ಉಡುಪಿ(ಅ.05): ಏಕಾಂಗಿ ಹೋಗುವಾಗ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುವ ಅಭ್ಯಾಸ ಇದೆಯಾ, ಹಾಗಾದ್ರೆ ಎಚ್ಚರ! ಮೊಬೈಲ್ ಹಾಡಿನ ಗುಂಗಿನಲ್ಲಿ ಜಗತ್ತನ್ನೇ ತೊರೆದ ಯುವಕನ ಕಥೆ ಇದು.
ಜಗತ್ ಹೆಗ್ಡೆ, ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಪ್ರತಿಷ್ಟಿತ ಕಂಪೆನಿಯಲ್ಲಿ ತಿಂಗಳ ಹಿಂದಷ್ಟೇ ಕೆಲಸ ಪಡೆದಿದ್ದ. ಪ್ರೀತಿಯ ಅಜ್ಜಿಯನ್ನು ನವರಾತ್ರಿ ಪೂಜೆಗೆ ಅಂತ ಉಡುಪಿಯ ಕುಂದಾಪುರದ ಕುಂದ ಬಾರಂದಾಡಿಗೆ ಕರಕೊಂಡು ಬಂದಿದ್ದ. ಈತನಿಗೆ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಮೆಲೋಡಿಯಸ್ ಸಾಂಗ್ ಕೇಳುತ್ತಾ ವಾಕ್ ಮಾಡುವ ಹುಚ್ಚು.
ನಿನ್ನೆಯೂ ಇದೇ ರೀತಿ ರೈಲ್ವೇ ಹಳಿ ಪಕ್ಕ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳಿಕೊಂಡು ಹೋಗಿದ್ದಾನೆ. ಈ ವೇಳೆ ಹಿಂದಿನಿಂದ ರೈಲು ಬಂದಿದೆ. ರೈಲು ಎಷ್ಟೇ ಹಾರನ್ ಮಾಡಿದರೂ ಈತನಿಗೆ ಅರಿವಿಗೆ ಬಂದಿಲ್ಲ. ಕೊನೆಗೆ ರೈಲು ಇವನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಜಗತ್ ಓರ್ವ ಪ್ರತಿಭಾವಂತ ಹುಡುಗ. ಹೈಕೋಟ್ ನಿವೃತ್ತ ನ್ಯಾಯಮೂರ್ತಿ ಜಗನ್ನಾಥ್ ಹೆಗ್ಡೆ ಈತನ ಅಜ್ಜ. ಮನೆಯವರೆಲ್ಲಾ ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದು, ಈತ ಮನ ಸಂತೋಷಕ್ಕೆ ಕುಂದಬಾರಂದಾಡಿಗೆ ಬರುತ್ತಿದ್ದರು. ಇದೀಗ ಈತನ ಸಾವು ಮನೆಯವರ ಸಂತೋಷವನ್ನೇ ಕಸಿದುಬಿಟ್ಟಿದೆ..
ಈ ಘಟನೆಯನ್ನಾದರೂ ನೋಡಿ ಇನ್ನು ಮುಂದೆ ರಸ್ತೆಯಲ್ಲೋ, ಇಲ್ಲ ರೈಲ್ವೆ ಹಳಿಯ ಪಕ್ಕದಲ್ಲೋ ನಡೆದು ಹೋಗುವಾಗ ಇಯರ್ ಫೋನ್ ಬಳಸಬೇಡಿ. ಈ ದುರಂತ ಯುವ ಜನಾಂಗಕ್ಕೆ ಒಂದು ಎಚ್ಚರಿಕೆಯ ಸಂದೇಶವೂ ಹೌದು.