
ನವದೆಹಲಿ(ಜು.19): ಕಾವೇರಿ ನ್ಯಾಯಾಧಿಕರಣ ನೀಡಿದ ಅಂತಿಮ ಐತಿಹಾಸಿಕ ತೀರ್ಪಿನಲ್ಲಿ ರಾಜ್ಯದ ಅನೇಕ ಬೇಡಿಕೆಗಳನ್ನು ಪರಿಗಣಿಸದೇ, ತಮಿಳುನಾಡಿನ ಕೋರಿಕೆಗಳಿಗೆ ಮನ್ನಣೆ ನೀಡಿರುವ ಹಾಗೂ ಅಂತಿಮ ಐತಿಹಾಸಿಕ ತೀರ್ಪಿನಲ್ಲಿನ ಲೋಪದೋಷಗಳ ಬಗ್ಗೆ ಮಂಗಳವಾರ ಸುಪ್ರೀಂಕೋರ್ಟ್'ನಲ್ಲಿ ರಾಜ್ಯದ ಪರ ವಕೀಲರು ಬೆಳಕು ಚೆಲ್ಲಿದರು. ಹಾಗೆಯೇ ಈ ಲೋಪಗಳನ್ನು ಸರಿಪಡಿಸಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಡಿ ಎಂದು ನಿವೇದಿಸಿಕೊಂಡರು.
ಮಂಗಳವಾರ ಕಾವೇರಿ ಜಲ ನ್ಯಾಯಾಧಿಕರಣದ ಅಂತಿಮ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಶೇಷ ಪೀಠದ ಮುಂದೆ ರಾಜ್ಯದ ಪರ ವಕೀಲ ಮೋಹನ್ ಕಾತರಕಿ ವಾದಿಸಿದರು.
ವಿಶ್ವಸಂಸ್ಥೆಯ ಸಹ ಸಂಸ್ಥೆಯೊಂದು ನೀಡಿರುವ ಸಮೀಕ್ಷಾ ವರದಿಯ ಪ್ರಕಾರ 90 ಟಿಎಂಸಿ ಕಾವೇರಿ ಸಮುದ್ರ ಪಾಲಾಗುತ್ತಿದೆ. ಇಷ್ಟೊಂದು ಪ್ರಮಾಣದ ನೀರು ಸಮುದ್ರದ ಪಾಲಾಗುತ್ತಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನ್ಯಾಯಾಧಿಕರಣ ಕರ್ನಾಟಕಕ್ಕೆ ನೀಡಲಿಲ್ಲ.
ತನ್ನ ಕಾವೇರಿ ಕೊಳ್ಳದಲ್ಲಿನ ಅಂತರ್ಜ ಲಭ್ಯತೆಯ ಬಗ್ಗೆ ತಮಿಳುನಾಡು ನ್ಯಾಯಾಧಿಕರಣಕ್ಕೆ ನೀಡಿದ್ದ ತಪ್ಪು ಮಾಹಿತಿಯೇ ಅದಕ್ಕೆ ವರವಾಯಿತು. ತಮಿಳುನಾಡಿನ ಕಾವೇರಿ ಸೀಮೆಯಲ್ಲಿ 30 ಟಿಎಂಸಿಯಷ್ಟು ಅಂತರ್ಜಲವಿದೆ. ಆದರೆ ತಮಿಳುನಾಡು ಕೇವಲ 20 ಟಿಎಂಸಿ ಅಂತರ್ಜಲವಿದೆ ಎಂದು ಹೇಳಿತು. ನ್ಯಾಯಾಧಿಕರಣ ಅದನ್ನು ಒಪ್ಪಿಕೊಂಡಿತು, ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಯಿತು ಎಂದು ಕಾತರಕಿ ಪ್ರತಿಪಾದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.