
ದಯಾಶಂಕರ ಮೈಲಿ
ಹಾಸನ : ಉಡುಪಿ ಶಿರೂರು ಮಠದ ಲಕ್ಷ್ಮೀವರ ತೀರ್ಥರ ಸಾವಿನ ಹಿಂದೆ ಅವರಿಗೆ ಇತ್ತೀಚೆಗೆ ಆಪ್ತಳಾಗಿದ್ದ ಮಹಿಳೆಯೂ ಇರಬಹುದು. ಆರಂಭದಲ್ಲಿ ಬಾಡಿಗೆ ಆಟೋದಲ್ಲಿ ಸಂಜೆ ಮಾತ್ರ ಪೂಜೆಗಷ್ಟೇ ಬರುತ್ತಿದ್ದ ಆ ಮಹಿಳೆ ನಂತರ ಪ್ರತಿ ರಾತ್ರಿ ಕಾರಿನಲ್ಲಿ ಬರಲಾರಂಭಿಸಿದಳು. ರಾತ್ರಿ ಬಂದವರು ಬೆಳಗೆದ್ದು ಹೋಗುತ್ತಿದ್ದಳು. ಇದನ್ನು ಕಣ್ಣಾರೆ ಕಂಡಿದ್ದೇನೆ. ಊರಿನವರಿಗೂ ಈ ವಿಚಾರ ಗೊತ್ತಿತ್ತು. ಸ್ವಾಮೀಜಿಗೆ ಆಕೆಯೇ ಹೊರಗಿನಿಂದ ಆಹಾರ ತಂದು ಕೊಡುತ್ತಿದ್ದಳು. ಆ ಬಳಿಕವೇ ಶ್ರೀಗಳ ಆರೋಗ್ಯ ಕೆಡಲು ಶುರುವಾಯಿತು!
ಹೀಗೆಂದಿದ್ದು ಬೇರಾರೂ ಅಲ್ಲ, ಮಠದ ಮಾಜಿ ಮ್ಯಾನೇಜರ್ ಸುನಿಲ್. ಇದು ವರ್ಷದ ಹಿಂದೆ ಶಿರೂರು ಮೂಲ ಮಠದ ಮ್ಯಾನೇಜರ್ ಆಗಿದ್ದ ಸದ್ಯ ಹಾಸನದ ಬೇಲೂರಿನ ಎಷ್ಟೇಟ್ವೊಂದರಲ್ಲಿ ಮ್ಯಾನೇಜರ್ ಆಗಿರುವ ಸುನಿಲ್ ಕುಮಾರ್ ಬಾಯ್ಬಿಟ್ಟ ಸ್ಫೋಟಕ ಮಾಹಿತಿ. ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಒಂದು, ಒಂದೂವರೆ ವರ್ಷದ ಅವಧಿಯಲ್ಲೇ ಮಠದ ವ್ಯವಹಾರಗಳನ್ನು ನೋಡಿಕೊಳ್ಳುವಷ್ಟು ಸ್ವಾಮೀಜಿಗೆ ಆಕೆ ಆಪ್ತಳಾಗಿ ಬಿಟ್ಟಿದ್ದಳು ಎಂದು ಹೇಳಿದ್ದಾರೆ.
ಆರೋಗ್ಯದಿಂದಿದ್ದರು: ಶಿರೂರು ಸ್ವಾಮೀಜಿ ಆರೋಗ್ಯವಾಗಿದ್ದರು. ಜತೆಗೆ ಅವರೊಬ್ಬ ಉತ್ತಮ ಯೋಗ ಹಾಗೂ ಈಜು ಪಟುವಾಗಿದ್ದರು, ಜತೆಗೆ ಸಾತ್ವಿಕ ಆಹಾರ ತಿನ್ನುತ್ತಿದ್ದರು. ಅವರ ಸಾವು ಅನಿರೀಕ್ಷಿತ ಎಂದು ಒಂಬತ್ತು ವರ್ಷಗಳಿಂದ ಸ್ವಾಮೀಜಿಯನ್ನು ಹತ್ತಿರದಿಂದ ಬಲ್ಲ ಸುನಿಲ್ ತಿಳಿಸುತ್ತಾರೆ.
