
ವಾಷಿಂಗ್ಟನ್(ಏ. 07): ಸಿರಿಯಾ ದೇಶದ ಮೇಲೆ ಅಮೆರಿಕ ಎರಗಿಬಿದ್ದಿದ್ದು, ಪ್ರಮುಖ ವಾಯುನೆಲೆಯೊಂದನ್ನು ಚಿಂದಿ ಉಡಾಯಿಸಿದೆ. ಶಾಯ್ರತ್ ವಾಯುನೆಯಲ್ಲಿದ್ದ ಯುದ್ಧವಿಮಾನಗಳು, ಯುದ್ಧಾಸ್ತ್ರ ತಯಾರಿಕೆ ವ್ಯವಸ್ಥೆ ಇತ್ಯಾದಿಗಳೆಲ್ಲವೂ ನಾಶವಾಗಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಇದರೊಂದಿಗೆ ಸಿರಿಯಾದ ಅಧ್ಯಕ್ಷ ಬಷರ್ ಅಲ್ ಅಸದ್ ಅವರ ಬಲ ಕುಂಠಿಸುವತ್ತ ಅಮೆರಿಕ ಮಹತ್ವದ ಹೆಜ್ಜೆ ಇಟ್ಟಿದೆ ಎಂದು. ಇದೇ ಮಂಗಳವಾರ ಸಿರಿಯಾದ ಬಂಡುಕೋರರ ನೆಲೆಗಳ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಸಿಡಿಸಿ 70ಕ್ಕೂ ಹೆಚ್ಚು ಜನರು ಬಲಿಯಾದ ಘಟನೆಯನ್ನು ಮುಂದಿಟ್ಟುಕೊಂಡು ಅಮೆರಿಕ ಪ್ರತ್ಯಾಕ್ರಮಣ ನಡೆಸಿದೆ ಎನ್ನಲಾಗಿದೆ. ಸಿರಿಯಾ ಸರಕಾರದ ಸೇನೆಯಿಂದಲೇ ಈ ಕೃತ್ಯ ನಡೆದಿದೆ ಎಂದು ಆಪಾದಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಾಷ್ಟ್ರೀಯ ಹಿತಾಸಕ್ತಿ ಕಾರಣದಿಂದ ದಾಳಿ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಸಿರಿಯಾದ ಸೇನಾ ನೆಲೆಗಳ ಮೇಲೆ ಅಮೆರಿಕ ಸೇನೆ ನಡೆಸುತ್ತಿರುವ ಕ್ಷಿಪಣಿ ದಾಳಿಯನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ದೇಶ ನ್ಯಾಯಕ್ಕಾಗಿ ನಿಂತಿದೆ ಎಂದು ಹೇಳಿದ್ದಾರೆ. ಫ್ಲೋರಿಡಾದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಸಿರಿಯಾದಲ್ಲಿ ನಡೆಯುತ್ತಿರುವ ರಕ್ತಪಾತವನ್ನು ಕೊನೆಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ವಿಶ್ವ ಸಮುದಾಯ ಅಮೆರಿಕದೊಂದಿಗೆ ಕೈಜೋಡಿಸಬೇಕಿದ್ದು, ಸಿರಿಯಾದಲ್ಲಿ ನಡೆಯುತ್ತಿರುವ ಅಮಾನವೀಯ ದಾಳಿಗಳನ್ನು ಹತ್ತಿಕ್ಕಬೇಕಿದೆ ಎಂದು ಹೇಳಿದರು.
ಇದೇ ವೇಳೆ ಸಿರಿಯಾದ ಸೇನಾ ನೆಲೆಗಳ ಮೇಲೆ ಅಮೆರಿಕ ಸೇನೆ ನಡೆಸುತ್ತಿರುವ ಕ್ಷಿಪಣಿ ದಾಳಿ ಅಮಾಯಕ ನಾಗರಿಕರ ಸಾವಿನ ಪ್ರತೀಕಾರ ಮತ್ತು ಮಾನವೀಯತೆ ಉಳಿವಿಗಾಗಿ ಅಮೆರಿಕದ ಹೋರಾಟ ಎಂದು ಟ್ರಂಪ್ ಬಣ್ಣಿಸಿದರು. ಸಿರಿಯಾದಲ್ಲಿ ನಾಗರಿಕರ ಮೇಲೆ ನಡೆದಿರುವ ದಾಳಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಘಟನೆಗಳು ಮರುಕಳಿಸಬಾರದು ಮತ್ತು ಅಮೆರಿಕ ಅದಕ್ಕೆ ಅವಕಾಶ ನೀಡುವುದಿಲ್ಲ. ಸಿರಿಯಾದಲ್ಲಿ ಶಾಂತಿ ನೆಲೆಸುವವರೆಗೂ ಮತ್ತು ಅಮಾಯಕರ ಸಾವಿಗೆ ನ್ಯಾಯ ಸಿಗುವವರೆಗೂ ಅಮೆರಿಕ ತನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದು ಟ್ರಂಪ್ ಹೇಳಿದರು.
ಶಾಯ್ರತ್ ವಾಯುನೆಲೆಯು ಸಿರಿಯಾದ ಸೇನೆಯ ಪ್ರಮುಖ ಭಾಗವಾಗಿತ್ತು. ಅಮೆರಿಕ ಆರೋಪಿಸಿರುವ ಪ್ರಕಾರ ಈ ವಾಯುನೆಲೆಯಲ್ಲಿ ವಿಷಾನಿಲ ಯುದ್ಧಾಸ್ತ್ರಗಳ ತಯಾರಿಕೆ ಆಗುತ್ತಿತ್ತಂತೆ. ಇದರೊಂದಿಗೆ ಸಿರಿಯಾದ ರಾಸಾಯನಿಕ ಶಸ್ತ್ರಾಸ್ತ್ರ ಸಂಗ್ರಹಕ್ಕೆ ಹೊಡೆತಬಿದ್ದಂತಾಗಿದೆ ಎಂದು ಅಮೆರಿಕ ಹೇಳಿದೆ.
ಶಾಯ್ರತ್ ವಾಯುನೆಲೆಯ ಮೇಲೆ ದಾಳಿ ನಡೆಸುವ ಮುನ್ನ ರಷ್ಯಾದ ಮಿಲಿಟರಿಗೆ ಅಮೆರಿಕ ಮುನ್ಸೂಚನೆ ನೀಡಿತ್ತು. ಆದರೆ, ರಷ್ಯಾದ ಒಪ್ಪಿಗೆಗೆ ಕಾಯದೆಯೇ ಅಮೆರಿಕ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸಿರಿಯಾದ ವಾಯುನೆಲೆಯನ್ನು ಧ್ವಂಸಗೊಳಿಸಿದೆ. ಸಿರಿಯಾದ ಅಧ್ಯಕ್ಷರ ಪರ ನಿಲುವು ಹೊಂದಿರುವ ರಷ್ಯಾವು ಅಮೆರಿಕದ ಕಾರ್ಯಾಚರಣೆ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.