
ನವದೆಹಲಿ(ಸೆ. 04): ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎರಡನೇ ಬಾರಿ ಕೋರ್ಟ್'ನಿಂದ ದಂಡ ಪಡೆದಿದ್ದಾರೆ. ಅರುಣ್ ಜೇಟ್ಲಿ ದಾಖಲಿಸಿರುವ ಹತ್ತು ಕೋಟಿ ರೂ ಮಾನಹಾನಿ ಮೊಕದ್ದಮೆ ವಿಚಾರದಲ್ಲಿ ಸರಿಯಾದ ಸಮಯಕ್ಕೆ ಕೋರ್ಟ್'ಗೆ ಉತ್ತರ ಸಲ್ಲಿಸದೇ ವಿಳಂಬ ಮಾಡಿದ್ದಕ್ಕಾಗಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್'ಗೆ ದಿಲ್ಲಿ ಹೈಕೋರ್ಟ್ 5 ಸಾವಿರ ರು. ದಂಡ ವಿಧಿಸಿದೆ. ಕೋರ್ಟ್'ನ ಸಮಯ ಹಾಳು ಮಾಡಿದ್ದಕ್ಕಾಗಿ ಈ ದಂಡ ಹಾಕಲಾಗಿದೆ. ಜಂಟಿ ರಿಜಿಸ್ಟ್ರಾರ್ ಪಂಕಜ್ ಗುಪ್ತಾ ಅವರು 5 ಸಾವಿರ ರೂಪಾಯಿಯನ್ನು ಸೇನಾ ಕಲ್ಯಾಣ ನಿಧಿಗೆ ಕೊಡುವಂತೆ ಕೇಜ್ರಿವಾಲ್'ಗೆ ಸೂಚನೆ ನೀಡಿದ್ದಾರೆ.
ಜುಲೈ 26ರೊಳಗೆ ಕೋರ್ಟ್ ಸೂಚನೆಗೆ ಉತ್ತರ ಕೊಡಬೇಕಿದ್ದರೂ ಕೇಜ್ರಿವಾಲ್ ಎರಡು ವಾರ ವಿಳಂಬ ಮಾಡಿದರು. ದಿಲ್ಲಿ ಸಿಎಂ ಬೇಕಂತಲೇ ವಿಳಂಬ ಮಾಡುತ್ತಿದ್ದಾರೆ, ಎಂದು ಅರುಣ್ ಜೇಟ್ಲಿ ಪರ ವಕೀಲ ಮಾಣಿಕ್ ಡೋಂಗ್ರಾ ಅವರು ಹೈಕೋರ್ಟ್'ನಲ್ಲಿ ವಾದಿಸಿದರು. ಹೈಕೋರ್ಟ್ ರಿಜಿಸ್ಟ್ರಿಯಿಂದ ಎರಡು ಸಂದರ್ಭದಲ್ಲಿ ತಾಂತ್ರಿಕ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಲಿಖಿತ ಉತ್ತರ ಸಲ್ಲಿಸುವಲ್ಲಿ ವಿಳಂಬವಾಗಿದ್ದು, ಮನ್ನಿಸಬೇಕು ಎಂದು ಕೇಜ್ರಿವಾಲ್ ಪರ ವಕೀಲರು ಮನವಿ ಮಾಡಿಕೊಂಡರು. ವಾದ ಪ್ರತಿವಾದವನ್ನು ಆಲಿಸಿದ ಕೋರ್ಟ್, ಕೇಜ್ರಿವಾಲ್ 5 ಸಾವಿರ ರೂ ಹಣವನ್ನು ಭರಿಸಬೇಕಾಗುತ್ತದೆ ಎಂದು ತೀರ್ಪು ನೀಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.