ವಿವೇಕಾನಂದರ ಸಂದೇಶಗಳ ಪಾಲನೆ ಯುವಜನತೆಯ ಗುರಿಯಾಗಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

By Suvarna NewsFirst Published Jan 13, 2023, 8:15 PM IST
Highlights

ಸ್ವಾಮೀ ವಿವೇಕಾನಂದರು ನೀಡಿರುವ ಸಂದೇಶಗಳನ್ನು ಯುವಜನತೆ ತಮ್ಮ ಭವಿಷ್ಯದ ಗುರಿಯನ್ನಾಗಿಸಿಕೊಂಡು ಜೀವನದಲ್ಲಿ ಅತ್ಯುನ್ನತ ಸಾಧನೆಗಳನ್ನು ಮಾಡಬೇಕು ಎಂದು  ಕೇಂದ್ರ  ಸಚಿವೆ ಶೋಭಾ ಕರಂದ್ಲಾಜೆ  ಹೇಳಿದರು.

ಉಡುಪಿ (ಜ.13): ಸ್ವಾಮೀ ವಿವೇಕಾನಂದರು ನೀಡಿರುವ ಸಂದೇಶಗಳನ್ನು ಯುವಜನತೆ ತಮ್ಮ ಭವಿಷ್ಯದ ಗುರಿಯನ್ನಾಗಿಸಿಕೊಂಡು ಜೀವನದಲ್ಲಿ ಅತ್ಯುನ್ನತ ಸಾಧನೆಗಳನ್ನು ಮಾಡಬೇಕು ಎಂದು  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ  ಹೇಳಿದರು. ಅವರು ಅಜ್ಜರಕಾಡು ಮಹಾತ್ಮಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ,  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾಲೇಜು ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯುವ ಸ್ಪಂದನ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ, ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವಧರ್ಮ ಸಮ್ಮೇಳನದ ಮೂಲಕ ವಿವೇಕಾನಂದರು ಇಡೀ ವಿಶ್ವಕ್ಕೆ ಭಾರತದ ವೈಚಾರಿಕತೆಯನ್ನು ತಿಳಿಸುವ ಮೂಲಕ ದೇಶದ ಹಿರಿಮೆ, ಗರಿಮೆಯನ್ನು ಸಾರಿದ್ದಾರೆ. ದೇಶಪ್ರೇಮದ ಕುರಿತ ಅವರ ಸಂದೇಶಗಳು ಭಾರತ ಸ್ವಾತಂತ್ರ್ಯ ಸಂಗ್ರಾಮದ ಅಸಂಖ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿ ನೀಡಿವೆ. ಯುವ ಶಕ್ತಿಯ ಕುರಿತು ಅವರು ನೀಡಿರುವ ಸಂದೇಶಗಳನ್ನು ಯುವ ಜನತೆ ತಮ್ಮ ಗುರಿಯನ್ನಾಗಿ ಮಾಡಿಕೊಂಡು, ಉನ್ನತ ಸಾಧನೆಗಳನ್ನು ಮಾಡಬೇಕು. ಅವರ ಜೀವನ ಚೆರಿತ್ರೆಯನ್ನು ಅಧ್ಯಯನ ಮಾಡುವ ಮೂಲಕ ಅವರು ತೋರಿರುವ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.

ಸ್ವಾಮೀ ವಿವೇಕಾನಂದರ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಶ್ರೀಕಾಂತ ಶೆಟ್ಟಿ, ಭಾರತದಲ್ಲಿ ಇದುವರೆಗೆ ಹಲವು ಮಂದಿ ಸಂತರು ಮತ್ತು ಋಷಿಗಳು ಇದ್ದರೂ ಸಹ ಇಂದಿಗೂ ರಾಷ್ಟ್ರ ಸಂತ ಎಂದು ವಿವೇಕಾನಂದರನ್ನು ಮಾತ್ರ ಗುರುತಿಸಲಾಗುತ್ತದೆ. ಅವರು ಭಾರತದ ಸಂಸ್ಕೃತಿ, ಪರಂಪರೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದು, ಮಾತ್ರವಲ್ಲದೆ ಭಾರತೀಯರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸುವ ಮೂಲಕ ಮಹಾತ್ಮ ಗಾಂಧೀಜಿ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾಗಿದ್ದರು. ತಮ್ಮ ಸಂದೇಶಗಳ ಮೂಲಕ ಯುವ ಜನತೆಗೆ ಸ್ಪೂರ್ತಿಯಾಗಿದ್ದು, ಉತ್ತಮ ರಾಷ್ಟ್ರ ನಿರ್ಮಾಣ ಮತ್ತು ಯುವ ಜನತೆಯ ಸಮಗ್ರ ಬೆಳವಣಿಗೆಗೆ ಅವರ ಚಿಂತನೆ ಮತ್ತು ಆದರ್ಶಗಳು ಸದಾ ದಾರಿದೀಪವಾಗಿವೆ ಎಂದರು.

Chikkamagaluru: ಪತ್ರಕರ್ತರು ಪೂರ್ವಗ್ರಹ ಪೀಡಿತರಾಗದಿರಲಿ: ಶೋಭಾ ಕರಂದ್ಲಾ​ಜೆ

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು.

 

ಕೊಂಕಣ ರೈಲ್ವೆಯಲ್ಲಿ ಕಳ್ಳತನ ಪ್ರಕರಣ ಗಂಭೀರವಾಗಿ ಪರಿಗಣಿಸಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಡಾ.ರಾಜೇಂದ್ರ ನಿರೂಪಿಸಿದರು.

click me!