ಪಂಚಾಚಾರ್ಯರ ಮೂಲ ಪ್ರಶ್ನಿಸಿದ್ದ ನಾಗನೂರು ಮಠದ ಶ್ರೀಗಳಿಗೆ ಬೆದರಿಕೆ ಕರೆ

By Suvarna Web DeskFirst Published Jul 30, 2017, 7:33 PM IST
Highlights

"ಪಂಚಾಚಾರ್ಯರು ಲಿಂಗದಿಂದ ಹುಟ್ಟಲು ಸಾದ್ಯವೇ? ಇದನ್ನು ವಿಜ್ಞಾನ ಒಪ್ಪುತ್ತದೆಯೇ? ವೇದ ಸುಳ್ಳು, ವಚನವೇ ಸತ್ಯ" ಎಂದು ವೀರಶೈವ ಪಂಥದ ಪಂಚಪೀಠದ ವಿರುದ್ದ ಹರಿಹಾಯ್ದಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಮಿಜಿಗೆ ಬೆದರಿಕೆ ಕರೆ ಬಂದಿರುವ ಸಾಧ್ಯತೆ ಇದೆ.

ಬೆಳಗಾವಿ(ಜುಲೈ 30): ಪಂಚಾಚಾರ್ಯ ಶ್ರೀಗಳ ಮೂಲವನ್ನ ಪ್ರಶ್ನೆ ಮಾಡಿದ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಶ್ರೀಗಳಿಗೆ ಬೆದರಿಕೆ ಕರೆಯೊಂದು ಬಂದಿದ್ದು, ಲಿಂಗಾಯತ ಮತ್ತು ವಿರಶೈವರ ನಡುವಿನ ತಿಕ್ಕಾಟ ಇನ್ನಷ್ಟು ತಾರಕಕ್ಕೇರಿದೆ. ಶ್ರೀಗಳಿಗೆ ಬೆದರಿಕೆ ಹಾಕಿ ಕಲಬುರ್ಗಿಯ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಪ್'ನಲ್ಲಿ ವಾಯ್ಸ್ ಎಸ್ಸೆಮ್ಮೆಸ್ ಕಳುಹಿಸಿದ್ದಾನೆ. ನಿಮ್ಮ ಅಜ್ಜ ಮತ್ತು ಅಪ್ಪನ ಮೂಲ ಮೊದಲು ತಿಳಿದುಕೊ ಎಂದು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿಗೆ ಅವಾಚ್ಯವಾಗಿ ಬೈದಿರುವ ಆಡಿಯೋವೊಂದು ಸಾಮಾಜಿಕ‌ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮೊನ್ನೆ ಜುಲೈ 27ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ‌ ಸಿದ್ದರಾಮ ಶ್ರೀಗಳು, "ಪಂಚಾಚಾರ್ಯರು ಲಿಂಗದಿಂದ ಹುಟ್ಟಲು ಸಾದ್ಯವೇ? ಇದನ್ನು ವಿಜ್ಞಾನ ಒಪ್ಪುತ್ತದೆಯೇ? ವೇದ ಸುಳ್ಳು, ವಚನವೇ ಸತ್ಯ" ಎಂದು ವೀರಶೈವ ಪಂಥದ ಪಂಚಪೀಠದ ವಿರುದ್ದ ಹರಿಹಾಯ್ದಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಮಿಜಿಗೆ ಬೆದರಿಕೆ ಕರೆ ಬಂದಿರುವ ಸಾಧ್ಯತೆ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮ ಸ್ವಾಮಿಗಳು, ಇಂತಹ ಬೆದರಿಕೆಗೆ ತಾವು ಬಗ್ಗುವುದಿಲ್ಲ, ಆ ವ್ಯಕ್ತಿ ವಿರುದ್ಧ ಪ್ರಕರಣವನ್ನೂ ದಾಖಲು ಮಾಡುವುದಿಲ್ಲ. ಆದರೆ, ಹೋರಾಟ ಮಾತ್ರ ಅಡ್ಡಿಯಿಲ್ಲದೇ ಮುಂದುವರೆಯುತ್ತದೆ ಎಂದರು.

ವರದಿ: ಮಂಜುನಾಥ್ ಎಚ್.ಪಾಟೀಲ್, ಸುವರ್ಣನ್ಯೂಸ್, ಬೆಳಗಾವಿ

click me!