ಬಿಜೆಪಿ ನಾಯಕ ಅರೆಸ್ಟ್

By Web DeskFirst Published Nov 19, 2018, 9:30 AM IST
Highlights

ಬಿಜೆಪಿ ನಾಯಕನೋರ್ನ ಬಂಧನವಾಗಿದೆ. ಪೊಲೀಸರಿಂದ ಬಿಜೆಪಿ ನಾಯಕನ ಬಂಧನವಾಗಿರುವ ಹಿನ್ನೆಲೆಯಲ್ಲಿ ಸದ್ಯ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.  ಶಬರಿಮಲೆಯಲ್ಲಿ ಶಾಂತ ವಾತಾವರಣವಿದ್ದರೂ ದೇವಾಲಯಕ್ಕೆ ತೆರಳುತ್ತಿದ್ದ ಬಿಜೆಪಿ ನಾಯಕ ಸುರೇಂದ್ರನವನ್ನು ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಶಬರಿಮಲೆ: ಕೇರಳದ ಪ್ರಸಿದ್ಧ ಶ್ರೀಕ್ಷೇತ್ರ ಶಬರಿಮಲೆಯಲ್ಲಿ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಭಾನುವಾರವೂ ತಿಕ್ಕಾಟ ಮುಂದುವರಿಯಿತು. ದೇವಾಲಯದಲ್ಲಿ ಈ ದಿವಸ ಬಹುತೇಕ ಶಾಂತ ವಾತಾವರಣ ಇದ್ದರೂ ಕೂಡ, ದೇವಾಲಯಕ್ಕೆ ತೆರಳುತ್ತಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್‌ ಅವರನ್ನು ಪೊಲೀಸರು ಬಂಧಿಸಿರುವುದು ಕೇರಳವನ್ನು ಉದ್ವಿಗ್ನ ಸ್ಥಿತಿಯಲ್ಲಿ ಇರಿಸಿದೆ.

ವಾರ್ಷಿಕ ಯಾತ್ರೆಗಾಗಿ ತೆರೆದಿರುವ ಅಯ್ಯಪ್ಪ ದೇವಾಲಯಕ್ಕೆ ಭಾನುವಾರ ಭಾರಿ ಸಂಖ್ಯೆಯ ಭಕ್ತರ ದಂಡು ಹರಿದು ಬಂತಾದರೂ ಪರಿಸ್ಥಿತಿ ಶಾಂತವಾಗಿತ್ತು. ಸಂದಣಿ ಎಷ್ಟಿತ್ತೆಂದರೆ ಸನ್ನಿಧಾನದಲ್ಲಿ ಭಕ್ತರಿಗೆ ಬಹುಹೊತ್ತು ನಿಲ್ಲಲಾಗಲಿಲ್ಲ.

ಈ ನಡುವೆ, ದೇವಾಲಯಕ್ಕೆ ತೆರಳುತ್ತಿದ್ದ ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್‌ ಅವರನ್ನು ಶನಿವಾರ ರಾತ್ರಿಯೇ ವಶಕ್ಕೆ ಪಡೆಯಲಾಯಿತು. ಬಳಿಕ ಅವರನ್ನು ಕೊಟ್ಟಾರಕ ಸಬ್‌ ಜೈಲಿಗೆ ಕಳಿಸಲಾಯಿತು. ಸುರೇಂದ್ರನ್‌ ಅವರು ದೇವಾಲಯದಲ್ಲಿ ಗೊಂದಲ ಸೃಷ್ಟಿಸುವ ಸಾಧ್ಯತೆ ಇದ್ದ ಕಾರಣ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಇವರ ಬಂಧನ ಖಂಡಿಸಿ ಕೇರಳದಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮೇರಿ ಸ್ವೀಟಿಗೆ ತಡೆ: 

ಗಲ್ಫ್ ನಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದ ಮೇರಿ ಸ್ವೀಟಿ ಎಂಬ 46ರ ಮಹಿಳೆ ಅಯ್ಯಪ್ಪ ದೇವಾಲಯ ಪ್ರವೇಶಿಸಲು 2ನೇ ಬಾರಿ ವಿಫಲ ಯತ್ನ ನಡೆಸಿದಳು. ತಿರುವನಂತಪುರದವಳಾದ ಈಕೆ ಚೆಂಗನ್ನೂರಿಗೆ ರೈಲಿನಲ್ಲಿ ಆಗಮಿಸಿ ಅಲ್ಲಿಂದ ಶಬರಿಮಲೆಗೆ ಬಸ್ಸೇರಿ ಹೊರಟಿದ್ದಳು. ಆದರೆ ಆಕೆಯ ವಿರುದ್ಧ ಹಿಂದೂಪರ ಕಾರ್ಯಕರ್ತರು ಭಜನೆ ಆರಂಭಿಸಿದರು. ಕೊನೆಗೆ ಪೊಲೀಸರು ಆಕೆಯನ್ನು ಮನವೊಲಿಸಿ ವಾಪಸು ಊರಿಗೆ ಕಳಿಸಿದರು. ಅಕ್ಟೋಬರ್‌ 19ರಂದೂ ಈ ಮಹಿಳೆ ಶಬರಿಮಲೆ ಪ್ರವೇಶಕ್ಕೆ ಬಂದಿದ್ದರು.

click me!