ಈರುಳ್ಳಿಗೆ ದಕ್ಕದ ಬೆಲೆ: ಒಬಾಮ ಭೇಟಿಯಾದ ರೈತನಿಂದ ಮೋದಿಗೆ MO!

By Web DeskFirst Published Dec 3, 2018, 1:56 PM IST
Highlights

ಈರುಳ್ಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ರೈತರು ಕಣ್ಣೀರು ಹರಿಸುತ್ತಿರುವುದು ಸಾಮಾನ್ಯವಾಗಿದೆ. ಆದರೀಗ ಈ ವಿಚಾರದಿಂದ ಕೋಪಗೊಂಡ ಮಹಾರಾಷ್ಟ್ರದ ರೈತ ತಾನು ಮಾರಿದ್ದ 750 ಕೆಜಿ ಈರುಳ್ಳಿಗೆ ಸಿಕ್ಕ 1064 ರೂಪಾಯಿ ಹಣವನ್ನು ಪ್ರಧಾನಿ ಮೋದಿಗೆ ಕಳುಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಸಿಕ್[ಡಿ.03]: ಈರುಳ್ಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ಇರುವುದಕ್ಕೆ ಮಹಾರಾಷ್ಟ್ರದ ರೈತನೋರ್ವ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದರ ಪ್ರತಿಭಟನೆ ಅಂಗವಾಗಿ 750 ಕೇಜಿ ಈರುಳ್ಳಿ ಮಾರಾಟದಿಂದ ಬಂದ 1064 ರು. ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.

ಈ ಬಗ್ಗೆ ಭಾನುವಾರ ಮಾತನಾಡಿದ ರೈತ ಸಂಜಯ್‌ ಸಾಥೆ, ‘ನಾನು 750 ಕೇಜಿ ಈರುಳ್ಳಿ ಬೆಳೆದಿದ್ದೇನೆ. ಆದರೆ, ಮಾರುಕಟ್ಟೆಯಲ್ಲಿ ಪ್ರತೀ ಕೆಜಿ ಈರುಳ್ಳಿಗೆ 1 ರು.ಗೆ ಕೇಳಲಾಗುತ್ತಿದೆ. ಕೊನೆಗೆ 1.40 ರು. ಪ್ರಕಾರ 750 ಕೆಜಿ ಈರುಳ್ಳಿ ಮಾರಾಟದಿಂದ ಕೇವಲ 1,064 ರು. ಸಂಪಾದಿಸಿದ್ದೇನೆ. ಈ ಹಣವನ್ನು ಪ್ರಧಾನಿ ಕಚೇರಿಯ ವಿಪತ್ತು ಪರಿಹಾರ ನಿಧಿಗೆ ಕಳುಹಿಸಿದ್ದೇನೆ. ಮನಿ ಆರ್ಡರ್ ಕಳುಹಿಸಲು ₹ 54 ಶುಲ್ಕ ತಗುಲಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಆದರೆ, ನಮ್ಮ ಕುರಿತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಕೋಪವಿದೆ ಎಂದು ಹೇಳಿದ್ದಾರೆ.

2010ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ಭಾರತ ಭೇಟಿ ವೇಳೆ ಅವರ ಜೊತೆ ಸಮಾಲೋಚನೆಗೆ ಕೇಂದ್ರ ಕೃಷಿ ಇಲಾಖೆಯಿಂದ ಆಯ್ಕೆಯಾದ ಪ್ರಗತಿಪರ ರೈತರ ಪೈಕಿ ಮಹಾರಾಷ್ಟ್ರದ ನಿಶಾಕ್‌ ಜಿಲ್ಲೆಯ ನಿಫಾದ್‌ ತಾಲೂಕಿನ ನಿವಾಸಿ ಸಂಜಯ್‌ ಸಾಥೆ ಅವರು ಸಹ ಒಬ್ಬರಾಗಿದ್ದರು.

ಈ ಕುರಿತಾಗಿ ಮಾತನಾಡಿದ ರೈತ ಸಂಜಯ್ "ಭಾರತದ ಶೇ.50 ರಷ್ಟು ಈರುಳ್ಳಿಯನ್ನು ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಎಂಟು ವರ್ಷಗಳ ಹಿಂದೆ ಒಬಾಮಾ ಜತೆಗೆ ತಾವು ಟೆಲಿಕಾಂ ಆಯೋಜಕರ ಧ್ವನಿ ಆಧಾರಿತ ಸಲಹಾ ಸೇವೆ ಮೂಲಕ ಅವರೊಂದಿಗೆ ಮಾತನಾಡಿದ್ದೆ. ಆಗ ಹವಾಮಾನ ಬದಲಾವಣೆ ನಡುವೆಯೂ ತಾನು ಹೆಚ್ಚು ಇಳುವರಿ ಪಡೆದ ಬಗ್ಗೆ ತಿಳಿಸಿದ್ದೆ" ಎಂದಿದ್ದಾರೆ.

click me!