ನವದೆಹಲಿ(ಸೆ. 27): ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಸರಕಾರೀ ಹಿರಿಯ ಅಧಿಕಾರಿಯೊಬ್ಬರ ಇಡೀ ಕುಟುಂಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾರ್ಪೊರೇಟ್ ವ್ಯವಹಾರಗಳ ಮಹಾ ನಿರ್ದೇಶಕ ಬಿ.ಕೆ. ಬನ್ಸಾಲ್ ಮತ್ತವರ ಮಗ ಯೋಗೇಶ್ ಇಬ್ಬರೂ ಮಂಗಳವಾರ ತಮ್ಮ ಫ್ಲ್ಯಾಟ್'ನಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಬನ್ಸಾಲ್ ಅವರ ಪತ್ನಿ ಹಾಗೂ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
"ಬಿ.ಕೆ.ಬನ್ಸಾಲ್ ಮತ್ತು ಯೋಗೇಶ್ ಅವರಿಬ್ಬರೂ ಒಂದೇ ಫ್ಲಾಟ್'ನ ಬೇರೆ ಬೇರೆ ರೂಮ್'ಗಳಲ್ಲಿ ನೇಣು ಬಿಗಿದುಕೊಂಡಿದ್ದಾರೆ. ನಮಗೆ ಬೆಳಗ್ಗೆ 9:30ಕ್ಕೆ ವಿಷಯ ತಿಳಿಯಿತು. ಆದರೆ, ಅಪ್ಪ ಮಗ ಇಬ್ಬರೂ ಡೆತ್ ನೋಟ್ ಬರೆದಿಟ್ಟಿದ್ದಾರೆ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಡೆತ್ ನೋಟ್'ನಲ್ಲಿರುವ ಸಂಗತಿಯನ್ನು ಪೊಲೀಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಎರಡು ತಿಂಗಳ ಹಿಂದಷ್ಟೇ, ಜುಲೈನಲ್ಲಿ ಬಿ.ಕೆ.ಬನ್ಸಾಲ್ ಅವರ ಪತ್ನಿ ಸತ್ಯಬಾಲಾ(58) ಹಾಗೂ ಪುತ್ರಿ ನೇಹಾ(28) ಕೂಡ ಇದೇ ಅಪಾರ್ಟ್'ಮೆಂಟ್'ನಲ್ಲಿ ಪತ್ಯೇಕ ರೂಮುಗಳಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದರು.
ಬನ್ಸಾಲ್ ವಿರುದ್ಧ ಆರೋಪವೇನು?
ಕಾರ್ಪೊರೇಟ್ ಕಂಪನಿಯೊಂದಕ್ಕೆ ಅನುಕೂಲ ಮಾಡಿಕೊಡಲು ಬನ್ಸಾಲ್ ಅವರು 9 ಲಕ್ಷ ರೂ. ಲಂಚ ಕೊಟ್ಟಿದ್ದಾರೆಂದು ಸಿಬಿಐ ಆರೋಪಿಸಿದೆ. ಈ ಸಂಬಂಧ ಬನ್ಸಾಲ್ ಅವರನ್ನು ಎರಡು ದಿನಗಳ ಹಿಂದಷ್ಟೇ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.