Koppala ರಾಮನನ್ನು ಜಪಿಸಿದ ಮುಸ್ಲಿಂ ಸಮುದಾಯ

By Suvarna NewsFirst Published Apr 13, 2022, 5:37 PM IST
Highlights

ಕೊಪ್ಪಳ ಜಿಲ್ಲೆಯಲ್ಲಿ ಸದಾ ಭಾವೈಕ್ಯತೆಯನ್ನು ಸಾರುವ ಕಾರ್ಯಕ್ರಮಗಳು ಹಾಗೂ ಆಚರಣೆಗಳು ಜರುಗುತ್ತಿರುತ್ತವೆ. ಇದೀಗ ಕಾರಟಗಿಯಲ್ಲಿ ಮುಸ್ಲಿಂ ಜನಾಂಗದವರು  ಶ್ರೀರಾಮನಿಗೆ ಪೂಜೆ ಸಲ್ಲಿಸಿದ್ದಾರೆ.

ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಏ.13): ರಾಜ್ಯದಲ್ಲಿ ಹಲಾಲ, ಜಟ್ಕಾ ಕಟ್, ದೇವಸ್ಥಾನದ ಮುಂದೆ ಮುಸ್ಲಿಂ ಜನಾಂಗದವರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ. ಅನ್ಯ ಧರ್ಮಿಯರ ಅಟೋ ಹತ್ತಬೇಡಿ ಹೀಗೆ ಹಲವಾರು ವಿವಾದಗಳಿವೆ. ಈ ಮಧ್ಯೆ ಇಲ್ಲೊಂದು ಜಿಲ್ಲೆಯಲ್ಲಿ  ಹಿಂದುಗಳೊಂದಿಗೆ ಮುಸ್ಲಿಂ ಜನಾಂಗ ಸಹ ಸೇರಿ ರಾಮ ಜಪ ಮಾಡಿದ್ದಾರೆ. 

ಸೂಫಿ ಶರಣರ ನಾಡಲ್ಲಿ ರಾಮನ ಜಪ : ಕೊಪ್ಪಳ ಜಿಲ್ಲೆ ಅಂದರೆ ಸಾಕು ಅದು ಸೂಫಿ ಶರಣರ ನಾಡು ಎಂದು ಪ್ರಸಿದ್ಧಿ ಪಡೆದ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಸದಾ ಭಾವೈಕ್ಯತೆಯನ್ನು ಸಾರುವ ಕಾರ್ಯಕ್ರಮಗಳು ಹಾಗೂ ಆಚರಣೆಗಳು ಜರುಗುತ್ತಿರುತ್ತವೆ. ಇಂತಹ ಜಿಲ್ಲೆಯ ಕಾರಟಗಿ ಬಳಿಯ ದೇವಿಗುಡ್ಡದಲ್ಲಿ ಮುಸ್ಲಿಂ ಜನಾಂಗದವರು ಸಹ  ಶ್ರೀರಾಮನಿಗೆ ಪೂಜೆ ಸಲ್ಲಿಸಿದರು.

ಯಾವ ಕಾರಣಕ್ಕೆ ರಾಮಜಪ: ಕೊಪ್ಪಳ ಜಿಲ್ಲೆ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಹಾಲಿ ಹಾಗು ಮಾಜಿ ಶಾಸಕರು ಹನುಮ ಮಾಲೆ ಧಾರಣೆ ಮಾಡಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಶಿವರಾಜ ತಂಗಡಗಿ ಎರಡು ದಿನಗಳ ಹಿಂದೆ ಹನುಮ ಮಾಲೆ ಹಾಕಿಕೊಂಡಿದ್ದರು. ಅವರು ಕಾರಟಗಿಯ ದೇವಿಗುಡ್ಡದಲ್ಲಿ ವ್ರತ ಆಚರಣೆಯ ಪೂಜೆ ಸಲ್ಲಿಸುತ್ತಿದ್ದಾರೆ.

Bidar ಬೀದಿ ನಾಯಿಗಳಂತೆ ಕಿತ್ತಾಡಿಕೊಂಡ ಪಾಟೀಲ್ ಕುಟುಂಬ!

