ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ ಶಿವನಸಮುದ್ರದಲ್ಲಿ ಉತ್ಪಾದನೆ ಸ್ಥಗಿತ.. ರಾಜ್ಯಕ್ಕೆ ಕರೆಂಟ್ ಶಾಕ್!

Published : Jul 26, 2026, 11:41 AM IST
shivanasamudra hydroelectric project

ಸಾರಾಂಶ

ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳ ಸನಿಹದಲ್ಲೇ ಇರುವ ಈ ಸ್ಥಾವರವು ಐತಿಹಾಸಿಕ ಮತ್ತು ತಾಂತ್ರಿಕ ಮಹತ್ವದ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ. ನೂರು ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಈ ಮಹತ್ವದ ಸ್ಥಾವರವು ಇಂದು ಮಳೆಯಿಲ್ಲದೆ ಸ್ತಬ್ದವಾಗಿರುವುದು ಆತಂಕಕಾರಿ ಸಂಗತಿಯಾಗಿದೆ.

ಮಂಡ್ಯ: ರಾಜ್ಯದಲ್ಲಿ ಮಳೆಯ ಅಭಾವ ಕೇವಲ ಕೃಷಿ ವಲಯಕ್ಕೆ ಮಾತ್ರವಲ್ಲದೆ, ಜಲವಿದ್ಯುತ್ ಉತ್ಪಾದನೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯಿಂದಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿರುವ ಏಷ್ಯಾದ ಅತ್ಯಂತ ಹಳೆಯ ಮತ್ತು ಮೊದಲ ಜಲವಿದ್ಯುತ್ ಸ್ಥಾವರ 'ಶಿವನಸಮುದ್ರ'ದಲ್ಲಿ ವಿದ್ಯುತ್ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಒಂದೂವರೆ ತಿಂಗಳಿನಿಂದ ಸ್ಥಗಿತ

ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ನೀರಿಲ್ಲದ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ಶಿವನಸಮುದ್ರ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಬಂದ್ ಆಗಿದೆ. ಕಾವೇರಿ ನದಿ ಸಂಪೂರ್ಣ ಬರಿದಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಈ ಸ್ಥಾವರದಲ್ಲಿ ಪ್ರತಿದಿನ ಸರಾಸರಿ 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ನಿರಂತರ ವಿದ್ಯುತ್ ಉತ್ಪಾದನೆಗಾಗಿ ದಿನಕ್ಕೆ ಕನಿಷ್ಠ 1450 ಕ್ಯೂಸೆಕ್ ನೀರಿನ ಅವಶ್ಯಕತೆ ಇರುತ್ತದೆ. ಕೃಷ್ಣರಾಜ ಸಾಗರ (KRS) ಅಥವಾ ಕಬಿನಿ ಜಲಾಶಯದಿಂದ ನದಿಗೆ ನೀರು ಬಿಟ್ಟರೆ ಮಾತ್ರ ಇಲ್ಲಿ ಮತ್ತೆ ವಿದ್ಯುತ್ ಉತ್ಪಾದನೆ ಆರಂಭಿಸಲು ಸಾಧ್ಯವಿದೆ. ಪ್ರಸ್ತುತ ಅಣೆಕಟ್ಟುಗಳಲ್ಲೂ ನೀರಿನ ಮಟ್ಟ ಕುಸಿದಿರುವುದರಿಂದ ಜಲವಿದ್ಯುತ್ ಉತ್ಪಾದನೆಗೆ ಸಂಕಷ್ಟ ಎದುರಾಗಿದೆ.

ಶಿವನಸಮುದ್ರ ವಿದ್ಯುತ್ ಸ್ಥಾವರದ ಐತಿಹಾಸಿಕ ಹಿನ್ನೆಲೆ

ಶಿವನಸಮುದ್ರ ಜಲವಿದ್ಯುತ್ ಸ್ಥಾವರವು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ಏಷ್ಯಾ ಖಂಡಕ್ಕೇ ಹೆಮ್ಮೆಯ ಸಂಕೇತವಾಗಿದೆ. 1902 ರಲ್ಲಿ ಪ್ರಾರಂಭವಾದ ಈ ಸ್ಥಾವರವು ಏಷ್ಯಾ ಖಂಡದ ಮೊದಲ ಜಲವಿದ್ಯುತ್ ಯೋಜನೆಯಾಗಿದೆ. ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಅಂದಿನ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಶ್ರಮದಿಂದ ಈ ಯೋಜನೆ ಸಾಕಾರಗೊಂಡಿತು. ಆರಂಭದಲ್ಲಿ ಇಲ್ಲಿ ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಅನ್ನು ಕೋಲಾರದ ಚಿನ್ನದ ಗಣಿ (KGF) ಗೆ ಸರಬರಾಜು ಮಾಡಲಾಗುತ್ತಿತ್ತು. ಆಗಿನ ಕಾಲಕ್ಕೆ ಇದು ವಿಶ್ವದ ಅತಿ ಉದ್ದದ ವಿದ್ಯುತ್ ಪ್ರಸರಣ ಮಾರ್ಗಗಳಲ್ಲಿ ಒಂದಾಗಿತ್ತು (ಸುಮಾರು 147 ಕಿ.ಮೀ).

ಅಂದಿನ ಕಾಲದಲ್ಲಿ ಅಮೆರಿಕ ಮತ್ತು ಸ್ವಿಟ್ಜರ್ಲೆಂಡ್‌ನಿಂದ ಯಂತ್ರೋಪಕರಣಗಳನ್ನು ತರಿಸಿ ಇಲ್ಲಿ ಅಳವಡಿಸಲಾಗಿತ್ತು. ಇದು ಭಾರತದ ಔದ್ಯೋಗಿಕ ಮತ್ತು ತಾಂತ್ರಿಕ ಕ್ರಾಂತಿಯ ಮೊದಲ ಹೆಜ್ಜೆ ಎನ್ನಲಾಗುತ್ತದೆ. ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳ ಸನಿಹದಲ್ಲೇ ಇರುವ ಈ ಸ್ಥಾವರವು ಐತಿಹಾಸಿಕ ಮತ್ತು ತಾಂತ್ರಿಕ ಮಹತ್ವದ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ. ನೂರು ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಈ ಮಹತ್ವದ ಸ್ಥಾವರವು ಇಂದು ಮಳೆಯಿಲ್ಲದೆ ಸ್ತಬ್ದವಾಗಿರುವುದು ಆತಂಕಕಾರಿ ಸಂಗತಿಯಾಗಿದೆ.

PREV
Read more Articles on
click me!

Recommended Stories

Siddaramaiah: 2028ರ ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧಿಸುತ್ತಾರಾ, ಇಲ್ಲವಾ? ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಸಿಎಂ
ಮಂಡ್ಯದ ತೋಟವೊಂದರಲ್ಲಿ ಏಷ್ಯನ್ ಟಾಡಿ ಬೆಕ್ಕು ಪತ್ತೆ! ಕಾಡು ಬೆಕ್ಕಿನ ಆಕಾರ ನೋಡಿ ಬೆಚ್ಚಿಬಿದ್ದ ಸ್ಥಳೀಯರು!