
ನವದೆಹಲಿ[ಅ.26]: ಮಹಾರಾಷ್ಟ್ರ ಮತ್ತು ಹರಾರಯಣ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ದಕ್ಕದೇ ಇದ್ದರೂ, ಸ್ಥಾನಗಳಿಕೆಯಲ್ಲಿ ಹೆಚ್ಚಳವಾಗಿರುವುದು ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮೂಡಿಸಿದೆ. ಆದರೆ ಎರಡು ರಾಜ್ಯಗಳ ಚುನಾವಣಾ ಪ್ರಚಾರದಿಂದ ಬಹುತೇಕ ದೂರವೇ ಇದ್ದ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಈ ಯಶಸ್ಸಿನ ಶ್ರೇಯ ನೀಡುವ ಯತ್ನವೊಂದು ಶುಕ್ರವಾರ ನಡೆದಿದ್ದು, ಅಚ್ಚರಿಗೆ ಕಾರಣವಾಗಿದೆ. ಜೊತೆಗೆ ಇದು ಪಕ್ಷದಲ್ಲಿನ ಹಿರಿ-ಕಿರಿಯರ ಸಮರಕ್ಕೆ ಸಾಕ್ಷಿ ಎನ್ನಲಾಗಿದೆ.
ಕಾಂಗ್ರೆಸ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಶುಕ್ರವಾರ 2 ನಿಮಿಷದ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ಉಭಯ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವಿಗೆ ರಾಹುಲ್ ಅವರೇ ಕಾರಣ. ಅದರಲ್ಲೂ ಹರಾರಯಣದ ಗೆಲುವು ಅತ್ಯದ್ಭುತ ಎಂದು ತಿಳಿಸಲಾಗಿದೆ. ಚುನಾವಣಾ ಫಲಿತಾಂಶವು ಪ್ರಜಾಪ್ರಭುತ್ವ ರಕ್ಷಣೆ ಮಾಡಬೇಕೆಂಬ ತಮ್ಮ ಹೋರಾಟಕ್ಕೆ ಜನ ನೀಡಿದ ಬೆಂಬಲವನ್ನು ಸೂಚಿಸುತ್ತದೆ. ಮಹಾರಾಷ್ಟ್ರ ಮತ್ತು ಹರಾರಯಣದ ಜನತೆ ಪ್ರಜಾಪ್ರಭುತ್ವವನ್ನು ಸರಿದಾರಿಗೆ ತರುವ ಯತ್ನ ಮಾಡಿದ್ದಾರೆ ಎಂಬ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಜನಸಮೂಹದೊಂದಿಗೆ ಚರ್ಚಿಸುತ್ತಿರುವ ರಾಹುಲ್ ಗಾಂಧಿ ಅವರ ಪ್ರಧಾನ ಫೋಟೋಗಳನ್ನೇ ಹಾಕಲಾಗಿದೆ.
ಆದರೆ, ವಾಸ್ತವ ಸ್ಥಿತಿ ಎಂದರೆ, ಹರಾರಯಣದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಹರಾರಯಣ ಮಾಜಿ ಸಿಎಂ ಭೂಪಿಂದರ್ ಹೂಡಾ, ಹರಾರಯಣ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಶೆಲ್ಜಾ, ಹಿರಿಯ ನಾಯಕರಾದ ಗುಲಾಂ ನಬೀ ಆಜಾದ್, ಅಹ್ಮದ್ ಪಟೇಲ್ ಸೇರಿದಂತೆ ಇತರ ಹಿರಿಯ ನಾಯಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗೆಯೇ, ಮಹಾರಾಷ್ಟ್ರದಲ್ಲಿ ಮಾಜಿ ಸಿಎಂ ಅಶೋಕ್ ಚೌಹಾಣ್, ಬಾಲಾಸಾಹೇಬ್ ಥಾರಟ್, ಏಕನಾಥ್ ಗಾಯಕ್ವಾಡ್ ಸೇರಿದಂತೆ ಇತರರು ಪಕ್ಷದ ಗೆಲುವಿಗಾಗಿ ಕೆಲಸ ಮಾಡಿದ್ದಾರೆ.
ಹೀಗಿರುವಾಗ ಏಕಾಏಕಿ ಎರಡೂ ರಾಜ್ಯಗಳಲ್ಲಿ ಪಕ್ಷದ ಸಣ್ಣ ಯಶಸ್ಸಿಗೆ ರಾಹುಲ್ ಕಾರಣ ಎಂದು ಬಿಂಬಿಸಲು ಹೊರಟಿರುವುದು ಪಕ್ಷದ ಹಿರಿಯ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರು ರಾಜೀನಾಮೆ ಸಲ್ಲಿಸಿದ್ದರು. ಇದಾದ ಬಳಿಕ ಹಲವು ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡು, ರಾಹುಲ್ ಮಾಡಿದ್ದ ಹಲವು ನೇಮಕಾತಿಯನ್ನು ರದ್ದು ಮಾಡಿದ್ದರು. ಜೊತೆಗೆ ಮತ್ತೆ ಹಿರಿಯ ನಾಯಕರಿಗೆ ಮಣೆ ಹಾಕಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.