Wildlife: ಭಾಗವತಿ ಬಳಿ ಒಂಟಿ ಸಲಗದ ಕಾಟ, ಕಬ್ಬು, ಬತ್ತದ ಬೆಳೆ ನಾಶ

By Kannadaprabha NewsFirst Published Jul 27, 2023, 11:31 AM IST
Highlights

ಎಡೆಬಿಡದೆ ಬೀಳುತ್ತಿರುವ ಮಳೆ ಒಂದೆಡೆಯಾದರೆ ಇನ್ನೊಂದೆಡೆ ಬತ್ತ, ಕಬ್ಬಿನ ಗದ್ದೆಗಳಿಗೆ ಲಗ್ಗೆಯಿಡುತ್ತಿರುವ ಒಂಟಿ ಸಲಗದಿಂದ ರೈತರು ಬೆಳೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ಹಳಿಯಾಳ (ಜು.27) :  ಎಡೆಬಿಡದೆ ಬೀಳುತ್ತಿರುವ ಮಳೆ ಒಂದೆಡೆಯಾದರೆ ಇನ್ನೊಂದೆಡೆ ಬತ್ತ, ಕಬ್ಬಿನ ಗದ್ದೆಗಳಿಗೆ ಲಗ್ಗೆಯಿಡುತ್ತಿರುವ ಒಂಟಿ ಸಲಗದಿಂದ ರೈತರು ಬೆಳೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ತಾಲೂಕಿನ ಕಾಡಂಚಿನ ಗ್ರಾಮವಾದ ಭಾಗವತಿ ಬಳಿಯ ಬತ್ತ, ಕಬ್ಬಿನ ಗದ್ದೆಗಳಿಗೆ ಕಳೆದೆರೆಡು ತಿಂಗಳಿಂದ ಒಂಟಿ ಸಲಗ ನಿತ್ಯವೂ ಬರುತ್ತಿದೆ. ಸಮೀಪದ ಕೆಗದಾಳ ಬಳಿಯ ಡ್ಯಾಂ ಹಿನ್ನಿರಿನ ಪ್ರದೇಶದಲ್ಲಿ ಆನೆಗಳ ಹಿಂಡೇ ನೆಲೆಸುತ್ತಿದ್ದು, ಈ ಹಿಂಡಿನಿಂದ ಬೇರೆಯಾಗಿರುವ ಒಂಟಿ ಸಲಗ ಜನವರಿಯಿಂದ ಭಾಗವತಿ, ಕೆಗದಾಳ ಕುಳಗಿ ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ಹೆದ್ದಾರಿಯಲ್ಲಿ ಕಾಯಂ ದರ್ಶನ ನೀಡುತ್ತಿದೆ. ಸದ್ಯ ಈಗ ಭಾಗವತಿ ಬಳಿಯ ಗದ್ದೆಗಳಿಗೆ ಲಗ್ಗೆಯಿಡುವ ಆನೆಯೂ ಸಹ ಇದೇ ಇರುಬಹುದೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

 

Wildlife: ಜನರನ್ನು ಕಾಡುತ್ತಿದ್ದ ಒಂಟಿ ಸಲಗ ಕಾಡಿಗಟ್ಟಿದ ಅರಣ್ಯ ಇಲಾಖೆ

ಪಂಚಮಿಯ ಮುನ್ನ ಬಂದ ಗಜರಾಜ:

ಗಣೇಶ ಪಂಚಮಿ ನಂತರ ಅಥವಾ ದಸರಾ ಸಮೀಪ ಬತ್ತ ಹಾಗೂ ಕಬ್ಬಿನ ಬೆಳೆ ಬೆಳೆದಾಗ ಈ ಭಾಗದಲ್ಲಿ ಆನೆಗಳು ಲಗ್ಗೆಯಿಡುವುದು ಸಹಜ. ಆದರೆ ಈ ವರ್ಷ ಮಾತ್ರ ಮೂರು ತಿಂಗಳ ಮುಂಚೆಯೇ ಗಜರಾಜ ಬಂದಿರುವುದು ಗ್ರಾಮಸ್ಥರನ್ನು ಚಿಂತೆಗೆ ತಳ್ಳಿದೆ. ಈ ವರ್ಷ ಸಕಾಲದಲ್ಲಿ ಮಳೆಯಾಗದೆ ಬಿತ್ತನೆ ಕಾರ್ಯ ತಡವಾಗಿ ನಡೆದಿದ್ದರೆ, ಈ ಬಾರಿ ಮುಂಗಾರು ಪೂರ್ವ ಮಳೆ ಕೊರತೆಯಿಂದಾಗಿ ಕಬ್ಬಿನ ಬೆಳೆ ಕಮರಿ ಇಳುವರಿ ಕುಂಠಿತಗೊಳ್ಳುವ ಆತಂಕವು ರೈತರನ್ನು ಕಾಡುತ್ತಿದೆ. ಹೀಗಿರುವಾಗ ಇಂತಹ ಸಂಕಷ್ಟದ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಬತ್ತ, ಕಬ್ಬಿನ ಪಸಲಿನಲ್ಲಿ ಗಜರಾಜ ಓಡಾಟ ನಡೆಸಿದ್ದು, ಬೆಳೆದ ಬೆಳೆಯು ಆನೆಯ ಪಾಲಾಗುತ್ತಿದೆ ಎಂದು ರೈತರು ಅಳಲು ತೊಡಿಕೊಳ್ಳುತ್ತಿದ್ದಾರೆ.

ರಾಮನಗರದಲ್ಲಿ ಇಬ್ಬರು ರೈತರನ್ನು ಬಲಿ ಪಡೆದಿದ್ದ ಪುಂಡಾನೆ ಸೆರೆ: ನಾಗರಹೊಳೆ ಅಭಿಮನ್ಯು ಸಾಹಸಕ್ಕೆ ಮೆಚ್ಚುಗೆ

ಒಂಟಿ ಆನೆಯು ಹೊಲಗದ್ದೆಗಳಿಗೆ ಲಗ್ಗೆಯಿಡುತ್ತಿರುವ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಭಾಗವತಿ ವಲಯ ಅರಣ್ಯಾಧಿಕಾರಿ ಸಿ.ಜಿ.ನಾಯ್ಕ , ಕಳೆದೆರೆಡು ತಿಂಗಳಿಂದ ಒಂಟಿ ಸಲಗ ಈ ಭಾಗದಲ್ಲಿಯೇ ಅಲೆದಾಡುತ್ತಿದೆ. ಕಬ್ಬಿನ ಹಂಗಾಮಿಗೆ ಲಗ್ಗೆಯಿಡುವ ಆನೆಗಳು ಈ ಬಾರಿ ಮುಂಚಿತವಾಗಿಯೇ ಆಗಮಿಸಿವೆ. ಗ್ರಾಮಸ್ಥರ ನೆರವಿನಲ್ಲಿ ಆನೆಯನ್ನು ಕಾಡಿಗೆ ಅಟ್ಟಲು ಇಲಾಖೆಯು ಕ್ರಮಕೈಗೊಳ್ಳುತ್ತಿದ್ದು, ಯಾರು ಆತಂಕ ಪಡಬಾರದು ಎಂದು ತಿಳಿಸಿದ್ದಾರೆ.

click me!