾಹ್ನ 1.30ರಿಂದ ಸತತವಾಗಿ ಶನಿವಾರ ರಾತ್ರಿವರೆಗೆ ವಿಚಾರಣೆ ನಡೆಸಿದರೂ ರವಿ ಬೆಳಗೆರೆ ಹೇಳುತ್ತಿರುವುದು ‘ನಾನು ಯಾರಿಗೂ ಸುಪಾರಿ ಕೊಟ್ಟಿಲ್ಲ’ ಎಂದು ಮಾತ್ರ. ಈ ನಡುವೆ ವಿಚಾರಣೆ ವೇಳೆ ಅವರು ತೀವ್ರ ಒತ್ತಡಕ್ಕೊಳಗಾಗುತ್ತಿದ್ದು, ಶನಿವಾರ ಸಂಜೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರ ವೈದ್ಯಕೀಯ ತಪಾಸಣೆ ಸಹ ನಡೆದಿದೆ.
ಅಲ್ಲದೆ, ರಾಜರಾಜೇಶ್ವರಿ ನಗರದಲ್ಲಿರುವ ರವಿ ಬೆಳಗರೆ ಅವರ ಎರಡನೇ ಪತ್ನಿ ಯಶೋಮತಿಯ ಮನೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿರುವ ತೋಟದ ಮನೆ ಮೇಲೆ ಸಿಸಿಬಿ ದಾಳಿ ನಡೆಸಿ ಕೆಲ ದಾಖಲೆಗಳನ್ನು ಸಂಗ್ರಹಿಸಿದೆ.
ಶನಿವಾರ ಬೆಳಗ್ಗೆ ಬೆಳಗೆರೆ ಅವರ ವಿಚಾರಣೆ ಪ್ರಾರಂಭಿಸಿದ ಸಿಸಿಬಿ ಡಿಸಿಪಿ ಜಿನೇಂದ್ರ ಕಣಗಾವಿ, ನಿಮ್ಮ ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸಂಚು ರೂಪಿಸಿದ್ದೇಕೆ? ಏನದು ನಿಮ್ಮ ದ್ವೇಷಕ್ಕೆ ವೈಯಕ್ತಿಕ ಕಾರಣ? ಭೀಮಾತೀರದ ಸುಪಾರಿ ಕಿಲ್ಲರ್ ಶಶಿಧರ್ ಮುಂಡವಾಡೆ ನಿಮಗೆ ಹೇಗೆ ಪರಿಚಯ? ಆತನಿಗೆ ಎಷ್ಟು ಹಣಕ್ಕೆ ಸುಪಾರಿ ಕೊಟ್ಟಿದ್ದೀರಿ... ಹೀಗೆ ಪ್ರಶ್ನೆಗಳನ್ನು ಕೇಳಿ ಹೇಳಿಕೆ ಪಡೆಯಲು ಮುಂದಾದರು.
ಆದರೆ ಆರೋಪ ನಿರಾಕರಿಸಿದ ಬೆಳಗೆರೆ, ‘ನಾನು ಯಾರ ಹತ್ಯೆಗೂ ಸಂಚು ರೂಪಿಸಿಲ್ಲ’ ಎನ್ನುತ್ತಿದ್ದಾರೆ ಎಂದು ಗೊತ್ತಾಗಿದೆ. ‘ಡಿಸಿಪಿ ಸಾಹೇಬ್ರೇ ನಿಮಗೆ ಗೊತ್ತಿಲ್ಲ. ನಾನು ಬೆಳೆಸಿದ ಹುಡುಗ ಸುನೀಲ್. ನನ್ನ ಮನೆ ಮಗ ರೀ. ನಾನೇಕೆ ಅವನ ಕೊಲೆಗೆ ಸುಪಾರಿ ಕೊಡ್ಲಿ? ಅವನು ತಪ್ಪು ಮಾಡಿದ್ರೆ ಕಪಾಳಕ್ಕೆ ಹೊಡೆದು ಬುದ್ದಿ ಹೇಳುವ ಅಧಿಕಾರವಿದೆ ನನಗೆ. ಅಷ್ಟುಗಾಢಸಂಬಂಧ ನಮ್ಮದು. ಅಂತಹದರಲ್ಲಿ ನಾನೇಕೆ ಅವನ ಕೊಲೆಗೆ ಸುಪಾರಿ ಕೊಡಲಿ’ ಎಂದು ರವಿ ಬೆಳಗೆರೆ ಹೇಳುತ್ತಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.
