ವಾಜಪೇಯಿ ಅವರ ಅಸ್ಥಿ ವಿಸರ್ಜನೆಯ ವೇಳೆ ಬಿಜೆಪಿಯ ಮುಖಂಡರು ಇದ್ದ ದೋಣಿ ಮಗುಚಿ ಸ್ವಲ್ಪದರಲ್ಲೇ ಭಾರೀ ಅವಘಡದಿಂದ ಪಾರಾದ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ.
ಲಖನೌ: ಮಾಜಿ ಪ್ರಧಾನಿ ವಾಜಪೇಯಿ ಅವರ ಅಸ್ಥಿ ವಿಸರ್ಜನೆಯ ವೇಳೆ ಬಿಜೆಪಿಯ ಓರ್ವ ಸಂಸದ ಹಾಗೂ ಶಾಸಕರೊಬ್ಬರು ಇದ್ದ ದೋಣಿ ಮಗುಚಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ಶನಿವಾರ ನಡೆದಿದೆ.
ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ರಾಮಪತಿ ರಾಮ್ ತ್ರಿಪಾಠಿ, ಸಂಸದ ಹರೀಶ್ ದ್ವಿವೇದಿ, ಶಾಸಕ ಡೇಸ್ ರಾಮ್ ಚೌಧರಿ, ಹಿರಿಯ ಬಿಜೆಪಿ ಮುಖಂಡರು ಮತ್ತು ಎಸ್ಪಿ ದಿಲೀಪ್ ಕುಮಾರ್ ಅವರು ದೋಣಿಯಲ್ಲಿ ಅಸ್ಥಿ ವಿಸರ್ಜನೆಗೆ ತೆರಳಿದ್ದರು. ಆದರೆ ಭಾರ ಹೆಚ್ಚಾದ ಕಾರಣ, ಸ್ವಲ್ಪ ದೂರ ಸಾಗುತ್ತಲೇ ದೋಣಿ ಮಗುಚಿ ಎಲ್ಲರೂ ಕೆಳಗೆ ಬಿದ್ದಿದ್ದಾರೆ.
ತಕ್ಷಣವೇ ಪೊಲೀಸ್ ಸಿಬ್ಬಂದಿ ನದಿಗೆ ಹಾರಿ ಗಣ್ಯರನ್ನು ರಕ್ಷಿಸಿದ್ದಾರೆ. ದಡದ ಸಮೀಪವೇ ಈ ಘಟನೆ ನಡೆದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.