ಈ ಮಧ್ಯೆ ಕಾರಟಗಿಯ ಮುಸ್ಲಿಂ ಜನಾಂಗವರು ನಾವು ಶ್ರೀರಾಮ ಹಾಗು ಹನುಮನ ಪೂಜೆ ಮಾಡುತ್ತೇವೆ ಎಂದು ಕೇಳಿಕೊಂಡಿದ್ದರು. ಇದರಿಂದ ಖುಷಿಗೊಂಡ ತಂಗಡಗಿ ತಮ್ಮೊಂದಿಗೆ ಮುಸ್ಲಿಂ ಜನಾಂಗದವರನ್ನು ಕರೆದುಕೊಂಡು ಪೂಜೆ ಸಲ್ಲಿಸಿದರು. ಬಳಿಕ ಜೈ ಶ್ರೀರಾಮ್ ಎನ್ನುವ ಮೂಲಕ ರಾಮಜಪ ಮಾಡಿದರು.

ಮುಸ್ಲಿಮರು ಏನೆಲ್ಲ ಪೂಜೆ ಮಾಡಿದರು: ದೇವಿಗುಡ್ಡದಲ್ಲಿ ಹನುಮಂತ,‌ ಶ್ರೀರಾಮನ ಪೂಜೆಯಲ್ಲಿ ಮುಸ್ಲಿಂ ಸಮುದಾಯದ ಯುವಕರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಹನುಮಾನ ಚಾಲೀಸ ಸಹ ಪಠಣ ಮಾಡಿದರು. ಈ ಸಮಯದಲ್ಲಿ  ಮುಸ್ಲಿಂ ಮಹಿಳೆಯರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾವೈಕ್ಯತೆ ಮಂತ್ರ ಪಠಿಸಿದರು.

Vijayapura ಶಿಕ್ಷಕಿ ಬೀಳ್ಕೋಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು!

ಪ್ರಸಾದ ಬಡಿಸಿದ ಮುಸ್ಲಿಂ ಬಾಂಧವರು: ಇನ್ನು ಯಾವುದೇ ಪೂಜಾ ಕಾರ್ಯಕ್ರಮ ಇರಲಿ, ಅಲ್ಲಿ ಪೂಜೆ  ಮುಗಿದ ಬಳಿಕ ಪ್ರಸಾದ ಇರಲೇ ಬೇಕು. ಅದೇ ರೀತಿಯಾಗಿ ಹನುಮಮಾಲಾ ಕಾರ್ಯಕ್ರಮದಲ್ಲಿ ಪ್ರಸಾದ ವ್ಯವಸ್ಥೆಯೂ ಸಹ ಇತ್ತು. ಆದರೆ ವಿಶೇಷ ಅಂದರೆ ಎಲ್ಲಾ ಹನುಮ ಮಾಲಾಧಾರಿಗಳಿಗೆ ಸ್ವತಃ ಮುಸ್ಲಿಂ ಬಾಂಧವರೇ ಮುಂದೆ ನಿಂತುಕೊಂಡು ಪ್ರಸಾದ ವ್ಯವಸ್ಥೆ ಕೈಗೊಂಡರು.ಎಲ್ಲ ಹನುಮ ಮಾಲಾಧಾರಿಗಳ ಪ್ರಸಾದ ಮುಗಿದ ಬಳಿಕ ಎಲ್ಲ ಮುಸ್ಲಿಂ ಬಾಂಧವರು ತಾವು ಪ್ರಸಾದ ಸ್ವೀಕರಿಸಿದರು.

ಒಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಹಿಂದೂ ಹಾಗು ಮುಸ್ಲಿಂ ಜನಾಂಗದವರು ಸೌಹಾರ್ದತೆಯಿಂದ ಇರೋದಕ್ಕೆ ಇದು ಸಾಕ್ಷಿಯಾಗಿದ್ದು,ಇದು ನಿಜಕ್ಕೂ ಅನುಕರಣಿಯವೇ ಸರಿ.

click me!