ಎಸಿಪಿ ಕಚೇರಿಯಲ್ಲೇ ವಾಸ್ತವ್ಯ: ಸುಪಾರಿ ಕೊಲೆ ಸಂಚು ಪ್ರಕರಣದಲ್ಲಿ ರವಿ ಬೆಳಗೆರೆ ಅವರನ್ನು ನಾಲ್ಕು ದಿನ ತಮ್ಮ ವಶಕ್ಕೆ ಪಡೆದಿರುವ ಸಿಸಿಬಿ ಅಧಿಕಾರಿಗಳು, ಎಸಿಪಿ ಸುಬ್ರಹ್ಮಣ್ಯ ಅವರ ಕಚೇರಿಯಲ್ಲೇ ಹಾಸಿಗೆ ಹಾಗೂ ಕುರ್ಚಿ ಹಾಕಿ ಬೆಳಗೆರೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ಪ್ರತಿ ಎರಡು ಗಂಟೆಗೊಮ್ಮೆ ವೈದ್ಯರು ಆರೋಗ್ಯ ತಪಾಸಣೆಗೊಳಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮುಂದುವರಿದ ಶೋಧ: ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನಲ್ಲಿರುವ ರವಿ ಬೆಳಗೆರೆ ಅವರ ತೋಟದ ಮನೆ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ಎರಡನೇ ಪತ್ನಿ ಮನೆ ಮೇಲೆ ಶನಿವಾರ ದಾಳಿ ನಡೆಸಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಡಿಸಿಪಿ ಜಿನೇಂದ್ರ ಕಣಗಾವಿ ತಿಳಿಸಿದರು.
ರಾಜರಾಜೇಶ್ವರಿ ನಗರದ ಪಟ್ಟಣಗೆರೆಯಲ್ಲಿರುವ ಹಿಮ ಬೆಳಗೆರೆ ಹೆಸರಿನ ಮನೆಯಲ್ಲಿ ಬೆಳಗೆರೆ ಅವರ 2ನೇ ಪತ್ನಿ ಯಶೋಮತಿ ವಾಸವಾಗಿದ್ದಾರೆ. ಸಂಜೆ 4ರ ಸುಮಾರಿಗೆ ಪೊಲೀಸರು ರವಿಯನ್ನು ಕರೆದುಕೊಂಡು ಆ ಮನೆಗೆ ತೆರಳಿದ್ದರು. ಪರಿಶೀಲಿಸಿದ ಬಳಿಕ ಬೆಳಗೆರೆ ಸಮ್ಮುಖದಲ್ಲೇ ತನಿಖಾ ತಂಡವು ಯಶೋಮತಿ ಅವರ ಹೇಳಿಕೆ ದಾಖಲಿಸಿಕೊಂಡಿತು ಎಂದು ತಿಳಿದು ಬಂದಿದೆ.
