ಎಎಪಿಗೆ ಬರಬೇಕಿದ್ದ ಶೇ.25-30ರಷ್ಟು ಮತಗಳು ಬಿಜೆಪಿಗೆ ವರ್ಗಾವಣೆಗೊಂಡಿವೆ. ಎಎಪಿ ಕೇವಲ 20 ಸ್ಥಾನ ಗಳಿಸಿರುವುದು ನಂಬಲು ಸಾಧ್ಯವಾಗುತ್ತಿಲ್ಲ.
- ಅರವಿಂದ್ ಕೇಜ್ರಿವಾಲ್
ನವದೆಹಲಿ(ಮಾ.15): ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಕಡಿಮೆ ಮತ ಪಡೆದಿರುವುದನ್ನು ಗಮನಿಸಿದರೆ ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಮೇಲೆ ಅನುಮಾನ ಮೂಡುವಂತೆ ಮಾಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಪಂಚರಾಜ್ಯಗಳ ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಚುನಾವಣೆಗೂ ಮುನ್ನ ಸಾಕಷ್ಟು ರಾಜಕೀಯ ಪರಿಣಿತರು ಬಿಜೆಪಿ ಹಾಗೂ ಶಿರೋಮಣಿ ಅಕಾಲಿದಳಕ್ಕೆ ಆಡಳಿತ ವಿರೋಧಿ ಅಲೆಯಿದ್ದು ಆಮ್ ಆದ್ಮಿ ಪಕ್ಷ ಭರ್ಜರಿ ಜಯಭೇರಿ ಬಾರಿಸಲಿದೆ ಎಂದು ವಿಶ್ಲೇಷಿಸಿದ್ದರು. ಆದರೆ ಎಎಪಿ 25% ಮತಗಳನ್ನು ಪಡೆದರೆ, ಬಿಜೆಪಿ-ಎಸ್'ಎಡಿ ಮೈತ್ರಿಕೂಟ 31% ಮತಗಳನ್ನು ಪಡೆದಿದೆ. ಎಎಪಿಗೆ ಬರಬೇಕಿದ್ದ ಶೇ.25-30ರಷ್ಟು ಮತಗಳು ಬಿಜೆಪಿಗೆ ವರ್ಗಾವಣೆಗೊಂಡಿವೆ. ಎಎಪಿ ಕೇವಲ 20 ಸ್ಥಾನ ಗಳಿಸಿರುವುದು ನಂಬಲು ಸಾಧ್ಯವಾಗುತ್ತಿಲ್ಲ. ಫಲಿತಾಂಶ ಈ ರೀತಿ ವ್ಯತಿರಿಕ್ತವಾಗಲು ಹೇಗೆ ಸಾಧ್ಯ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೇಜ್ರಿವಾಲ್ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಹೀಗಾಗಿಯೇ ಇವಿಎಂ ಸರಿಯಿಲ್ಲ ಎಂದು ಆರೋಪಿಸುತ್ತಿದ್ದಾರೆ. ಹೀಗಾಗಿ ಅವರು ವಿಪಶ್ಯನ ಯೋಗ ಕೇಂದ್ರಕ್ಕೆ ಸೇರುವುದು ಒಳಿತು ಎಂದು ಕೇಂದ್ರ ಸಚಿವೆ ಹರ್ಸಿಮೃತ್ ಕೌರ್ ಬಾದಲ್ ವ್ಯಂಗ್ಯವಾಡಿದ್ದಾರೆ.