
ಮಂಡ್ಯ: ರಾಜ್ಯದ ಜನತೆಗೆ ಅದರಲ್ಲೂ ವಿಶೇಷವಾಗಿ ಕಾವೇರಿ ನಂಬಿರುವ ಅನ್ನದಾತರಿಗೆ ಕಡೆಗೂ ಮಳೆರಾಯ ಸಿಹಿ ಸುದ್ದಿ ನೀಡಿದ್ದಾನೆ. ಕಳೆದ ಆರು ತಿಂಗಳಿನಿಂದ ಮಳೆಯಿಲ್ಲದೆ ಸೊರಗಿದ್ದ ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗ ಮಳೆ ಚುರುಕುಗೊಂಡಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ (KRS) ಜಲಾಶಯಕ್ಕೆ ಜೀವಕಳೆ ಬಂದಿದೆ.
ಕಳೆದ ಕೆಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯದ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನಿನ್ನೆ ಕೇವಲ 1,449 ಕ್ಯೂಸೆಕ್ ಇದ್ದ ಒಳಹರಿವು, ಇಂದು ಬರೋಬ್ಬರಿ 4,291 ಕ್ಯೂಸೆಕ್ಗೆ ಏರಿಕೆಯಾಗಿದೆ. ಇದು ಕಳೆದ ಆರು ತಿಂಗಳಲ್ಲೇ ದಾಖಲಾದ ಗರಿಷ್ಠ ಒಳಹರಿವು ಎಂಬುದು ಗಮನಾರ್ಹ.
ಬೇಸಿಗೆಯ ಕಡು ಬಿಸಿಲು ಮತ್ತು ನೀರಿನ ಕೊರತೆಯಿಂದ ಕಂಗಾಲಾಗಿದ್ದ ಮಂಡ್ಯ, ಮೈಸೂರು ಭಾಗದ ರೈತರಿಗೆ ಈ ಬೆಳವಣಿಗೆ ಹೊಸ ಭರವಸೆ ನೀಡಿದೆ. ಕುಡಿಯುವ ನೀರಿನ ಸಮಸ್ಯೆ ನೀಗುವುದರ ಜೊತೆಗೆ, ಮುಂಗಾರು ಮಳೆ ಹೀಗೆಯೇ ಮುಂದುವರಿದರೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂಬ ಆಶಯ ವ್ಯಕ್ತವಾಗಿದೆ.
ಕೊಡಗು ಸೇರಿದಂತೆ ಕಾವೇರಿ ಹರಿವಿನ ಭಾಗಗಳಲ್ಲಿ ಮಳೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕೆಆರ್ಎಸ್ ಜಲಾಶಯಕ್ಕೆ ಬರುವ ನೀರಿನ ಪ್ರಮಾಣ ಇನ್ನು ಹೆಚ್ಚಾಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ವರುಣನ ಕೃಪೆಯಿಂದ ಕಾವೇರಿ ಒಡಲು ತುಂಬುತ್ತಿರುವುದು ನಾಡಿನ ಜನರಲ್ಲಿ ಸಂತಸ ತಂದಿದೆ.