ಯಶೋಮತಿ ಮನೆಯಲ್ಲಿ ಶೋಧ ನಡೆಸಲು ಸಿಸಿಬಿ ಅಧಿಕಾರಿಗಳಬಳಿಸುನೀಲ್ ಹೆಗ್ಗರವಳ್ಳಿ ನೀಡಿದ ಹೇಳಿಕೆಯೊಂದು ಕಾರಣವಾಗಿದೆ. ಹಾಯ್ ಬೆಂಗಳೂರು ಪತ್ರಿಕೆಯ ಎಂಡಿಯೂ ಆಗಿರುವ ಯಶೋಮತಿ ನನ್ನ ಸಹೋದ್ಯೋಗಿ. ಪತ್ರಿಕೆ ಕೆಲಸದ ವಿಚಾರವಾಗಿ ನಾವು ಪ್ರತಿನಿತ್ಯ ಮಾತನಾಡುತ್ತಿದ್ದೆವು. ಆದರೆ ಅದನ್ನೇ ತಪ್ಪಾಗಿ ಭಾವಿಸಿ ನನ್ನ ಹತ್ಯೆಗೆ ಸಂಚು ರೂಪಿಸಿರಬಹುದು ಎಂದು ಸುನೀಲ್ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಶೋಮತಿ ಅವರ ಮನೆಗೆ ಸಿಸಿಬಿ ಅಧಿಕಾರಿಗಳು ತೆರಳಿ ಪರಿಶೀಲಿಸಿದರು ಎಂದು ತಿಳಿದು ಬಂದಿದೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಸುನೀಲ್ ಅವರು, 2001ರಿಂದ ಯಶೋಮತಿ ನನ್ನ ಸಹೋದ್ಯೋಗಿ. ಅವರನ್ನು ಬೆಳಗೆರೆ ಪ್ರೀತಿಸಿ ಮದುವೆಯಾದರು. 2013ರಲ್ಲಿ ಅವರಿಗೆ ಪ್ರತ್ಯೇಕ ಕ್ಯಾಬಿನ್ ಕೊಟ್ಟು, ಹಾಯ್ ಬೆಂಗಳೂರು ಪತ್ರಿಕಾ ಬಳಗದ ಎಂಡಿ ಹುದ್ದೆ ನೀಡಿದರು. ಇದು ಕಚೇರಿಯ ಕೆಲ ಹಿರಿಯ ನೌಕರರ ಬೇಸರಕ್ಕೂ ಕಾರಣವಾಗಿತ್ತು ಎಂದರು.
ಹಾಗೆಯೇ 2ನೇ ಮದುವೆ ವಿಚಾರವಾಗಿ ಬೆಳಗೆರೆ ಅವರ ಮೊದಲ ಪತ್ನಿ ಹಾಗೂ ಮಕ್ಕಳು ಸಹ ಅಸಮಾಧಾನಗೊಂಡಿದ್ದರು. ಆ ಕುಟುಂಬದ ಕಲಹದಲ್ಲಿ ಬಲಿಪಶುವಾದವನು ನಾನು. ಹಾಯ್ ಬೆಂಗಳೂರು ಪತ್ರಿಕೆಗೆ ಯಶೋಮತಿ ಅವರು ಎಂಡಿ ಆದಾಗ ನಾನು ಖಾಸಗಿ ಸುದ್ದಿವಾಹಿನಿಯಲ್ಲಿ ಸುದ್ದಿ ಸಂಪಾದಕನಾಗಿದ್ದೆ. ಹಾಗಾಗಿ ವಾರಕ್ಕೆರಡು ದಿನ ಮಾತ್ರ ಪತ್ರಿಕಾ ಕಚೇರಿಗೆತೆರಳಿಕೆಲಸಮಾಡುತ್ತಿದ್ದೆ. ಉಳಿದ ದಿನಗಳಲ್ಲಿ ಪತ್ರಿಕೆಯಲ್ಲಿ ಪ್ರಕಟಿಸಬೇಕಾದ ಸುದ್ದಿ ವಿಷಯವಾಗಿ ನನಗೆ ಯಶೋಮತಿ ಕರೆ ಮಾಡಿ ಮಾತನಾಡುತ್ತಿದ್ದರು ಎಂದು ಸುನೀಲ್ ಹೇಳಿದರು.
ಮತ್ತೊಬ್ಬ ಸುಪಾರಿ ಕಿಲ್ಲರ್ಗೆ ಶೋಧ : ರವಿ ಬೆಳಗೆರೆ ವಿರುದಟಛಿ ಸುಪಾರಿ ಕೊಲೆ ಪ್ರಕರಣದ ತನಿಖೆ ಮುಂದುವರೆಸಿರುವ ಸಿಸಿಬಿ ಅಧಿಕಾರಿಗಳು, ಈ ಕೃತ್ಯದ ಮತ್ತೊಬ್ಬ ಭೀಮಾತೀರದ ಸುಪಾರಿ ಕಿಲ್ಲರ್ ವಿಜುಬಡಿಗೇರ್ಪತ್ತೆಗೆಉತ್ತರಕರ್ನಾಟಕದಲ್ಲಿತೀವ್ರ ಶೋಧ ನಡೆಸಿದ್ದಾರೆ. ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ಪಡೆದಿದ್ದ ಭೀಮಾತೀರದ ಸುಪಾರಿ ಕಿಲ್ಲರ್ ಶಶಿಧರ್ನ ಸಹಚನಾಗಿರುವ ವಿಜು, ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.