ಸಿದ್ಧಾರ್ಥ್‌ಗೆ ಹಿಂದಿನ ಐಟಿ ಡಿಜಿ ಕಿರುಕುಳ? ಪತ್ರದಲ್ಲಿ ಕೊಟ್ರು ಸುಳಿವು!

By Web DeskFirst Published Jul 30, 2019, 11:46 AM IST
Highlights

ಕಾಫೀಡೇ ಮಾಲೀಕ ಸಿದ್ಧಾರ್ಥ ನಾಪತ್ತೆ| ನೇತ್ರಾವತಿ ನದಿ ತೀರದಲ್ಲಿ ಮುಂದುವರೆದ ಹುಡುಕಾಟ| ಸಿದ್ಧಾರ್ಥ ಬರೆದ ಪತ್ರದಲ್ಲಿ ಹಿಂದಿನ ಐಟಿ ಡಿಜಿ ಕಿರುಕುಳದ ಮಾಹಿತಿ| ಆರೋಪ ಕೇಳಿ ಸ್ಪಷ್ಟನೆ ಕೊಟ್ಟ ಆದಾಯ ತೆರಿಗೆ ಇಲಾಖೆ

ಬೆಂಗಳೂರು[ಜು.30]: ಕಾಫಿ ಡೇ ಮಾಲೀಕ ಸಿದ್ಧಾರ್ಥ ನಿಗೂಢ ನಾಪತ್ತೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ನದಿ ತಟದ ಬಳಿ ನಾಪತ್ತೆಯಾದ ಸಿದ್ದಾರ್ಥಗಾಗಿ ಬಹಳಷ್ಟು ಹುಡುಕಾಟ ನಡೆಸಿದ್ದರೂ ಅವರಿನ್ನೂ ಪತ್ತೆಯಾಗಿಲ್ಲ. ಹೀಗಿರುವಾಗ ಇಂದು ಬೆಳಗ್ಗೆ ಪತ್ತೆಯಾದ ಅವರು ಬರೆದಿದ್ದಾರೆನ್ನಲಾದ ಪತ್ರ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅದರಲ್ಲೂ ಪ್ರಮುಖವಾಗಿ ಅವರಿಗೆ ಹಿಂದಿನ ಐಟಿ ಡಿಜಿ ಕಿರುಕುಳ ನೀಡಿದ್ದರೆಂದು ಉಲ್ಲೇಖಿಸಿರುವುದು ಬಹಳಷ್ಟು ಚರ್ಚೆ ಹುಟ್ಟಿಸಿದೆ.

ಕಾಫಿಡೇ ಮಾಲೀಕ ಸಿದ್ದಾರ್ಥ ಐಟಿ ಡಿಜಿ ವಿರುದ್ಧ ಹೇಳಿದ್ದೇನು?

ಆರೋಪ 1 - ಹಿಂದಿನ ಆದಾಯ ತೆರಿಗೆ ಇಲಾಖೆ ಡಿಜಿಯಿಂದ ಕಿರುಕುಳ ಅನುಭವಿಸಿದೆ

ಆರೋಪ 2 - ಬೇರೆ, ಬೇರೆ ಕಾರಣಗಳಿಗೆ ನಮ್ಮ ಕಂಪನಿ ಷೇರು ಮುಟ್ಟುಗೋಲು ಹಾಕಿಕೊಂಡ ಐಟಿ

ಆರೋಪ 3 - ಐಟಿ ದಾಳಿಯಿಂದ ಮೈಂಡ್ ಟ್ರೀ ಡೀಲ್ ಮುಂದುವರಿಸುವುದು ಸಾಧ್ಯವಾಗಲಿಲ್ಲ 

ಆರೋಪ 4 - ಎರಡನೇ ಬಾರಿ ಕಾಫಿ ಡೇ ಷೇರು ಮುಟ್ಟುಗೋಲು ಹಾಕಿಕೊಂಡಿದ್ದ ಐಟಿ

ಆರೋಪ 5 - ಐಟಿ ದಾಳಿಯಿಂದ ನನ್ನ ಕಂಪನಿ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು 

ಆರೋಪ 6 - ಇದು ಆದಾಯ ತೆರಿಗೆ ಇಲಾಖೆಯಿಂದ ನನಗೆ ಆದ ಅನ್ಯಾಯ

"

ಎಸ್. ಎಂ ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ? ಪತ್ರದಲ್ಲಿ ಮಹತ್ವದ ಮಾಹಿತಿ!

ಇನ್ನು ಸಿದ್ಧಾರ್ಥ ಮಾಡಿರುವ ಆರೋಪಗಳ ಕುರಿತಾಗಿ ತೆರಿಗೆ ಇಲಾಖೆ ಮೂಲಗಳು ಸ್ಪಷ್ಣನೆ ನೀಡಿದ್ದು, 'ಸಿದ್ಧಾರ್ಥ ವಿರುದ್ದ ಕಾನೂನು ಕ್ರಮ ಮಾತ್ರ ಕೈಗೊಳ್ಳಲಾಗಿದೆ. ಕಿರುಕುಳ ನೀಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಮೈಂಡ್ ಟ್ರೀ ಶೇರ್ ಗಳನ್ನ ಅವರ ಮನವಿಯಂತೆ ಹಿಂದಿರುಗಿಸಲಾಗಿದೆ. ಮೈಂಡ್ ಟ್ರೀ ಶೇರ್ ಗಳನ್ನ ಅವರ ಇಚ್ಚೆಯಂತೆ ಮಾರಾಟ ಮಾಡಿಕೊಂಡಿದ್ದಾರೆ' ಎಂದಿದ್ದಾರೆ.

"

ಅದೇನಿದ್ದರೂ ಪತ್ತೆಯಾದ ಪತ್ರದಿಂದ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಅನುಮಾನಗಳು ವ್ಯಕ್ತವಾಗಿದೆ. ಸದ್ಯ ಪೊಲೀಸರು ಕಾರು ಡ್ರೈವರ್ ವಿಚಾರಣೆ ನಡೆಸುತ್ತಿದ್ದು, ನೇತ್ರಾವತಿ ನದಿಯಲ್ಲೂ ಸಿದ್ಧಾರ್ಥಗಾಗಿ ಹುಡುಕಾಟ ಮುಂದುವರೆದಿದೆ.

click me!