ಪಂಚರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಅನಿರೀಕ್ಷಿತ ಸೋಲುಂಡ ಬಿಜೆಪಿ ಎಚ್ಚೆತ್ತುಕೊಂಡಿದೆ. ವಿಧಾನಸಭಾ ಚುನಾವಣೆಗಳಲ್ಲಿ ಎದುರಿಸಿರುವ ಪರಿಸ್ಥಿತಿ ಮತ್ತೊಮ್ಮೆ ತಲೆದೋರಬಾರದೆಂಬ ನಿಟ್ಟಿನಲ್ಲಿ ರೆಡಿಯಾಗುತ್ತಿರುವ ಕಮಲ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲಾ ತಯಾರಿ ನಡೆಸಿದೆ.
ನವದೆಹಲಿ[ಡಿ.14]: 2019ರ ಲೋಕಸಭೆ ಚುನಾವಣೆ ಸಿದ್ಧತೆಗಾಗಿ ಮುಂದಿನ ವರ್ಷದ ಜನವರಿ 11-12ರಂದು ಎರಡು ದಿನಗಳ ರಾಷ್ಟ್ರೀಯ ಮಂಡಳಿ ಸಭೆ ಸೇರಿದಂತೆ ರಾಷ್ಟ್ರಾದಾದ್ಯಂತ ಪಕ್ಷದ ವಿವಿಧ ಘಟಕಗಳ ಜೊತೆ ಬಿಜೆಪಿ ಸರಣಿ ಸಭೆ ನಡೆಸಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಗುರುವಾರ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್ ಅವರು, ‘ರಾಷ್ಟ್ರಾದ್ಯಂತ ಬಿಜೆಪಿ ವಿವಿಧ ಸಭೆಗಳನ್ನು ಹಮ್ಮಿಕೊಳ್ಳಲಿದೆ. ಅವುಗಳಲ್ಲಿ ಜ.19-20ರಂದು ನಾಗ್ಪುರದಲ್ಲಿ ನಿಗದಿಯಾಗಿರುವ ಪರಿಶಿಷ್ಟಜಾತಿ ಮೋರ್ಚಾ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಾಲ್ಗೊಳ್ಳಲಿದ್ದಾರೆ,’ ಎಂದು ಹೇಳಿದ್ದಾರೆ
ಅಲ್ಲದೆ, ಫೆ.2-3ರಂದು ಭುವನೇಶ್ವರದಲ್ಲಿ ಪರಿಶಿಷ್ಟಪಂಗಡ ಮೋರ್ಚಾ, ಫೆ.15-16ರಂದು ಪಟನಾದಲ್ಲಿ ಇತರೆ ಹಿಂದುಳಿದ ಮೋರ್ಚಾ ಸೇರಿದಂತೆ ಇತರ ಸರಣಿ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಯಾದವ್ ಅವರು ಮಾಹಿತಿ ನೀಡಿದರು.