
ಬೆಂಗಳೂರು(ಮಾ.21): ಹಗರಣಗಳ ಸುಳಿಯಲ್ಲಿ ಸಿಲುಕಿರುವ ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಈಗ ಮತ್ತೊಂದು ಆರೋಪಕ್ಕೆ ಗುರಿಯಾಗಿದೆ. ಡಿಜಿಟಲ್ ಇ ವ್ಯಾಲ್ಯುಯೇಷನ್ ಕಾರ್ಯ ನಿರ್ವಹಿಸಲು ಕರೆದಿದ್ದ ಟೆಂಡರ್ನಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅಲ್ಲದೆ, ಅತಿ ಹೆಚ್ಚು ದರ ನಮೂದಿಸಿರುವ ಕಂಪನಿಗೆ ಟೆಂಡರ್ ಭಾಗ್ಯ ಕರುಣಿಸಿರುವ ರಾಜೀವ್ ಗಾಂಧಿ ಆರೋಗ್ಯ ವಿ.ವಿ., ಕಂಪನಿಯೊಂದಿಗೆ ದರ ಸಂಧಾನಕ್ಕಿಳಿದು ಕಡೆಯಲ್ಲಿ ಕೇವಲ 5 ಪೈಸೆಗೆ ಸಂಧಾನ ನಡೆಸಿರುವುದು ದಾಖಲೆಗಳಿಂದ ತಿಳಿದು ಬಂದಿದೆ.
ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಸೇರಿದಂತೆ ಪರೀಕ್ಷೆ ಮತ್ತು ಪರೀಕ್ಷಾ ನಂತರದ ಕಾರ್ಯುನಿರ್ವಹಿಸುವ ಸಲುವಾಗಿ ಡಿಜಿಟಲ್ ಇ ವ್ಯಾಲ್ಯುಯೇಷನ್ ಕಾರ್ಯಕ್ಕೆ ರಾಜೀವ್ಗಾಂಧಿ ಆರೋಗ್ಯ ವಿ.ವಿ. ಟೆಂಡರ್ ಕರೆದಿತ್ತು. ಇದರಲ್ಲಿ ಮೆರಿ ಟ್ರ್ಯಾಕ್ ಸರ್ವಿಸಸ್ ಲಿಮಿಟೆಡ್, ಮೈಂಡ್ ಲಾಜಿಕ್ಸ್ ಮತ್ತು ಎಡುಕ್ವಿಟಿ ಕಂಪನಿ ಟೆಂಡರ್ನಲ್ಇ ಭಾಗವಹಿಸಿತ್ತು. ಈ ಮೂರು ಕಂಪನಿಗಳ ಪೈಕಿ ಮೆರಿ ಟ್ರ್ಯಾಕ್ ಸರ್ವಿಸಸ್ ಲಿಮಿಟೆಡ್ 2,98,20,000, ಎಡುಕ್ವಿಟಿ 2,84,40,000 ರೂ., ಮೈಂಡ್ ಲಾಜಿಕ್ಸ್ 2,43,00,000 ರೂ.ನಮೂದಿಸಿತ್ತು. ಟೆಂಡರ್ ನಿಯಾಮವಳಿಗಳ ಪ್ರಕಾರ ಕಡಿಮೆ ದರ ನಮೂದಿಸಿರುವ ಕಂಪನಿಗೆ ಟೆಂಡರ್ ನೀಡಬೇಕಿತ್ತು. ಆದರಿಲ್ಲಿ, ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಅಧಿಕಾರಿಗಳು ತಾಂತ್ರಿಕ ಅಂಕ ನೀಡಿಕೆಯಲ್ಲಿ ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಮೆರಿ ಟ್ರ್ಯಾಕ್ಗೆ 92.23 ಅಂಕ ಮತ್ತು ಮೈಂಡ್ ಲಾಜಿಕ್ಸ್ಗೆ 92.13 ಅಂಕ ನೀಡಿ ಕಡೆಯಲ್ಲಿ ಮೆರಿ ಟ್ರ್ಯಾಕ್ ಕಂಪನಿಗೆ ಟೆಂಡರ್ ಪಾಲಾಗಿಸುವಲ್ಲಿ ವಿ.ವಿ. ಅಧಿಕಾರಿಗಳು ಶಾಮೀಲಾಗಿರುವುದು ದಾಖಲೆಗಳಿಂದ ಗೊತ್ತಾಗಿದೆ.
