
ಬೆಂಗಳೂರು(ಜೂ.22): ಅಳೆದು- ತೂಗಿ ನೋಡಿದ ಬಳಿಕ ಸಿದ್ದರಾಮಯ್ಯ ಸೋಮವಾರ ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಿದ್ದಾರೆ. ಆದರೆ ಯಾರೆಲ್ಲಾ ಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವುದನ್ನು ಸಿಎಂ ಗೌಪ್ಯವಾಗಿಟ್ಟಿದ್ದಾರೆ. ಹಾಗಾದರೆ ಯಾರೆಲ್ಲ ಮಂತ್ರಿಯಾಗಬಹುದು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.
ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ : ನಾಳೆ ಅಥವಾ ನಾಡಿದ್ದು ದೆಹಲಿಗೆ ದೌಡು
ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಅಧಿವೇಶನ ಮುಗಿದ ಮೇಲೆ ವಿಸ್ತರಣೆ ಮಾಡೋದಾಗಿ ಹೇಳಿದ್ದ ಸಿಎಂ, ಸೋಮವಾರ ವಿಸ್ತರಣೆ ಮಾಡಲಿದ್ದಾರೆ. ನೂತನ ಮಂತ್ರಿಗಳಾಗಿ ಮೂವರು ಸೋಮವಾರ ಪ್ರಮಾಣ ಸ್ವೀಕರಿಸಲಿದ್ದಾರೆ.
ಮಹದೇವ ಪ್ರಸಾದ್ ನಿಧನದಿಂದ ಮತ್ತು ಹೆಚ್ ವೈ ಮೇಟಿ ರಾಸಲೀಲೆ ಪ್ರಕರಣದಿಂದ ಹಾಗೂ ಜಿ ಪರಮೇಶ್ವರ್ ರಾಜೀನಾಮೆಯಿಂದ ಮೂವರು ಸ್ಥಾನಗಳು ಖಾಲಿಯಾಗಿವೆ. ಈ ಸ್ಥಾನಗಳನ್ನು ತುಂಬಲು ಸಿಎಂ ನಿರ್ಧರಿಸಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾಗಿದ್ದು, ಅಳೆದು ತೂಗಿ ಸಂಪುಟ ವಿಸ್ತರಣೆ ಮಾಡಲು ಮುಂದಾಗಿದ್ದಾರೆ.ಯಾವ ಸಮುದಾಯದಿಂದ ಸ್ಥಾನಗಳು ಖಾಲಿಯಾಗಿವೆಯೋ ಅದೇ ಸಮುದಾಯದ ಮುಖಂಡರನ್ನು ಸಂಪುಟಕ್ಕೆ ತರುವ ಪ್ರಯತ್ನವನ್ನ ಸಿದ್ದರಾಮಯ್ಯ ಮಾಡಿದ್ದಾರೆ.
ಯಾರಿಗೆ ಯಾವ ಖಾತೆ..?
ಮಹದೇವಪ್ರಸಾದ್ ಸ್ಥಾನಕ್ಕೆ ತಿಪಟೂರು ಶಾಸಕ ಷಡಕ್ಷರಿ, ಮೇಟಿ ಸ್ಥಾನಕ್ಕೆ ಅದೇ ಸಮುದಾಯದ ಕುಂದಗೋಳ ಶಾಸಕ ಸಿ ಎಸ್ ಶಿವಳ್ಳಿ ಹಾಗೂ ಹೊಸದುರ್ಗ ಶಾಸಕ ಗೋವಿಂದಪ್ಪ ರೇಸ್ನಲ್ಲಿದ್ದಾರೆ. ಆದರೆ ಪರಮೇಶ್ವರ್ ಸ್ಥಾನಕ್ಕೆ ದಲಿತ ಸಮುದಾಯದ ನರೇಂದ್ರಸ್ವಾಮಿ, ಮೋಟಮ್ಮ, ಆರ್ ಬಿ ತಿಮ್ಮಾಪುರ ಆಕಾಂಕ್ಷಿಗಳಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೃಹ ಖಾತೆ ಯಾರಿಗೆ ನೀಡಬೇಕು ಎನ್ನುವ ಚಿಂತೆ ಕಾಡುತ್ತಿದೆ. ಸೂಕ್ಷ್ಮ ಇಲಾಖೆಯಾದ್ದರಿಂದ ಅನುಭವಸ್ಥರಿಗೆ, ಹಿರಿಯರಿಗೆ ನೀಡಬೇಕು ಎನ್ನುವುದು ಸಿಎಂ ಇಚ್ಛೆ. ಆದರೆ ಹಿರಿಯರಾರು ಒಪ್ಪುತ್ತಿಲ್ಲ. ಹೀಗಾಗಿ ಗೃಹ ಖಾತೆಗೆ ಸೂಕ್ತವಾದವರು ಸಿಗದಿದ್ದ ಪಕ್ಷದಲ್ಲಿ ಪರಮೇಶ್ವರ್ ಅವರನ್ನೇ ಮುಂದುವರೆಸುವ ಚಿಂತನೆಯೂ ಸಿದ್ದರಾಮಯ್ಯರದ್ದಾಗಿದೆ. ನಾಡಿದ್ದು ಹೈಕಮಾಂಡ್ ಭೇಟಿ ವೇಳೆ ಈ ವಿಚಾರವನ್ನೂ ಸಿಎಂ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಚುನಾವಣೆ ಒಂದಿಷ್ಟು ತಿಂಗಳಿರುವ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಸಂಪುಟ ಮೂಲಕ ಎಚ್ಚರಿಕೆ ನಡೆಯನ್ನಿಡಲು ತೀರ್ಮಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.