
ಬೆಂಗಳೂರು (ಜೂ.17): ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾವುಗಳ ಪ್ರಕರಣಕ್ಕೆ (Dharmasthala Death Case) ಸಂಬಂಧಿಸಿದಂತೆ ತಮ್ಮ ಪಾತ್ರವೇನು ಮತ್ತು 'ಮಾಸ್ಕ್ ಮ್ಯಾನ್' ಎಂದೇ ಗುರುತಿಸಿಕೊಂಡಿರುವ ಚಿನ್ನಯ್ಯನೊಂದಿಗೆ (Mask Man Chinnayya) ತಮಗಿದ್ದ ಸಂಬಂಧವೇನು ಎಂಬುದನ್ನು ನಟ ಪ್ರಕಾಶ್ ರಾಜ್ (Prakash Raj) ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ದೇಶದ ಪ್ರಜೆ, ದೇಶದಲ್ಲಿ ಯಾವುದೇ ಅನ್ಯಾಗಳು ನಡೆದರೆ ನಾನೊಬ್ಬ ಹೋರಾಟಗಾರನಾಗಿ ಪ್ರಶ್ನೆ ಮಾಡಿಯೇ ಮಾಡುತ್ತೇನೆ. ಹೀಗಾಗಿಯೇ ನನಗೆ ಕರೆ ಮಾಡಿ ಚಿನ್ನಯ್ಯ (Mask Man Chinnayya) ಮಾತನಾಡುತ್ತಾನೆ. ಈ ಬಗ್ಗೆ ಸರ್ಕಾರಕ್ಕೆ ಒತ್ತಡ ಹೇರಿ ವಿಶೇಷ ತನಿಖಾ ತಂಡ-ಎಸ್ಐಟಿ (Special Investigation Team- SIT) ರಚನೆಗೆ ಆಗ್ರಹ ಮಾಡಿದ್ದಲ್ಲದೇ, ಎಸ್ಐಟಿ ರಚನೆಯಾದ ನಂತರ ಮುಖ್ಯಸ್ಥರಾದ ಮೊಹಾಂತಿ (IPS Mohanti) ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೇನೆ. ಆದರೆ, ಆಮೇಲೆ ಗೊತ್ತಾಯ್ತು ಚಿನ್ನಯ್ಯ ಸರಿಯಿಲ್ಲವೆಂದು ದೂರವುಳಿದೆ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಹೇಳಿದರು.
ನಾನು ಯಾವತ್ತೂ ಧರ್ಮಸ್ಥಳಕ್ಕೆ ಹೋಗಿಲ್ಲ, ಅಲ್ಲಿ ಸಾವುಗಳು ಸಂಭವಿಸಿವೆ ಎಂದು ಕೇಳಿದಾಗ ನನಗೆ ಸುಮ್ಮನೆ ಕುಳಿತುಕೊಳ್ಳಲು ಆಗಲಿಲ್ಲ. ಇದೇ ವೇಳೆ ಮಂಡ್ಯ ಮೂಲದ ವ್ಯಕ್ತಿಯೊಬ್ಬರು ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ಸಾವು ಸಂಭವಿಸಿದೆ ಎಂದು ದೂರು ನೀಡುತ್ತಾನೆ. ಆಗ ಹೇಗಾದರೂ ಮಾಡಿ ನ್ಯಾಯಕ್ಕಾಗಿ ಧ್ವನಿ ಎತ್ತಬೇಕು ಎನಿಸಿತು. ಹೀಗಾಗಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರಿಗೆ ಒತ್ತಡ ಹಾಕಿ ಎಸ್ಐಟಿ ತನಿಖೆಗೆ ಒತ್ತಡ ಹಾಕಿದೆವು. ಆಗ ಸರ್ಕಾರದಿಂದ ವಿಶೇಷ ತನಿಖಾ ತಂಡವನ್ನು ರಚಿಸಿ ಮುಖ್ಯಸ್ಥರಾಗಿ ಮೊಹಾಂತಿ ಅವರನ್ನು ನೇಮಕ ಮಾಡಲಾಯಿತು. ಆದರೂ ಮೊಹಾಂತಿಯವರು ಚಿನ್ನಯ್ಯ ಅವರನ್ನು ಭೇಟಿ ಮಾಡಿರಲಿಲ್ಲ. ಹೀಗಾಗಿ, ಮೊಹಾಂತಿ ಅವರಿಗೆ ಕರೆ ಮಾಡಿ, ಚಿನ್ನಯ್ಯನನ್ನು ಭೇಟಿ ಮಾಡುವಂತೆಯೂ ತಿಳಿಸಿದೆ.
