
ಬೆಂಗಳೂರು (ಡಿ.24): ನಗರದ ಯಾವುದೇ ಕೆರೆ, ರಾಜಕಾಲುವೆಯಲ್ಲಿ ಕಸ ಅಥವಾ ಕಟ್ಟಡಗಳ ಅವಶೇಷಗಳನ್ನು ಸುರಿದರೆ ಐದು ಲಕ್ಷ ರೂ ಮತ್ತು ರಸ್ತೆಯಲ್ಲಿ ಎಲ್ಲೆಂದರೆಲ್ಲಿ ಕಸ ಸುರಿದರೆ 1 ಲಕ್ಷ ರೂ. ದಂಡ ವಿಧಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಮುಂದಿನ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಮೇಯರ್ ಆರ್. ಸಂಪತ್ರಾಜ್ ತಿಳಿಸಿದ್ದಾರೆ.
ಕೆರೆ ಮತ್ತು ರಾಜಕಾಲುವೆಗಳಿಗೆ ಕಟ್ಟಡಗಳ ಅವಶೇಷಗಳು, ಕಸ, ಅನುಪಯುಕ್ತ ವಸ್ತುಗಳನ್ನು ಸುರಿಯ ಬಾರದೆಂಬ ನಿಯಮ ಇದ್ದರೂ ಅದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಇದರಿಂದ ಕೆರೆ, ರಾಜಕಾಲುವೆಗಳಲ್ಲಿ ಶೇ. 70 ರಷ್ಟು ಹೂಳು ತುಂಬಿ ಕೊಂಚ ಮಳೆ ಬಂದರೂ ಕೆರೆ, ರಾಜಕಾ ಲುವೆಗಳು ತುಂಬಿ ಹರಿದು ವಸತಿ ಪ್ರದೇಶಗಳಿಗೆ ನೀರು ನುಗ್ಗುವುದು, ತಗ್ಗುಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಅಲ್ಲದೆ, ಮನೆಬಾಗಿಲಿಗೆ ಬರುವ ಆಟೋಗಳಿಗೆ ಕಸ ಸುರಿಯದೆ ಎಲ್ಲೆಂದರಲ್ಲಿ ರಸ್ತೆಗಳಲ್ಲಿ ಕೆಲವರು ಕಸ ಎಸೆದು ಹೋಗುತ್ತಿರುವುದರಿಂದ ನಗರದ ಪರಿಸರ ಹಾಳಾಗುತ್ತಿದೆ. ಇದನ್ನು ತಡೆಯಲು ದೊಡ್ಡ ಮೊತ್ತದ ದಂಡ ವಿಧಿಸುವುದು ಅನಿವಾರ್ಯವಾಗಿದೆ ಎಂದರು. ಇದನ್ನು ತಡೆಯಲು ರಾಜಕಾಲುವೆ, ಕೆರೆ ಹಾಗೂ ಸುತ್ತಮುತ್ತಲ ನಿಷೇಧಿತ ಪ್ರದೇಶಗಳಲ್ಲಿ ಕಸ, ಕಟ್ಟಡಗಳ ಅವಶೇಷಗಳನ್ನು ಸುರಿಯುವವರಿಗೆ 5 ಲಕ್ಷ, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ 1 ಲಕ್ಷ ರೂ. ದಂಡ ವಿಧಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಕಸ ಸುರಿಯುವ ವಾಹನಗಳನ್ನು ವಶಕ್ಕೆ ಪಡೆದು ನ್ಯಾಯಾಲಯದ ಮೂಲಕ ತಪ್ಪೊಪ್ಪಿಗೆ ಪಡೆದು ಬಿಡುಗಡೆ ಮಾಡಲಾಗುವುದು. ಅನಧಿಕೃತವಾಗಿ ಕಸ, ಕಟ್ಟಡಗಳ ಅವಶೇಷ ಸುರಿಯುವರ ಪತ್ತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಈಗಾಗಲೇ ಇದಕ್ಕಾಗಿ ಪ್ರತಿ ವಾರ್ಡ್ಗೆ 10 ಲಕ್ಷದಂತೆ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.