ಕಡಗ ಕೂಡ ಸ್ವಾಮೀಜಿಯದ್ದೆ: ಒಂದೂವರೆ ವರ್ಷದ ಹಿಂದೆ ಸಾಮಾನ್ಯ ಭಕ್ತೆಯಾಗಿ ಮಠಕ್ಕೆ ಪ್ರತಿ ಶನಿವಾರ ಸಂಜೆ ಮಾತ್ರ ಬರುತ್ತಿದ್ದ ಆಕೆ ನಂತರ ಸ್ವಾಮೀಜಿಗಳ ಅತ್ಯಾಪ್ತೆಯ ಸ್ಥಾನ ಪಡೆದಳು. ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಫೋಟೋದಲ್ಲಿ ಆಕೆ ತನ್ನ ಬಲಗೈಗೆ ಹಾಕಿಕೊಂಡಿರುವ ಬಂಗಾರದ ಕಡಗ ಸ್ವಾಮೀಜಿಯದ್ದೆ ಎಂದು ಮಾಜಿ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ.
ಹೊರಗಿನ ಆಹಾರ: ಆ ಮಹಿಳೆ ಆಹಾರ ತಂದುಕೊಡಲು ಆರಂಭಿಸಿದ ಬಳಿಕವೇ ಶ್ರೀಗಳ ಆರೋಗ್ಯ ಕೆಡಲು ಶುರುವಾಯಿತು. ಸ್ವಾತಿಕ ಆಹಾರ ತಿಂದವರ ದೇಹ ಸೂಕ್ಷ್ಮವಾಗಿರುತ್ತದೆ. ಸದೃಢರಾಗಿದ್ದ ಸ್ವಾಮೀಜಿ ದಿಢೀರ್ ಹಾಗೂ ಅಸಹಜ ರೀತಿಯಲ್ಲಿ ಮೃತಪಟ್ಟಿದ್ದಾರೆ. ಇದು ನಂಬಲು ಕಷ್ಟ. ಅವರ ಸಾವು ಅನುಮಾನ ಹುಟ್ಟಿಸುವಂತಿದೆ ಎನ್ನುತ್ತಾರೆ ಸುನಿಲ್.
ಪೊಲೀಸರಿಗೂ ಗೊತ್ತು: ಆ ಮಹಿಳೆ ರಾತ್ರಿ ಸ್ಟೀಲ್ ಬಾಕ್ಸ್ಗಳಲ್ಲಿ ಹೊರಗಿನಿಂದ ಮಠಕ್ಕೆ ಊಟ ತರುತ್ತಿದ್ದರು. ಇಡೀ ರಾತ್ರಿ ಮಠದಲ್ಲಿದ್ದು ಬೆಳಗ್ಗೆದ್ದು ಹೋಗುತ್ತಿದ್ದರು. ಆರಂಭದಲ್ಲಿ ಬಾಡಿಗೆ ಆಟೋದಲ್ಲಿ ಸಂಜೆ ಮಾತ್ರ ಪೂಜೆಗಷ್ಟೇ ಬರುತ್ತಿದ್ದ ಆಕೆ ನಂತರದ ದಿನಗಳಲ್ಲಿ ಪ್ರತಿ ರಾತ್ರಿ ಕಾರಿನಲ್ಲಿ ಬರಲಾರಂಭಿಸಿದರು. ಇದನ್ನು ನಾನು ಕಣ್ಣಾರೆ ಕಂಡಿದ್ದೇನೆ. ನನಗೆ ಮಾತ್ರವೇ ಅಲ್ಲ, ಊರಿನವರಿಗೆಲ್ಲಾ ಈ ವಿಚಾರ ಗೊತ್ತಿತ್ತು. ಮಠದ ಮುಂದೆ ಆಕೆಯ ಕಾರು ಮುಂಜಾನೆ ವರೆಗೆ ನಿಂತಿರುವುದು ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೂ ಗೊತ್ತಿದೆ. ಒಂದು ಕಾಲದಲ್ಲಿ ಸಾಮಾನ್ಯಳಂತಿದ್ದ ಆಕೆ ಈಗ ಕೆಜಿಗಟ್ಟಲೆ ಚಿನ್ನ, ಕಾರು ಮತ್ತಿತರ ಆಸ್ತಿಗಳನ್ನು ಹೊಂದಿದ್ದಾಳೆ. ಆಕೆಯ ವರ್ತನೆಗೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ ಎಂದು ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.