ಆಗ ಗಿರೀಶ್ ಮಟ್ಟಣ್ಣನವರ್ ಫೋನ್ ಮಾಡಿ ಧರ್ಮಸ್ಥಳದ ಬಗ್ಗೆ ದೂರು ಕೊಟ್ಟಿರುವ ವ್ಯಕ್ತಿ ಮಾಸ್ಕ್ ಮ್ಯಾನ್ ನನ್ನ ಜೊತೆಗಿದ್ದಾನೆ. ನಿಮ್ಮೊಂದಿಗೆ ಮಾತನಾಡಬೇಕು ಎಂದು ಹೇಳುತ್ತಾರೆ. ಆಗ ಚಿನ್ನಯ್ಯ ನನ್ನೊಂದಿಗೆ ತಮಿಳು ಮಾತನಾಡಲು ಶುರು ಮಾಡಿದನು. ನೀನು ಮಂಡ್ಯದವನು ಅಲ್ವಾ ಕನ್ನಡ ಮಾತನಾಡದೇ ತಮಿಳು ಏಕೆ ಮಾತನಾಡುತ್ತೀಯ? ಎಂದೆಲ್ಲಾ ಕೇಳಿದೆ. ಆಗ ನಿಮ್ಮ ಮುಂದೆ ಮಾತನಾಡುವ ಧೈರ್ಯ ಇಲ್ಲ ಎಂದು ಹೇಳಿದನು. ಆಗ ನೀನು ಏನೇ ಹೇಳುವುದಿದ್ದರೂ ಒಂದು ವಾಯ್ಸ್ ರೆಕಾರ್ಡ್ ಮಾಡಿ ಕಳಿಸು ಎಂದು ಹೇಳಿದೆ.
ಚಿನ್ನಯ್ಯ ವಾಯ್ಸ್ ರೆಕಾರ್ಡ್ ನೋಟ್ ಅನ್ನು ನನಗೆ ಕಳಿಸಿದ. ಕೂಡಲೇ ಇದನ್ನು ಕೇಳಿದ ನಾನು ಲಾಯರ್ ಅವರನ್ನು ಭೇಟಿ ಮಾಡಿದೆ. ಅವರೊಂದಿಗೆ ಚರ್ಚೆ ಮಾಡಿದಂತೆ ಎಸ್ಐಟಿ ಮುಖ್ಯಸ್ಥರಾಗಿ ನೇಮಕವಾಗಿದ್ದ ಮೊಹಾಂತಿ ಅವರಿಗೆ ಫಾರ್ವರ್ಡ್ ಮಾಡಿದೆ. ಈ ಬಗ್ಗೆ ತನಿಖೆ ನಡೆಯುತ್ತಿತ್ತು. ಹೀಗಾಗಿ, ಕುತೂಹಲದಿಂದ ತನಿಖೆಯ ವಿಚಾರ ಏನಾಯಿತು ಎಂದು ಮೊಹಾಂತಿ ಅವರ ಬಳಿ ಕೇಳಿದಾಗ, ಚಿನ್ನಯ್ಯ ರಿವರ್ಸ್ ಹೊಡೆಯುತ್ತಿದ್ದಾನೆ. ನೀವು ಅವನ ಫೋನ್ ಸ್ವೀಕರಿಸಬೇಡಿ ಎಂದು ಹೇಳಿದರು. ಹೀಗಾಗಿ, ಚಿನ್ನಯ್ಯ ಸರಿಯಿಲ್ಲವೆಂದು ನಾನು ಅವನಿಂದ ದೂರವುಳಿದೆ ಎಂದು ಪ್ರಕಾಶ್ ರಾಜ್ ಒಪ್ಪಿಕೊಳ್ಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.