ಜೈಪುರ ಸಾಹಿತ್ಯ ಉತ್ಸವದ ಆನ್‌ಗ್ರೌಂಡ್ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

By Suvarna NewsFirst Published Mar 10, 2022, 2:29 PM IST
Highlights

ಕಳೆದೈದು ದಿನಗಳಿಂದ ಆನ್‌ಲೈನ್ ಆವೃತ್ತಿಯಾಗಿ ನಡೆಯುತ್ತಿದ್ದ 15ನೇ ಜೈಪುರ ಸಾಹಿತ್ಯ ಉತ್ಸವದ ಆನ್‌ಗ್ರೌಂಡ್ ಆವೃತ್ತಿ ಇಂದು ಆರಂಭವಾಗಿದೆ. ಜೈಪುರದ ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್ ಈ ಸಾಹಿತ್ಯ ಹಬ್ಬಕ್ಕೆ ಚಾಲನೆ ನೀಡಿದ್ದಾರೆ. ಉಳಿದೆಲ್ಲ ಸಾಹಿತ್ಯ ಸಮ್ಮೇಳನಕ್ಕಿಂತ ವಿಭಿನ್ನ ಹಾಗೂ ವಿಶಿಷ್ಠ ಎನಿಸಿಕೊಂಡಿರುವ ಈ ಉತ್ಸವದ ಇಂದಿನ ವೈಶಿಷ್ಠ್ಯಗಳು ಇಲ್ಲಿವೆ.

ವರದಿ: ಜೋಗಿ

ಜೈಪುರ: ಶಂಖನಾದ, ನಗಾರಿ, ಕೊಂಬು-ಕಹಳೆ, ಮಂಗಳವಾದ್ಯ ಮತ್ತು ದೀಪ ಬೆಳಗುವುದರೊಂದಿಗೆ, ಜೈಪುರ ಸಾಹಿತ್ಯ ಜಾತ್ರೆ(Jaipur Literary Fest 2022)ಯ 15ನೇ ಆವೃತ್ತಿ ಸಡಗರದಿಂದ ಆರಂಭಗೊಂಡಿತು. ಜೈಪುರದ ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್(Vishwendra Singh), ಟೀಮ್ ವರ್ಕ್ ಸಂಸ್ಥೆಯ ಆಡಳಿತ ನಿರ್ದೇಶಕ ಸಂಜಯ್ ಕೆ ರಾಯ್, ಸಹ ನಿರ್ದೇಶಕಿ ನಮಿತಾ ಗೋಖಲೆ ಮತ್ತು ವಿಲಿಯಂ ಡಾರ್ಲಿಂಪಲ್ ದೀಪಗಳನ್ನು ಬೆಳಗುವ ಮೂಲಕ ಸಾಹಿತ್ಯೋತ್ಸವಕ್ಕೆ ಚಾಲನೆ ನೀಡಿದರು.

ಈ ಸಾಹಿತ್ಯ ಜಾತ್ರೆ ಅತ್ಯಂತ ವಿಶಿಷ್ಟವಾಗಿದೆ. ಜೈಪುರ ಪ್ರವಾಸೋದ್ಯಮ(Jaipur Tourism)ಕ್ಕೆ ಇದರ ಕೊಡುಗೆಯಿದೆ. ಕಳೆದ ಎರಡು ವರ್ಷಗಳಿಂದ ಪ್ರವಾಸೋದ್ಯಮ ಸೊರಗಿತ್ತು. ಈ ವರ್ಷದ ಬಜೆಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಮಾನ್ಯ ಮುಖ್ಯಮಂತ್ರಿಗಳು 1000 ಕೋಟಿ ರುಪಾಯಿ ಮೀಸಲಿಟ್ಟಿದ್ದಾರೆ. ಪ್ರವಾಸೋದ್ಯಮವನ್ನು ನಾವು ಒಂದು ಉದ್ಯಮ ಎಂದು ಘೋಷಿಸಿದ್ದೇವೆ. ಈ ಸಮಾರಂಭಕ್ಕೆ ಬಂದಿರುವ ಪ್ರತಿಯೊಂದು ದೇಶದ, ರಾಜ್ಯದ, ಜೈಪುರದ ಪ್ರಜೆಗಳಾದ ನೀವೆಲ್ಲರೂ ಜೈಪುರ ಪ್ರವಾಸೋದ್ಯಮದ ರಾಯಭಾರಿಗಳು ಎಂದು ವಿಶ್ವೇಂದ್ರ ಸಿಂಗ್ ಘೋಷಿಸಿದರು.

ಎರಡು ದಶಕಗಳ ಹಿಂದೆ ಬೆರಳೆಣಿಕೆಯ ಸಾಹಿತ್ಯಾಸಕ್ತರು ಆರಂಭಿಸಿದ್ದ ಸಾಹಿತ್ಯ ಜಾತ್ರೆ ಈಗ ವ್ಯಾಪಕವಾಗಿ ಬೆಳೆದಿದೆ. ಮಹಾನಗರಗಳಿಂದ ಮಾತ್ರವಲ್ಲ, ಸಣ್ಣ ಪುಟ್ಟ ಊರುಗಳಿಂದಲೂ ಸಾಹಿತ್ಯ ಆಸಕ್ತರು ಬರುತ್ತಿದ್ದಾರೆ. ಇದು ಸಾಹಿತ್ಯಕ್ಕಿರುವ ಶಕ್ತಿ. ನಮ್ಮನ್ನು ದೂರ ಮಾಡುವ ಶಕ್ತಿಗಳನ್ನು ನಾವು ಸಾಹಿತ್ಯದಿಂದಲೇ ಎದುರಿಸಬೇಕಾಗಿದೆ. ಕಳೆದ ಎರಡು ವರ್ಷಗಳ ಕಪ್ಪು ಛಾಯೆಯಿಂದ ನಮ್ಮನ್ನು ಪಾರು ಮಾಡುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಟೀಮ್ ವರ್ಕ್ ಆಡಳಿತ ನಿರ್ದೇಶಕ ಸಂಜಯ್ ಕೆ ರಾಯ್ ಹೇಳಿದರು.

ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ನಮಿತಾ ಗೋಖಲೆ(Namita Gokhale), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಬಗ್ಗೆ ಗೌರವ ಇದೆ. ಆದರೆ ಜೈಪುರ ಲಿಟರರಿ ಫೆಸ್ಟಿವಲ್ ಮತ್ತು ಇಲ್ಲಿಗೆ ಬಂದಿರುವ ಸಾಹಿತ್ಯಾಸಕ್ತರೇ ನನಗೆ ದೊಡ್ಡ ಪ್ರಶಸ್ತಿ. ಹೀಗಾಗಿ ಶುಕ್ರವಾರ ದೆಹಲಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗಲಾರೆ ಎಂದು ಹೇಳಿದರು. ಈ ಮಾತಿಗೆ ಶ್ರೋತೃಗಳ ಅಪಾರ ಮೆಚ್ಚುಗೆ ವ್ಯಕ್ತವಾಯಿತು.

5,000mAh ಬ್ಯಾಟರಿಯೊಂದಿಗೆ Realme 9 5G ಸರಣಿಯ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು?

ಐದು ನೊಬೆಲ್ ಪ್ರಶಸ್ತಿ ಪುರಸ್ಕೃತರು, ಬೂಕರ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರೆಲ್ಲ ಒಂದೇ ಕಡೆ ಸೇರುವ ಜಗತ್ತಿನ ಅತಿ ದೊಡ್ಡ ಸಾಹಿತ್ಯ ಕಾರ್ಯಕ್ರಮ ಇದು. ನಾವೆಲ್ಲ ಸಾಹಿತಿಗಳು. ಇಲ್ಲಿ ಬಂದು ಭಾಷಣ ಮಾಡಿ, ತಿಂದುಂಡು ಹೋಗುವುದನ್ನು ಬಿಟ್ಟರೆ ಮಿಕ್ಕ ಸಮಯವನ್ನೆಲ್ಲ ಬರೆಯುತ್ತಲೇ ಕಳೆಯುವವರು. ನಮ್ಮಂಥವರಿಗೆ ಇಂಥ ಸಾಹಿತ್ಯ ಕಾರ್ಯಕ್ರಮಗಳು ಅತೀ ಅಗತ್ಯ ಎಂದು ಸಹ ನಿರ್ದೇಶಕ ವಿಲಿಯಂ ಡಾರ್ಲಿಂಪಲ್ ಹೇಳಿದರು.

ಕಾರ್ಯಕ್ರಮದಲ್ಲಿ ಯುನೈಟೆಡ್ ನೇಷನ್ಸ್-ನ ಭಾರತೀಯ ಸಂಯೋಜನಾಧಿಕಾರಿ ಶೋಂಬಿ ಶಾರ್ಪ್ ಹಾಗೂ ದೆಹಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಹಾಗೂ ಲೇಖಕ ಹರೀಶ್ ತ್ರಿವೇದಿ ಇದ್ದರು. ಹರೀಶ್ ತ್ರಿವೇದಿ ಆಶಯ ನುಡಿಗಳನ್ನು ಆಡಿದರು. ಶೋಂಬಿ ಶಾರ್ಪ್ ನಮ್ಮ ಭೂಮಿಯ ಸೌಖ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಉಪನ್ಯಾಸ ನೀಡಿದರು.

ಡಿಗ್ಗಿ ಪ್ಯಾಲೇಸಿನಿಂದ ಕ್ಲಾಕ್ಸ್ ಅಮೀರ್‌ಗೆ
ಐದು ದಿನಗಳ ಆನ್ ಲೈನ್ ಸಾಹಿತ್ಯೋತ್ಸವ(online lit fest)ದ ನಂತರ ಇಂದು ಆನ್-ಗ್ರೌಂಡ್ ಸಾಹಿತ್ಯೋತ್ಸವ ಆರಂಭವಾಯಿತು. ಎರಡು ವರುಷಗಳ ಹಿಂದಿನ ಜೈಪುರ ಸಾಹಿತ್ಯೋತ್ಸವಕ್ಕೆ ಹೋಲಿಸಿದರೆ ಈ ಬಾರಿ ಭಾಗವಹಿಸಿದವರ ಸಂಖ್ಯೆ ಕಡಿಮೆಯಿತ್ತು, ಮಕ್ಕಳಿಗೆ ಪ್ರವೇಶವಿಲ್ಲದ್ದರಿಂದ ಹಾಗೂ ಪರೀಕ್ಷಾ ದಿನಗಳು ಸಮೀಪಿಸಿದ್ದರಿಂದ ಭಾಗಿಗಳ ಸಂಖ್ಯೆ ಕುಗ್ಗಿದೆ. ಆದರೆ ಆನ್ ಲೈನ್ ಮೂಲಕ ಇಡೀ ಜಗತ್ತು ಈ ಕಾರ್ಯಕ್ರಮ ನೋಡುತ್ತಿದೆ ಎಂದು ಸಂಜಯ್ ರಾಯ್ ಹೇಳಿದರು.

ಇಂಜಿನಿಯರಿಂಗ್‌ ಕೆಲಸ ತೊರೆದು ಬಿರಿಯಾನಿ ಶಾಪ್ ಇಟ್ಟ ಯುವಕರು

ಇಷ್ಟೂ ವರುಷಗಳ ಕಾಲ ಜೈಪುರದ ಡಿಗ್ಗಿ ಪ್ಯಾಲೇಸ್‌(Diggi Palace)ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ, ಈ ಸಾರಿ ಕ್ಲಾರ್ಕ್ಸ್ ಅಮೀರ್ ಹೋಟೆಲಿಗೆ ಬಂದಿದೆ. ಇದು ಹೆಚ್ಚು ವಿಶಾಲವಾಗಿದೆ, ಇಲ್ಲಿ ಭದ್ರತೆ ಹೆಚ್ಚಿದೆ ಮತ್ತು ವಾಹನಗಳ ಓಡಾಟ ಸುಲಭ ಎಂಬ ಕಾರಣಕ್ಕೆ ಜಾಗ ಬದಲಾಯಿಸಲಾಗಿದೆ. ಕ್ರಮೇಣ ಹೊಸ ಜಾಗಕ್ಕೆ ನಾವು ಹೊಂದಿಕೊಳ್ಳುತ್ತೇವೆ ಎಂದು ಸಂಜಯ್ ಹೊಸ ಜಾಗಕ್ಕೆ ಬಂದಿದ್ದಕ್ಕೆ ಕಾರಣ ನೀಡಿದರು.

click me!