
ಸಿಟಿಗೆ ಬಂದ ಅತಿಮಾನುಷ ಶಕ್ತಿಯ ಕಾಡಿನ ಹುಡುಗ ಕಲಿವೀರ ಎಲ್ಲಾ ಕುತೂಹಲಗಳ ಕೇಂದ್ರಬಿಂದು. ಆತನ ವೇಷ, ಮ್ಯಾನರಿಸಂ, ಮೌನ, ಸಾಹಸ ಎಲ್ಲವೂ ನಿಗೂಢ. ಈ ಕಲಿಯ ಹಿಂದೆ ಬೀಳುವ ಇನ್ಸ್ಪೆಕ್ಟರ್ ಮುನಿ, ಡ್ಯಾನಿಯ ರೌಡಿ ಪಡೆ.. ಇವರಿಂದ ಆತನನ್ನು ಬಚಾವ್ ಮಾಡುವ ಲಾಯರ್ ಪಾವನ, ಕುಡುಕ ತಬಲಾ ನಾಣಿ, ಇದರ ನಡುವೆ ಕಲಿವೀರನ ರಿಯಲ್ ಫೈಟ್ನ ರೋಚಕತೆ, ಅದ್ಭುತ ಕ್ಯಾಮರಾ ವರ್ಕ್ ಫಸ್ಟ್ಹಾಫ್ನಲ್ಲಿ ಆಕಳಿಸಲು ಬಿಡುವುದಿಲ್ಲ. ಸೆಕೆಂಡ್ ಹಾಫ್ನಲ್ಲಿ ಈತನ ಸಿಟಿ ಎಂಟ್ರಿಯ ಕಾರಣ ತಿಳಿಯುತ್ತದೆ.
ರೋಚಕ ಫೈಟ್ನೊಳಗೆ ಅಸ್ತವ್ಯಸ್ತವಾದ ಕತೆಯ ಹೆಣಿಗೆ ಇದೆ. ಮಂತ್ರವಾದ, ಪ್ರೇತ, ಜೊತೆಗೆ ನೂರಾರು ವರ್ಷಗಳ ಹಿಂದಿನ ಹಿಸ್ಟರಿಯನ್ನು ಕತೆಗೆ ಲಿಂಕ್ ಮಾಡುವ ಪ್ರಯತ್ನ ಗಲಿಬಿಲಿ ಉಂಟುಮಾಡುತ್ತೆ. ಮಹಮ್ಮದ್ ಘಜ್ನಿಯ ಭಾರತ ದಾಳಿಯನ್ನು ಎಳೆದು ತಂದು ಕತೆಗೆ ಜೋಡಿಸಲಾಗಿದೆ. ಈ ನಡುವೆ ಕಥೆಯ ಮುಖ್ಯ ಎಳೆ ಕಾಡು ಜನರ ಬದುಕು, ಅವರ ನಂಬಿಕೆಗಳು, ಅವರಿಗಾದ ಅನ್ಯಾಯ ಪರಿಣಾಮಕಾರಿ ಅನಿಸೋದಿಲ್ಲ. ಮತ್ತೊಂದು ಕಡೆ ಚಿತ್ರವನ್ನು ಅತಿ ರೋಚಕಗೊಳಿಸುವುದೂ ಹೇಗೆ ಒಂದು ಮಿತಿ ಅನ್ನುವುದಕ್ಕೂ ಈ ಸಿನಿಮಾ ಪಾಠದಂತಿದೆ.
ತಾರಾಗಣ: ಅಭಿಮನ್ಯು, ಪಾವನಾ ಗೌಡ, ಚಿತ್ರಶ್ರೀ ಅಂಚನ್, ತಬಲಾ ನಾಣಿ, ಮುನಿ
ನಿರ್ದೇಶನ: ಅವಿ ರಾಮ್
ಛಾಯಾಗ್ರಹಣ: ಎಸ್ ಹಾಲೇಶ್
ಸಂಗೀತ: ವಿ ಮನೋಹರ್
ರೇಟಿಂಗ್: 3
ಇಷ್ಟಾದರೂ ಸಿನಿಮಾ ಮನರಂಜನೆಗೆ ಮೋಸ ಮಾಡುವುದಿಲ್ಲ. ಸಿನಿಮಾಟೋಗ್ರಫಿ ಸಾಹಸಕ್ಕೆ ಪೂರಕವಾಗಿ ಬಂದು ಅನುಭವವನ್ನು ದಟ್ಟವಾಗಿಸುತ್ತದೆ. ಆದರೆ ಹಾಡುಗಳಲ್ಲೂ ಕಲಿವೀರನ ಸಾಹಸ ಪಟ್ಟುಗಳು ಕಾಣಿಸಿಕೊಂಡು ಕಣ್ಣು ರಿಲ್ಯಾಕ್ಸೇಶನ್ಗಾಗಿ ಅತ್ತಿತ್ತ ಹೊರಳುತ್ತದೆ. ಕೆಲವು ಹಾಡುಗಳು ಹತ್ತಿಪ್ಪತ್ತು ವರ್ಷ ಹಿಂದೆ ಬಂದಿದ್ದರೆ ಚೆನ್ನಾಗಿತ್ತು ಅನಿಸುತ್ತದೆ. ಪಾವನ ಗೌಡ ಮಾಡಿದ ಪಾತ್ರ, ಅದರ ಟ್ವಿಸ್ಟ್ಗಳು ಇಂಟರೆಸ್ಟಿಂಗ್. ಕಲಿವೀರ ಪಾತ್ರಧಾರಿ ಅಭಿಮನ್ಯು ಈ ಪಾತ್ರಕ್ಕಾಗಿ 100 ಪರ್ಸೆಂಟ್ ಎಫರ್ಟ್ ಹಾಕಿರೋದು ಗೊತ್ತಾಗುತ್ತೆ. ಪಾವನಾ ಗೌಡ, ಮುನಿ, ತಬಲಾ ನಾಣಿ ಮೊದಲಾದವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಭರಪೂರ ಮನರಂಜನೆಯ ಉದ್ದೇಶದಿಂದ ಥಿಯೇಟರ್ಗೆ ಹೋಗೋದಾದ್ರೆ ಖಂಡಿತಾ ಕಲಿವೀರ ಕೊಟ್ಟದುಡ್ಡಿಗೆ ಮೋಸ ಮಾಡಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.