ಮೆರಿ ಟ್ರ್ಯಾಕ್ ಸರ್ವಿಸಸ್ ಲಿಮಿಟೆಡ್ ನಮೂದಿಸಿದ್ದ ದರ ದುಬಾರಿ ಎಂದು ಆರಂಭದಲ್ಲಿ ವಿ.ವಿ. ಹಣಕಾಸು ಅಧಿಕಾರಿ ತಕರಾರು ತೆಗೆದು ಕಂಪನಿ ಜತೆ ದರ ಸಂಧಾನ ನಡೆಸಿ ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ. ಈ ಮಧ್ಯೆ ಕುಲಪತಿ ಡಾ.ರವೀಂದ್ರನಾಥ್ ಮಧ್ಯ ಪ್ರವೇಶ ಮಾಡಿ ದರ ಸಂಧಾನ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಕುಲಪತಿಗಳ ಸೂಚನೆಯಂತೆ ಅಧಿಕಾರಿಗಳ ದರ ಸಂಧಾನ ನಡೆಸುವ ಪ್ರಹಸನ ನಡೆಸಿದ್ದು, ಕಡೆಯಲ್ಲಿ ಕಂಪನಿ ನಮೂದಿಸಿದ್ದ ಒಟ್ಟು ದರದಲ್ಲಿ ಕೇವಲ 5 ಪೈಸೆಯಷ್ಟೇ ಮಾತ್ರ ಕಡಿಮೆ ಮಾಡಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮೊದಲೇ ಕಂಪನಿ ಜತೆ ಮಾತುಕತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಟೆಂಡರ್ ಪಡೆದಿದ್ದ ಕಂಪನಿಯಿಂದ ಕಳಪೆ ಕೆಲಸ?
ಟೆಂಡರ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಮೆರಿ ಟ್ರ್ಯಾಕ್ ಸರ್ವಿಸಸ್ ಲಿಮಿಟೆಡ್ ವಿ.ವಿ.ಪರೀಕ್ಷಾ ಕಾರ್ಯಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಇದಕ್ಕೆ ಸಂಬಂಧಿಸಿದಂತೆ ವಿ.ವಿ.ರಿಜಿಸ್ಟ್ರಾರ್ ಹಲವು ಬಾರಿ ಕಂಪನಿಗೆ ನೋಟೀಸ್ ಕೂಡ ನೀಡಿದ್ದರು. ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಮತ್ತು ಪ್ರಶ್ನೆ ಪತ್ರಿಕೆಗಳು, ಉತ್ತರ ಪತ್ರಿಕೆಗಳ ಕೋಡ್ ನಂಬರ್ ಜತೆ ತಾಳೆ ಆಗದಿರುವುದು ಸೇರಿದಂತೆ ಹಲವು ಲೋಪಗಳನ್ನು ಸರಿಪಡಿಸಲು ಸೂಚಿಸಿದ್ದರೂ ಪಾಲನೆ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್, ವಿಶ್ವವಿದ್ಯಾಲಯದ ಕುಲಪತಿ ಡಾ.ರವೀಂದ್ರನಾಥ್ ಅವರಾಗಲಿ ಇದರತ್ತ ಗಮನವನ್ನೇ ಹರಿಸಿಲ್ಲ ಎನ್ನಲಾಗಿದೆ.
ವರದಿ: ಜಿ.ಮಹಾಂತೇಶ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.