ಬಾಗಲಕೋಟೆಗೆ ಹಿಪ್ಪರಗಿ ಡ್ಯಾಂನಿಂದ ನೀರು ಬಿಡುಗಡೆ

By Kannadaprabha NewsFirst Published May 2, 2020, 12:39 PM IST
Highlights

ಕುಡಿಯುವ ನೀರಿಗೆ ಬಳಕೆ: ಹಿಪ್ಪರಗಿ ಜಲಾಶಯದಿಂದ 0.3 ಟಿಎಂಸಿ ನೀರು ಬಿಡುಗಡೆ| ಬೆಳಗಾವಿ ಜಿಲ್ಲೆಯ ಅಥಣಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಭಾಗಕ್ಕೆ ಕುಡಿವ ನೀರಿಗಾಗಿ ನೀರು ಬಿಡುಗಡೆ| ನಮ್ಮ ಹಾಗೂ ಅಥಣಿ ಶಾಸಕರ ಮನವಿ ಮೇರೆಗೆ 0.3 ಟಿಎಂಸಿಯಷ್ಟು ನೀರು ಹಿಪ್ಪರಗಿ ಜಲಾಶಯದಿಂದ ಬಿಡುಗಡೆ ಮಾಡಿ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ: ಆನಂದ ನ್ಯಾಮಗೌಡ|

ಜಮಖಂಡಿ(ಮೇ.02):  ಹಿಪ್ಪರಗಿ ಜಲಾಶಯದಿಂದ ಜಮಖಂಡಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುತ್ತಲಿನ ಸುಮಾರು 40 ಗ್ರಾಮಗಳಿಗೆ ಬೇಸಿಗೆಯಲ್ಲಿ ಕುಡಿವ ನೀರಿಗೆ ಚಿಕ್ಕಪಡಸಲಗಿ ಬ್ಯಾರೇಜ್‌ವರೆಗೆ ಶುಕ್ರವಾರ ಬೆಳಿಗ್ಗೆ 0.3 ಟಿಎಂಸಿ ನೀರನ್ನು ಬಿಟ್ಟಿದ್ದು, ಅವಶ್ಯಕತೆಗೆ ಅನುಗುಣವಾಗಿ ನೀರು ಬಿಡಲಾಗುತ್ತದೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ. 

ಸಮೀಪದ ಹಿಪ್ಪರಗಿ ಬ್ಯಾರೇಜ್‌ದಲ್ಲಿ ಕೃಷ್ಣೆಗೆ ಪೂಜೆ ಸಲ್ಲಿಸಿದ ತೇರದಾಳ ಶಾಸಕ ಸಿದ್ದು ಸವದಿ, ಅಥಣಿ ಶಾಸಕ ಮಹೇಶ ಕುಮಟಳ್ಳಿ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರ ಸಮ್ಮುಖದಲ್ಲಿ ಹಿಪ್ಪರಗಿ ಜಲಾಶಯದ ಅಧಿಕಾರಿಗಳು ನೀರು ಬಿಡುಗಡೆ ಮಾಡಿದರು.

ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ನಮ್ಮ ಹಾಗೂ ಅಥಣಿ ಶಾಸಕರ ಮನವಿ ಮೇರೆಗೆ 0.3 ಟಿಎಂಸಿಯಷ್ಟು ನೀರು ಹಿಪ್ಪರಗಿ ಜಲಾಶಯದಿಂದ ಬಿಡುಗಡೆ ಮಾಡಿ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಚಿಕ್ಕಪಡಸಲಗಿ ಬ್ಯಾರೇಜ್‌ವರೆಗೂ ನೀರು ತಲುಪಲಿದ್ದು, ರಾಜ್ಯ ಸರ್ಕಾರ ಬೇಸಿಗೆ ದಿನಗಳಲ್ಲಿ ಮತ್ತಷ್ಟು ನೀರು ಬಿಡುಗಡೆಗೆ ಸಹಮತ ನೀಡಬೇಕು ಎಂದರು.

ಬಸವ ಜಯಂತಿಯಂದೇ ಹುಟ್ಟು, ಸಾವು ಕಂಡ ಅಪರೂಪದ ಕರು: ಗ್ರಾಮಸ್ಥರಲ್ಲಿ ಅಚ್ಚರಿ

ಅಥಣಿ ಶಾಸಕ ಮಹೇಶ ಕುಮಟಳ್ಳಿ ಮಾತನಾಡಿ, ಹಿಪ್ಪರಗಿಯಲ್ಲಿ ನೀರಿನ ಅಧಿಕ ಪ್ರಮಾಣವಿದ್ದು, ಜೂನ್‌ ಮೊದಲ ವಾರದಿಂದ ಮಹಾರಾಷ್ಟ್ರದಿಂದ ನೀರು ಬರುತ್ತದೆ. ಬೇಸಿಗೆ ಸಂದರ್ಭದಲ್ಲಿ ನೀರನ್ನು ಕಡಿಮೆಗೊಳಿಸುವದಿಲ್ಲ. ರೈತರು ಹಾಗೂ ಜನತೆ ಆತಂಕಪಡುವ ಅಗತ್ಯವಿಲ್ಲ. ಬೇಸಿಗೆ ಸುಗಮವಾಗಿ ನಿಭಾಯಿಸಲು ಸನ್ನದ್ಧವಾಗಿದ್ದೇವೆ. ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿ ಬ್ಯಾರೇಜ್‌ವರೆಗೂ ನೀರಿನ ಹಾಹಾಕಾರ ಸದ್ಯದ ಮಟ್ಟಿಗಿಲ್ಲ. ಸರಾಗವಾಗಿ ನೀರು ಹೋಗಲು ಸಾಧ್ಯವಾಗಲಿದೆ. ಒಟ್ಟಾರೆ ಕುಡಿಯುವ ನೀರಿಗೆ ಬೇಸಿಗೆ ಸಂದರ್ಭದಲ್ಲಿ ಸಮಸ್ಯೆಗೆ ಕಡಿವಾಣ ಹಾಕಲು ಯಶಸ್ವಿಯಾಗಲಿದೆ. ಸದ್ಯ ಹಿಪ್ಪರಗಿಯಲ್ಲಿ 2.65 ಟಿಎಂಸಿಯಷ್ಟು ನೀರಿನ ಸಂಗ್ರಹವಿದ್ದು, ಅದರಲ್ಲಿ 0.3 ಟಿಎಂಸಿ ನೀರು ಬಿಟ್ಟಿದ್ದು, ಇನ್ನೂ 2.35 ಟಿಎಂಸಿ ಯಷ್ಟು ನೀರು ಬ್ಯಾರೇಜ್‌ನಲ್ಲಿ ಸಂಗ್ರಹವಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಮೇಲ್ಮನೆ ಮಾಜಿ ಸದಸ್ಯ ಜಿ.ಎಸ್‌.ನ್ಯಾಮಗೌಡ, ಜಿಪಂ ಸದಸ್ಯ ಪುಂಡಲೀಕ ಪಾಲಭಾವಿ, ಬಸವರಾಜ ಬಿರಾದಾರ, ಬಸವರಾಜ ಸಿಂಧೂರ ಇದ್ದರು.
 

click me!