ಮಂಗಳೂರು(ಸೆ.25): ಪ್ರಯಾಣಿಕ ಮಾಡಿದ ಆರೋಪದಿಂದ ನೊಂದ ಕೆಎಸ್ಆರ್ಟಿಸಿ ಕಂಡಕ್ಟರ್ ಚಲಿಸುತ್ತಿದ್ದ ಬಸ್ನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂಥ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ದೇವದಾಸ್ ಶೆಟ್ಟಿ ಆತ್ಮಹತ್ಯೆಗೆ ಶರಣಾದ ನಿರ್ವಾಹಕ, ಕೆಎಸ್ಆರ್ಟಿಸಿ ಮಂಗಳೂರು ಡಿಪೋ 1ರ ಬಸ್'ನಲ್ಲಿ ಕಂಡಕ್ಟರ್ ಆಗಿದ್ದ ದೇವದಾಸ್ ಎಂದಿನಂತೆ ಇವತ್ತು ಕಾರ್ಯ ಆರಂಭಿಸಿದ್ದಾರೆ. ಆದರೆ ಬೆಳಗ್ಗೆ ಚಿಲ್ಲರೆ ವಿಚಾರಕ್ಕೆ ಪ್ರಯಾಣಿಕರೊಬ್ಬರು, ನಿರ್ವಾಹಕ ದೇವದಾಸ್ ಜೊತೆ ಜಗಳ ಮಾಡಿದ್ದಾರೆ. ತಾನು 500 ರೂಪಾಯಿ ಕೊಟ್ಟಿರುವುದಾಗಿ ಪ್ರಯಾಣಿಕ ವಾದಿಸಿದ್ದಾನೆ. ಇದಕ್ಕೆ ನಿರ್ವಾಹಕ ದೇವಸಾದ್ ಇಲ್ಲ ನೀವು ಕೊಟ್ಟಿರುವುದು 100 ರೂ. ಎಂದು ಹೇಳಿದ್ದಾರೆ. ಆದರೆ ಪ್ರಯಾಣಿಕ ನೀನು 500 ರೂ. ಪಡೆದು ಸುಳ್ಳು ಹೇಳುತ್ತಿದ್ದೀಯ ಎಂದು ಆರೋಪಿಸಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಅತಿರೇಕಕ್ಕೇರಿದೆ. ಇದಾದ ಬಳಿಕ ಕಡಬ ಠಾಣೆ ಪೊಲೀಸರು ಪ್ರಯಾಣಿಕ- ಕಂಡಕ್ಟರ್ ಜತೆ ಸಂಧಾನ ಮಾಡಿ ಕಳುಹಿಸಿದ್ದಾರೆ. ಆದರೆ ಪ್ರಯಾಣಿಕನ ಆರೋಪದಿಂದ ನೊಂದ ನಿರ್ವಾಹಕ ಬಸ್ ಸುಬ್ರಹ್ಮಣ್ಯ ಬಳಿ ಬರುತ್ತಿದ್ದಂತೆ ಕುಮಾರಧಾರ ನದಿಗೆ ಹಾರಿದ್ದಾರೆ. ದೇವದಾಸ್ ಶವಕ್ಕಾಗಿ ಕುಮಾರಧಾರಾ ನದಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ..