ಸಸ್ಯ ಪ್ರಪಂಚದಲ್ಲೊಂದು ವಿಸ್ಮಯ! ಕಾಂಡ್ಲಾ ಸಸ್ಯದಲ್ಲಿದೆ ಈ ವಿಶೇಷ ಗುಣ

By Web DeskFirst Published Sep 21, 2018, 4:24 PM IST
Highlights

ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಮರಿಗಳನ್ನು ಶತ್ರುವಿನಿಂದ ಕಾಪಾಡುವುದಲ್ಲದೇ, ಅವು ಬೆಳೆದು ತಮ್ಮ ಆಹಾರವನ್ನು ತಾವೇ ದೊರಕಿಸಿಕೊಂಡು ಪ್ರಬುದವಾಗುವವರೆಗೂ ಅವುಗಳನ್ನು ಪೋಷಿಸಿ ಸಲಹುತ್ತವೆ.

ಆದರೆ ಇದು ಕೇವಲ ಪ್ರಾಣಿಗಳಿಗಷ್ಟೇ ಸಿಮೀತವಾಗಿಲ್ಲ. ‘ಕಾಂಡ್ಲಾ ಗಿಡಗಳು’ ಅಥವಾ ‘ಮ್ಯಾಂಗ್ರೋವ್ಸ್’ಗಳಲ್ಲಿನ ಒಂದು ಕುಟುಂಬ ರೈಜೋಫೊರೇಸಿ ಸಸ್ಯಕ್ಕೆ ಇಂಥ ಗುಣವಿದೆ. ಇವು ಸಾಮಾನ್ಯವಾಗಿ ಸಮುದ್ರದ ಉಪ್ಪು ನೀರು ಹಾಗೂ ನದಿಯ ಸಿಹಿ ನೀರು ಒಂದಕ್ಕೊಂದು ಕೂಡುವ ಅಳಿವೆ ಪ್ರದೇಶಗಳಲ್ಲಿ, ಜೌಗು ಪ್ರದೇಶಗಳಲ್ಲಿ ಹೇರಳವಾಗಿ ಕಂಡು ಬರುತ್ತವೆ. ಇಂತಹ ಪ್ರದೇಶಗಳಲ್ಲಿ ನೀರು ಹಾಗೂ ಮಣ್ಣು ಅಧಿಕ ಉಪ್ಪಿನಂಶ ಹೊಂದಿದ್ದು, ನೀರಿನ ಉಬ್ಬರ-ಇಳಿತದ ತೀವ್ರ ಹೊಡೆತಕ್ಕೆ ಒಳಪಟ್ಟಿರುತ್ತವೆ. ಇಲ್ಲಿನ ಮಣ್ಣಿನಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ ಇರುತ್ತದೆ.

ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾವುದೇ ಸಸ್ಯಗಳ ಬೀಜಗಳು ಮೊಳಕೆಯೊಡೆಯುವುದಿರಲಿ, ನೆಲಕ್ಕೆ ಬಿದ್ದ ಒಂದೆರಡು ದಿನಗಳಲ್ಲೇ ಕೊಳೆತು ಹೋಗಬಹುದು. ಈ ಪರಿಸ್ಥಿತಿಯನ್ನು ನಿಭಾಯಿಸ ಲೆಂದೇ ಕಾಂಡ್ಲಾ ಗಿಡಗಳಲ್ಲಿ ಬಲಿತ ಬೀಜವು ನೇರವಾಗಿ ನೆಲಕ್ಕೆ ಬೀಳದೆ ತಾಯಿ ಸಸ್ಯದ ಟೊಂಗೆ ಭದ್ರವಾಗಿ ಸೆರೆಯಾಗುತ್ತದೆ. ನಂತರ ನಿಧಾನವಾಗಿ ಮೊಳಕೆಯೊಡೆದು ತಾಯಿ ಗಿಡದಲ್ಲೇ ಸಸಿಯಾಗಿ ಬೆಳೆಯುತ್ತದೆ. ಸಸಿಯು ಗಿಡವಾಗಿ ಬೆಳೆಯುವಾಗ ತಾಯಿ ಸಸ್ಯದ ಮೇಲೆಯೇ ಆಧಾರವಾಗಿದ್ದು, ಈ ಸಸಿಗಳು ನೋಡಲು ನೇತಾಡುತ್ತಿರುವ ನುಗ್ಗೆಕಾಯಿಯಂತೆ ಕಾಣುತ್ತವೆ. ಸಸಿಯು ಕೆಳಗಿರುವ ನೆಲದ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸಿ ಸಲೀಸಾಗಿ ಬೆಳೆಯುವ ಹಂತಕ್ಕೆ ತಲುಪಿದಾಗ, ತಾಯಿ ಸಸ್ಯದಿಂದ ಬೇರ್ಪಟ್ಟು ಕೆಳಗಿನ ತೇವಯುಕ್ತ ಮಣ್ಣಿನಲ್ಲಿ ನೇರವಾಗಿ ಚುಚ್ಚಿಕೊಳ್ಳುತ್ತದೆ ಹಾಗೂ ಬೆಳೆಯಲಾರಂಭಿಸುತ್ತದೆ. 

click me!