ಕಲಬುರಗಿ: ಫೋನ್ ಪೇ ಮೂಲಕ ಲಂಚ ಸ್ವೀಕಾರ, ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ

By Girish GoudarFirst Published Jun 8, 2022, 10:23 AM IST
Highlights

*   ಕಲಬುರಗಿ ಜಿಲ್ಲೆಯ ಅಫಜಲಪೂರ ಪಟ್ಟಣದಲ್ಲಿ ನಡೆದ ಘಟನೆ
*  ಮಹಾಬಲೇಶ್ವರ ಕುಂಬಾರ ಬಲೆಗೆ ಬಿದ್ದ ಕಂದಾಯ ಇಲಾಖೆ ಅಧಿಕಾರಿ
*  ಎಸಿಬಿಗೆ ಲಿಖಿತ ದೂರು ನೀಡಿದ್ದ ರೈತ ಶರಣಪ್ಪ 

ಕಲಬುರಗಿ(ಜೂ.08):  ಫೋನ್ ಪೇನಲ್ಲಿ ಲಂಚ ಸ್ವೀಕರಿಸಿದ ಗ್ರಾಮಲೆಕ್ಕಿಗನೊಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪೂರ ಪಟ್ಟಣದಲ್ಲಿ ನಿನ್ನೆ(ಮಂಗಳವಾರ) ಸಂಜೆ ನಡೆದಿದೆ. ಗ್ರಾಮ ಲೆಕ್ಕಿಗ ಮಹಾಬಲೇಶ್ವರ ಕುಂಬಾರ ಬಲೆಗೆ ಬಿದ್ದ ಕಂದಾಯ ಇಲಾಖೆ ಅಧಿಕಾರಿಯಾಗಿದ್ದಾನೆ. 

ಅಫಜಲಪುರ ತಾಲೂಕಿನ ಹಿರೇ ಜೇವರ್ಗಿ ಗ್ರಾಮದ ಶರಣಬಸಪ್ಪ ಎನ್ನುವವರು ಜಮೀನಿನ ಮಿಟೇಶನ್‌ಗಾಗಿ ಗ್ರಾಮ ಲೆಕ್ಕಿಗ ಮಹಾಬಲೇಶ್ವರ ಕುಂಬಾರ ಬಳಿ ತೆರಳಿದ್ದರು. ಆಗ ಆತ ಐದು ಸಾವಿರ ರೂಪಾಯಿ ಲಂಚ ಕೇಳಿದ್ದನಂತೆ, ಲಂಚ ಕೊಡದಿದ್ದಕ್ಕೆ ಕೆಲ ದಿನಗಳ ಕಾಲ ಸತಾಯಿಸಿದ್ದನು.  

ಕಲಬುರಗಿ: ಮಾತು ಕೇಳದ ಮಗನಿಗೆ ಕಾದ ಕಬ್ಬಿಣದಿಂದ ಸುಟ್ಟು ವಿಕೃತಿ ಮೆರೆದ ಮಲತಾಯಿ..!

ಬಳಿಕ ಶರಣಬಸಪ್ಪ ಅವರು ಮಹಾಬಲೇಶ್ವರನ ಬ್ಯಾಂಕ್ ಅಕೌಂಟ್‌ಗೆ ಐದು ಸಾವಿರ ರೂಪಾಯಿ ಫೋನ್ ಪೇ ಮೂಲಕ ಜಮಾ ಮಾಡುತ್ತಾರೆ. ನಂತರವೇ ಮಿಟೇಷನ್ ಕೆಲಸ ಮಾಡಿಕೊಟ್ಟ ಮಹಾಬಲೇಶ್ವರ ಕುಂಬಾರ, ಕೆಲಸವಾದ ನಂತರ ಮತ್ತೆ ಖುಷಿಯಿಂದ ಇನ್ನೊಂದಿಷ್ಟು ಹಣ ಕೊಡುವಂತೆ ಪೀಡಿಸುತ್ತಿದ್ದನಂತೆ. 

ಇದರಿಂದ ಅಸಮಾಧಾನಗೊಂಡ ರೈತ ಶರಣಪ್ಪ, ಎಸಿಬಿಗೆ ಲಿಖಿತ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಎಸಿಬಿ ಕಾರ್ಯಾಚರಣೆ ಶುರು ಮಾಡಿದಾಗ ನಿನ್ನೆ(ಮಂಗಳವಾರ) ಸಂಜೆ ಅಫಜಲಪೂರದಲ್ಲಿ ಮತ್ತಷ್ಟು ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕು ಬಿದ್ದಿದ್ದಾನೆ. 

ಈ ಲಂಚಬಾಕ ಗ್ರಾಮ ಲೆಕ್ಕಿಗ ಮಹಾಬಲೇಶ್ವರ ಕುಂಬಾರನನ್ನು ಎಸಿಬಿ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಕಲಬುರಗಿ ಎಸಿಬಿ ಡಿವೈಎಸ್ಪಿ ಸಂತೋಷ್ ಬನಟ್ಟಿ, ಪಿಐ ಬಾಬಾಸಾಹೇಬ್ ಪಾಟೀಲ್, ಸಿಬ್ಬಂದಿಗಳಾದ ಫಹಿಮ್, ಮರೆಪ್ಪ, ಪ್ರದೀಪ್, ಯಮನೂರಪ್ಪ, ಬಂದೇನವಾಜ್, ಶರಣಬಸವ ಅವರುಗಳೆಲ್ಲಾ ಎಸಿಬಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

click me!