KRS ಒಳಹರಿವಿನಲ್ಲಿ ಭಾರೀ ಕುಸಿತ, ರೈತರಲ್ಲಿ ಮನೆ ಮಾಡಿದ ಆತಂಕ..!

Published : Jul 14, 2026, 10:25 AM IST
KRS Dam

ಸಾರಾಂಶ

ಕಳೆದ ಒಂದು ವಾರದ ಹಿಂದೆ ಆರ್ಭಟಿಸಿದ್ದ ಮಳೆರಾಯ ಮತ್ತೆ ರಾಜ್ಯದಲ್ಲಿ ಕಳೆದು ಹೋಗಿದ್ದಾನೆ. ಪರಿಣಾಮ ರಾಜ್ಯದ ಜಲಾಶಯಗಳಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆ ಆಗಿದೆ. ಕೆಆರ್‍‌ಎಸ್ ಡ್ಯಾಂ ಕುರಿತ ಮಾಹಿತಿ ಇಲ್ಲಿದೆ.

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ (KRS) ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಇದು ಕೇವಲ ಅನ್ನದಾತರ ಆತಂಕಕ್ಕೆ ಕಾರಣವಾಗಿರುವುದಲ್ಲದೆ, ಕಾವೇರಿ ನಂಬಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕುಡಿಯುವ ನೀರಿನ ಸಂಕಷ್ಟ ಎದುರಾಗುವ ಮುನ್ಸೂಚನೆ ನೀಡಿದೆ.

ಒಳಹರಿವಿನಲ್ಲಿ ಕುಸಿತ

ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂಗೆ ಬರುವ ನೀರಿನ ಪ್ರಮಾಣ 12 ಸಾವಿರ ಕ್ಯೂಸೆಕ್ ದಾಟಿತ್ತು. ಈಗ ಮಳೆ ಬಿಡುವು ನೀಡಿರುವುದರಿಂದ ಒಳಹರಿವು ಗಣನೀಯವಾಗಿ ಕುಸಿದಿದೆ. ನಿನ್ನೆ 7500 ಕ್ಯೂಸೆಕ್ ಇದ್ದ ಒಳಹರಿವು ಇಂದು ಕೇವಲ 3685 ಕ್ಯೂಸೆಕ್ ಗೆ ಇಳಿಕೆಯಾಗಿದೆ.

ಮುಂಗಾರು ಆರಂಭದಲ್ಲಿ ಸುರಿದ ಮಳೆ ನೋಡಿ ರೈತರು ಕೃಷಿ ಚಟುವಟಿಕೆಗಳಿಗೆ ಸಜ್ಜಾಗಿದ್ದರು. ಈಗ ಡ್ಯಾಂ ಒಳಹರಿವು ಕುಸಿದಿರುವುದು ರೈತರ ನಿದ್ದೆಗೆಡಿಸಿದೆ. ಬೆಳೆಗಳಿಗೆ ನೀರು ಸಿಗುತ್ತದೆಯೇ ಇಲ್ಲವೇ ಎಂಬ ಆತಂಕ ಮಂಡ್ಯ ಭಾಗದ ರೈತರಲ್ಲಿ ಮನೆಮಾಡಿದೆ.

ಬೆಂಗಳೂರಿಗರಿಗೂ ತಪ್ಪದ ಸಂಕಷ್ಟ

ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದು ಬೆಂಗಳೂರು ನಗರದ ಪಾಲಿಗೆ ಕೆಟ್ಟ ಸುದ್ದಿಯಾಗಿದೆ. ಬೆಂಗಳೂರಿನ ಬಹುತೇಕ ಭಾಗಗಳಿಗೆ ಕುಡಿಯುವ ನೀರು ಪೂರೈಕೆಯಾಗುವುದು ಇದೇ ಕಾವೇರಿ ನದಿಯಿಂದ. ಸದ್ಯ ಕುಡಿಯುವ ಉದ್ದೇಶಕ್ಕಾಗಿ ಜಲಾಶಯದಿಂದ 623 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಂದು ವೇಳೆ ಮಳೆ ಮತ್ತೆ ಚುರುಕುಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿಗರಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ.

ಜಲಾಶಯದ ಇಂದಿನ ಸ್ಥಿತಿಗತಿ:

  • ಗರಿಷ್ಠ ಮಟ್ಟ: 124.80 ಅಡಿ.
  • ಇಂದಿನ ಮಟ್ಟ: 92.54 ಅಡಿ.
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ.
  • ಸದ್ಯದ ನೀರಿನ ಸಂಗ್ರಹ: 17.509 ಟಿಎಂಸಿ.
  • ಇಂದಿನ ಒಳಹರಿವು: 3685 ಕ್ಯೂಸೆಕ್.
  • ಇಂದಿನ ಹೊರಹರಿವು: 623 ಕ್ಯೂಸೆಕ್.

ಒಟ್ಟಾರೆಯಾಗಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದು ಇತ್ತ ರೈತರಿಗೂ ಅತ್ತ ಕುಡಿಯುವ ನೀರು ಅವಲಂಬಿಸಿರುವ ಸಾರ್ವಜನಿಕರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜೂನ್ ತಿಂಗಳಲ್ಲಿ ಮಳೆ ಮತ್ತೆ ಚುರುಕಾಗದಿದ್ದರೆ ಸಂಕಷ್ಟ ಅನಿವಾರ್ಯ ಎಂಬಂತಾಗಿದೆ.

PREV
Read more Articles on
click me!

Recommended Stories

ಮಂಡ್ಯ ಮೂಲದ ಕುಟುಂಬಕ್ಕೆ ಮಾರ್ಗೋನಹಳ್ಳಿಯ 95 ಎಕರೆ ಗೋಮಾಳ ಭೂಮಿ ವರ್ಗಾವಣೆ ಆರೋಪ
ಹಾವೇರಿ ಬೆಳಗಾವಿ ಬಳಿಕ ಮತ್ತೆರಡು ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಚಿಂತನೆ, ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?