ಚಿತ್ತಾಪುರ: ಪ್ರವಾಹಕ್ಕೆ ಸಿಲುಕಿ ಯುವಕ ಸಾವು

By Kannadaprabha NewsFirst Published Sep 23, 2020, 3:35 PM IST
Highlights

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಹಸೀಲ್ದಾರ ಉಮಾಕಾಂತ ಹಳ್ಳೆ, ಸಿಪಿಐ ಕೃಷ್ಣಪ್ಪ ಕಲ್ಲದೇವರ, ಪಿಎಸ್‌ಐ ಶ್ರೀಶೈಲ್‌ ಅಂಬಾಟಿ| ಈ ಸಂಬಂಧ ಚಿತ್ತಾಪುರ ಪೊಲಿಸ್‌ ಠಾಣಿಯಲ್ಲಿ ಪ್ರಕರಣ ದಾಖಲು| 

ಚಿತ್ತಾಪುರ(ಸೆ.23): ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಯುವಕನೊಬ್ಬ ಹಳ್ಳದ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.

ಯುವಕನನ್ನು ಕರದಾಳ ಶಿವರಾಜ ತಂದೆ ಭಾಗಪ್ಪ (21) ಎಂದು ಗುರುತಿಸಲಾಗಿದ್ದು, ಕಳೆದ ಕೆಲವು ದಿನಗಳಿಂದ ಸತತವಾಗಿ ಬಂದ ಮಳೆಯಿಂದ ಹೊಲಗಳಲ್ಲಿ ನೀರು ಹೊಕ್ಕು ಬೆಳೆಗಳು ಕೊಳೆತು ಹೋಗುತ್ತಿರುವುದನ್ನು ತಪ್ಪಿಸಲು ಹೊಲದಲ್ಲಿನ ನೀರು ಹೊರ ಹೊಗುವಂತೆ ಮಾಡಿ ಸಂಜೆ ಮನೆಗೆ ಬರುವ ಸಮಯದಲ್ಲಿ ಗ್ರಾಮದ ಹೊರವಲಯದಲ್ಲಿರುವ ಹಳ್ಳದ ಸೇತುವೆಯ ಮೇಲೆ ನೀರು ಹರಿಯುತ್ತಿತ್ತು. ನೀರಿನ ರಭಸವನ್ನು ಅರಿಯದ ಶಿವರಾಜ ಸೇತುವೆ ದಾಟುಲು ಹೋಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ಘಟನೆ ನಡೆದ ತಕ್ಷಣ ಗ್ರಾಮದ ಯುವಕರು ರಕ್ಷಣೆಗಾಗಿ ಪ್ರಯತ್ನಪಟ್ಟರೂ ರಾತ್ರಿಯ ಸಮಯವಾಗಿದ್ದರಿಂದ ಅವರ ಪ್ರಯತ್ನ ವಿಫಲವಾಗಿತ್ತು. ಬೆಳಗ್ಗೆ ಕಲಬುರಗಿ ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಟಿ. ಪರಶುರಾಮ ಮತ್ತು ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಮುಸ್ತಾಖ ಖಾನ್‌ ಹಾಗೂ ಸಿಬ್ಬಂದಿಗಳು ಮೀನುಗಾರರ ಸಹಾಯದೊಂದಿಗೆ ಕಾರ್ಯಚರಣೆ ನಡೆಸಿ ಮಧ್ಯಾಹ್ನ 2 ಗಂಟೆಯ ಶವ ಹೊರತೆಗೆದರು. ಘಟನಾ ಸ್ಥಳಕ್ಕೆ ತಹಸೀಲ್ದಾರ ಉಮಾಕಾಂತ ಹಳ್ಳೆ, ಸಿಪಿಐ ಕೃಷ್ಣಪ್ಪ ಕಲ್ಲದೇವರ, ಪಿಎಸ್‌ಐ ಶ್ರೀಶೈಲ್‌ ಅಂಬಾಟಿ ಇದ್ದರು. ಚಿತ್ತಾಪುರ ಪೊಲಿಸ್‌ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

ಅಫಜಲ್ಪುರ: ಚಿಕ್ಕ ವಯಸ್ಸಲ್ಲೇ ಪಿಎಸ್‌ಐ ಆದ ಹಳ್ಳಿ ಪ್ರತಿಭೆ

ಪರಿಹಾರಕ್ಕೆ ಒತ್ತಾಯ:

ಬಡ ಕುಟುಂಬದಲ್ಲಿ ಮನೆಗೆ ಆಸರೆಯಾಗಿದ್ದ ಮಗ ಮೃತಪಟ್ಟಿದ್ದರಿಂದ ಮನೆಗೆ ಆಧಾರ ಇಲ್ಲದಂತಾಗಿದೆ. ಕ್ಷೇತ್ರದ ಶಾಸಕರು ಮತ್ತು ತಾಲೂಕು ಆಡಳಿತ ಮೃತನ ಕುಟುಂಬದ ಒಬ್ಬರಿಗೆ ಉದ್ಯೋಗ ಮತ್ತು ಆರ್ಥಿಕ ಸಹಾಯ ಮಾಡಿ ಕುಟುಂಬಕ್ಕೆ ಆಸರೆಯಾಗಬೇಕೆಂದು ನವ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ ಗುತ್ತೆದಾರ ಕರದಾಳ ಒತ್ತಾಯಿಸಿದ್ದಾರೆ.
 

click me!