
ಹಾವೇರಿ(ಅ.20): ಹಾವೇರಿ ಜಿಲ್ಲೆಯ ಕಾಲೇಜುಗಳಲ್ಲಿ ನಡೆಯುತ್ತಿರುವ ಕೇಸರಿ ಶಾಲು ಹಾಗೂ ಬೂರ್ಖಾ ನಡುವಿನ ವಿವಾದ ತಾರಕಕ್ಕೇರುತ್ತಿದೆ. ಸಮಾಜದ ಅಶಾಂತಿಗೆ ಇದು ಕಾರಣವಾಗುತ್ತಿದ್ದು, ಪಾಲಕರು, ಜಿಲ್ಲಾಡಳಿತ ಹಾಗೂ ಕಾಲೇಜು ಆಡಳಿತ ಮಂಡಳಿಯವರು ದಿಟ್ಟ ನಿರ್ಧಾರಕ್ಕೆ ಬಂದು ಈ ವಿವಾದಕ್ಕೆ ಬ್ರೇಕ್ ಹಾಕಬೇಕಿದೆ.
ಕಳೆದ ಕೆಲವು ದಿನಗಳಿಂದ ಹಾವೇರಿ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ವಿವಾದ ತಾರಕಕ್ಕೇರುತ್ತಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ತೆಗೆದು ಕಾಲೇಜಿಗೆ ಬರುವಂತೆ ಆಗ್ರಹಿಸಿ, ಹಿಂದೂಪರ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ವಿನೂತನ ಧರಣಿ ನಡೆಸುತ್ತಿದ್ದಾರೆ. ಹಾನಗಲ್, ಬಂಕಾಪುರ, ಅಕ್ಕಿ ಆಲೂರು ನಂತರ ಈಗ ಹಿರೇಕೆರೂರು ಪಟ್ಟಣದ ಬಿ.ಆರ್ ತಂಬಾಕದ ಪದವಿ ಕಾಲೇಜಿನಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಂಡಿದೆ. ನಿನ್ನೆ ಮುಸ್ಲಿಂ ವಿದ್ಯಾರ್ಥಿನಿಯರು ಪಾಲಕರ ಜತೆಗೆ ಸೇರಿಕೊಂಡು ಪ್ರತಿಭಟನಾ ಮೆರವಣಿಗೆ ಮಾಡಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದರು. ಯಾವುದೇ ಕಾರಣಕ್ಕೂ ಬೂರ್ಖಾ ತೆಗೆಯಲ್ಲ, ಇದು ತಮ್ಮ ಸಂಪ್ರದಾಯ ಆದ್ರೆ, ಕೆಲವರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ನಿನ್ನೆ ಮಸ್ಲಿಂ ವಿದ್ಯಾರ್ಥಿನಿಯರು ತಹಶೀಲ್ದಾರ್'ಗೆ ಮನವಿ ಸಲ್ಲಿಸಿದ್ದನ್ನು ಖಂಡಿಸಿ ಇಂದು ಹಿಂದೂಪರ ವಿದ್ಯಾರ್ಥಿನಿಯರು, ಬಣ್ಣ ಬಣ್ಣದ ಸೀರೆಯುಟ್ಟು ಕಾಲೇಜು ಅಂಗಳ ಪ್ರವೇಶ ಮಾಡಿದ್ದಾರೆ. ಇನ್ನೂ ಹುಡುಗರು ಬಿಳಿ ಅಂಗಿ, ಪಂಚೆ, ದೋತ್ರ, ಪೇಟಾ ಧರಿಸಿದ್ದಾರೆ. ಸಮವಸ್ತ್ರ ಕಡ್ಡಾಯಗೊಳಿಸುವವರೆಗೆ ಕೇಸರಿ ಶಾಲು ಹಾಗೂ ಸೀರೆಯುಟ್ಟುಕೊಂಡೆ ಕಾಲೇಜಿಗೆ ಬರುತ್ತೇವೆ. ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಲಿ ಎಂದು ಪಟ್ಟು ಹಿಡಿದಿದ್ದಾರೆ.
ಕಳೆದ ಕೇಲವು ದಿನಗಳಿಂದ ಕಾಲೇಜಿನಲ್ಲಿ ಈ ವಿವಾದ ನಡೆಯುತ್ತಿರುವುದರಿಂದ ಯಾವುದೇ ತರಗತಿಗಳು ನಡೆಯುತ್ತಿಲ್ಲ, ಕಾಲೇಜಿನವರು ಸಮವಸ್ತ್ರ ಕಡ್ಡಾಯವೆಂದು ಹೇಳಿದ್ದಾರೆ. ಇಂದು ಪಾಲಕರ ಸಭೆಯನ್ನು ಕರೆದಿದ್ದಾರೆ. ಆದರೆ ಇಲ್ಲಿ ಜಿಲ್ಲಾಡಳಿತ, ಕಾಲೇಜು ಆಡಳೀತ ಮಂಡಳಿ ಹಾಗೂ ಪಾಲಕರು ಚರ್ಚಿಸಿ ಈ ವಿವಾದಕ್ಕೆ ಅಂತ್ಯ ಹಾಡಬೇಕಿದೆ. ಇಲ್ಲದಿದ್ದಲ್ಲಿ ಇದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎನ್ನುವ ಆತಂಕ ಜನರದ್ದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.