ಹೊಸಕೆರೆಹಳ್ಳಿಯಲ್ಲಿ ಕೆರೆ ಒತ್ತುವರಿ ಮಾಡಿದ್ದ ಮಾಜಿ ಪಾಲಿಕೆ ಸದಸ್ಯನ ಕಟ್ಟಡ ನೆಲಸಮ

By Internet DeskFirst Published Sep 17, 2016, 3:59 PM IST
Highlights

ಬೆಂಗಳೂರು(ಸೆ. 17): ಕಳೆದ ದಿನಗಳಿಂದ ರಾಜಕಾಲುವೆ ಮತ್ತು ಕೆರೆ ಒತ್ತುವರಿ ತೆರವು ಭಯದಲ್ಲಿದ್ದ ನಗರದ ಜನತೆಗೆ ಬೆಂಗಳೂರು ಜಿಲ್ಲಾಡಳಿತ ಮತ್ತೊಂದು ಶಾಕ್​ ನೀಡಿದೆ. ಶನಿವಾರ ಬೆಳ್ಳಂಬೆಳಗ್ಗೆ ಹೊಸಕೆರೆಹಳ್ಳಿ ಕೆರೆ ಒತ್ತುವರಿಯಾಗಿರುವ ಪ್ರದೇಶಗಳನ್ನು ತೆರವು ಮಾಡಲು ಮುಂದಾಗಿದೆ. ಹೊಸಕೆರೆಹಳ್ಳಿ ವಾರ್ಡ್'ನ ಮಾಜಿ ಪಾಲಿಕೆ ಸದಸ್ಯ ನಾರಾಯಣ್​ ಅವರ ತಂದೆ ಹನಮಂತಪ್ಪ ಕೆರೆ ಜಾಗವನ್ನ ಒತ್ತುವರಿ ಮಾಡಿ ನಿರ್ಮಿಸಿದ್ದರೆನ್ನಲಾದ ವ್ಯಾಪಾರ ಮಳಿಗೆಗಳನ್ನ ನೆಲಸಮ ಮಾಡಲಾಯಿತು. ಒಟ್ಟು 40 ಶೆಡ್'​ಗಳನ್ನ ತೆರವು ಮಾಡಿರುವ ಜಿಲ್ಲಾಡಳಿತವು ಒತ್ತುವರಿ ಪ್ರದೇಶದಲ್ಲಿ ನಿರ್ಮಾಣಮಾಡಿರುವ ಎರಡು ದೇವಸ್ಥಾನಗಳನ್ನ ಮುಜರಾಯಿ ಇಲಾಖೆ ವಶಕ್ಕೆ ನೀಡಿದೆ.

ಸರ್ವೇ ನಂಬರ್​ 15 ರ 59 ಎಕರೆ ವಿಸ್ತೀರ್ಣವುಳ್ಳ ಹೊಸಕೆರೆಹಳ್ಳಿ ಕೆರೆಯ 2 ಎಕರೆ ಜಾಗವನ್ನ ಒತ್ತುವರಿ ಮಾಡಲಾಗಿದೆ. ಈ ಹಿಂದೆ ಜಿಲ್ಲಾಡಳಿತ ಈ ಸಂಬಂಧ ನೋಟಿಸಿ ನೀಡಿತ್ತಾದರೂ ಇದನ್ನ ಪ್ರಶ್ನಿಸಿ ನಿವಾಸಿಗಳು ಕೋರ್ಟ್​ ಮೆಟ್ಟಿಲೇರಿದ್ದರು. ಆದರೆ, ಇದೀಗ ತೀರ್ಪು ಸರ್ಕಾರದ ಪರವಾಗಿದ್ದು ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಒತ್ತುವರಿ ಪ್ರದೇಶವನ್ನ ತೆರವು ಮಾಡಲಾಗುತ್ತಿದೆ. ಕಾರ್ಯಾಚರಣೆ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

Latest Videos

ನಿವಾಸಿಗಳ ವಿರೋಧ:
ತಮ್ಮ ಕಟ್ಟಡಗಳನ್ನು ಕೆಡವುತ್ತಿರುವ ಕಾರ್ಯಾಚರಣೆಗೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಟ ದರ್ಶನ್​ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಕೂಡಾ ಸರ್ಕಾರಿ ಜಾಗವನ್ನ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೂ ಅವರಿಗೆ ಯಾವುದೇ ತೆರವು ಮಾಡದ ಜಿಲ್ಲಾಡಳಿತವು ಬಡವರನ್ನು ಬೀದಿಗೆ ತಳ್ಳಿ ದೊಡ್ಡವರ ಬೆನ್ನಿಗೆ ನಿಂತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ರಪಡಿಸಿದ್ದಾರೆ.

ಒಟ್ಟಿನಲ್ಲಿ, ನಗರದಲ್ಲಿ ಕೆರೆ ಒತ್ತುವರಿಯಾಗಿರುವ ಪ್ರದೇಶಗಳನ್ನು ತೆರವು ಮಾಡಲೆಬೇಕು ಎಂದು ಪಣ ತೊಟ್ಟಿರುವ ಜಿಲ್ಲಾಡಳಿತ ತನ್ನ ಕಾರ್ಯಾಚರಣೆ ಚುರುಕುಗೊಳಿಸಿರುವುದಂತೂ ನಿಜ.

- ಮುತ್ತಪ್ಪ ಲಮಾಣಿ, ಸುವರ್ಣನ್ಯೂಸ್

click me!