ಬೆಂಗಳೂರು(ಸೆ.27): ಇವತ್ತು ಸುಪ್ರೀಂ ಕೋರ್ಟ್ ಕಾವೇರಿ ನೀರಿನ ಭವಿಷ್ಯವನ್ನು ನಿರ್ಧರಿಸಲಿದೆ. ಕಾವೇರಿ ನೀರು ಬಿಡುಗಡೆಗೆ ಸರ್ವೋಚ್ಛ ನ್ಯಾಯಾಲಯ ನೀಡಿದ್ದ ಆದೇಶ ಮರು ಪರಿಶೀಲಿಸುವಂತೆ ಕರ್ನಾಟಕ ನಿನ್ನೆಯಷ್ಟೇ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಈ ಬೆನ್ನಲ್ಲೇ ತಮಿಳುನಾಡು ತಕರಾರು ಸಹ ಸಲ್ಲಿಸಿದೆ. ಹೀಗಾಗಿ ಇವತ್ತಿನ ಕೋರ್ಟ್ ವಿಚಾರಣೆ ಮಹತ್ವ ಪಡೆದಿದ್ದು ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ. ಹಾಗಾದರೆ ಇಂದು ಸುಪ್ರೀಂ ಕೋರ್ಟ್'ನಲ್ಲಿ ಏನಾಗಬಹುದು? ರಾಜ್ಯ ಸರ್ಕಾರ ಏನು ಮಾಡಬೇಕಾಗಬಹುದು? ಈ ಕುರಿತಾದ ಡಿಟೇಲ್ಸ್
ಸುಪ್ರೀಂ ಕೋರ್ಟ್ನಲ್ಲಿ ಹೀಗಾಗಬಹುದು
1) ಕೋರ್ಟ್ ಆದೇಶ ಪಾಲಿಸದಿರುವುದಕ್ಕೆ ನ್ಯಾಯಾಂಗ ನಿಂದನೆ. ಹೀಗಾಗಿ ಸೆಪ್ಟೆಂಬರ್ 20ರ ಆದೇಶ ಪಾಲಿಸಿ 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಸೂಚಿಸಬಹುದು.
2) ಕರ್ನಾಟಕದ ವಿಧಾನಮಂಡಲ ಅಧಿವೇಶನದ ಎಚ್ಚರಿಕೆಯ ನಿರ್ಣಯವನ್ನು ಒಪ್ಪುವುದು. ಕುಡಿಯುವ ನೀರಿಗೆ ಆದ್ಯತೆ ಎಂಬುವ ಅಂಶ ಪರಿಗಣಿಸುವುದು
3) ಕಾವೇರಿ ಮೇಲುಸ್ತುವಾರಿ ಸಮಿತಿ ನಿರ್ಣಯದಂತೆ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಸೂಚಿಸಬಹುದು
4) ಕೋರ್ಟ್ ಹೊರತಾಗಿ ಮೇಲುಸ್ತುವಾರಿ ಸಮಿತಿಯಲ್ಲೇ ವ್ಯಾಜ್ಯ ಬಗೆಹರಿಸುವಂತೆ ವಿಚಾರಣೆ ನಡೆಸಿ ಅರ್ಜಿ ವಜಾ ಮಾಡುವುದು
5) ಮತ್ತೊಮ್ಮೆ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸಲು ಸೂಚನೆ. ಅಲ್ಲದೆ, ಅಕ್ಟೋಬರ್ 20ರೊಳಗೆ ಈ ವಿಚಾರವಾಗಿ ದೃಢ ನಿಲುವು ತಳೆಯುವಂತೆ ಹೇಳುವುದು
ಸುಪ್ರೀಂ ಕೋರ್ಟ್ ಇಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ಆಗ ರಾಜ್ಯಕ್ಕೆ ಏನಾಗಬಹುದು?
ರಾಜ್ಯಕ್ಕೆ ಏನಾಬಹುದು?
1) ಸುಪ್ರೀಂಕೋರ್ಟ್ ಆದೇಶ ಪಾಲಿಸಲೇಬೇಕು. 2002ರ ರೀತಿ ನೀರಿನ ಬಿಕ್ಕಟ್ಟು ನಿವಾರಣೆಗೆ ಸರ್ಕಾರ ಪ್ರಯತ್ನಿಸಬೇಕು
2) ರಾಜ್ಯದ ಈ ವಾದ ಒಪ್ಪಿದರೆ ಸರ್ಕಾರ ಜಲಗಂಡಾಂತರದಿಂದ ಪಾರು. ಆದರೆ, ತಮಿಳುನಾಡು ಮತ್ತೆ ಕಾನೂನು ಹೋರಾಟ ಮುಂದುವರಿಸುವುದು
3) ಮೇಲುಸ್ತುವಾರಿ ಸಮಿತಿ ಸಭೆಯಂತೆ ನೀರು ಬಿಡಲು ಸೂಚಿಸಿದರೆ ರಾಜ್ಯ ಸರ್ಕಾರಕ್ಕೆ ಮತ್ತೆ ಸಂಕಷ್ಟ. ನೀರು ಬಿಡಲೇಬೇಕಾದ ಅನಿವಾರ್ಯ
4) ಸುಪ್ರೀಂ ಕೋರ್ಟ್ ಸೂಚಿಸಿದ್ದೇ ಆದರೆ ಸೆಪ್ಟೆಂಬರ್ 19ರ ನಿರ್ಣಯದಂತೆ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ನಿರ್ದೇಶನ. ಆದರೂ ರಾಜ್ಯ ಸರ್ಕಾರಗಳು ಮತ್ತೆ ಸುಪ್ರೀಂ ಕದ ತಟ್ಟಬಹುದು.
5) ರಾಜ್ಯದ ಪಾಲಿಗೆ ನಿಜಕ್ಕೂ ಯುದ್ಧವೇ ಸರಿ. ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಸೋಲು ಎಂದೇ ಭಾವನೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ವೇಳೆ ರಾಜ್ಯದ ಹಿತಕ್ಕೆ ಗಮನ ಹರಿಸಬೇಕಿದೆ.