ಮೊಬೈಲ್ ನೆಟ್ವರ್ಕ್ ಬಗ್ಗೆ ಪ್ರಧಾನಿಗೇ ದೂರಿದ ಯುವಕ | ಸಮಸ್ಯೆ ಸರಿಪಡಿಸಲು ಗ್ರಾಮಕ್ಕೆ ಅಧಿಕಾರಿಗಳ ದಂಡು
ಉಪ್ಪಿನಂಗಡಿ (ಅ. 14): ನಮ್ಮ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸರಿಯಿಲ್ಲ ಎಂದು ಇಲ್ಲಿಗೆ ಸಮೀಪದ ಗ್ರಾಮವೊಂದರ ಯುವಕನೋರ್ವ ಮೋದಿ ಆ್ಯಪ್ನಲ್ಲಿ ಸಲ್ಲಿಸಿದ ದೂರಿಗೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ಖಾಸಗಿ ಮೊಬೈಲ್ ಸಂಸ್ಥೆಗಳ ಕಂಪನಿಗಳ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದಾರೆ.
ನಮ್ಮ ಗ್ರಾಮದಲ್ಲಿ ಸೂಕ್ತವಾಗಿ ನೆಟ್ವರ್ಕ್ ಸಿಗುತ್ತಿಲ್ಲ ಎಂದು ಉಪ್ಪಿನಂಗಡಿ ಸಮೀದ ಐತ್ತೂರು ಗ್ರಾಮದ ಅಂತಿಬೆಟ್ಟಿನ ನಿವಾಸಿ ಚೇತನ್ ಎಂಬುವರು ಮೋದಿ ಆ್ಯಪ್ನಲ್ಲಿ ದೂರು ದಾಖಲಿಸಿದ್ದರು. ಇದನ್ನು ಪರಿಶೀಲಿಸಿದ ಪ್ರಧಾನಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳ ಸೂಚನೆ ಮೇರೆಗೆ, ಖಾಸಗಿ ಮೊಬೈಲ್ ಸಂಸ್ಥೆಯ ಅಧಿಕಾರಿಗಳು ಐತ್ತೂರು ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬಿಎಸ್ಎನ್ಎಲ್ ಅಧಿಕಾರಿಗಳು ಸಹ ಚೇತನ್ರನ್ನು ಸಂಪರ್ಕಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.