Vijyapura;   ಅತಿವೃಷ್ಟಿಯಿಂದಾದ ಹಾನಿ ಪ್ರದೇಶಕ್ಕೆ ಉಮೇಶ್ ಕತ್ತಿ ಭೇಟಿ

By Gowthami KFirst Published Aug 9, 2022, 9:43 PM IST
Highlights

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ  ಉಮೇಶ ಕತ್ತಿ ಜಿಲ್ಲಾ ಪ್ರವಾಸ ಕೈಗೊಂಡು ಅತಿವೃಷ್ಟಿಯಿಂದಾದ ಹಾನಿಯನ್ನು ಖುದ್ದು ಪರಿಶೀಲಿಸಿದರು. ಡೋಣಿ ನದಿ ಪ್ರವಾಹದಿಂದ  ನೀರು ನದಿ ಅಂಚಿನ ಗ್ರಾಮಗಳ ಸಂಪರ್ಕದ ಕೆಲವು ಒಳ ರಸ್ತೆಗಳ ಸಂಚಾರ ಸ್ಥಗಿತಗೊಂಡಿದ್ದವು.

 ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಆ.9): ಅರಣ್ಯ ಹಾಗೂ ಆಹಾರ ಇಲಾಖೆಯ ಸಚಿವ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ  ಉಮೇಶ ಕತ್ತಿ ಜಿಲ್ಲಾ ಪ್ರವಾಸ ಕೈಗೊಂಡು ಅತಿವೃಷ್ಟಿಯಿಂದಾದ ಹಾನಿಯನ್ನು ಖುದ್ದು ಪರಿಶೀಲಿಸಿದರು. ಡೋಣಿ ನದಿ ಪಾತ್ರದ ನಾನಾ ಗ್ರಾಮಗಳಿಗೆ ತೆರಳಿ ಡೋಣಿ ಅಬ್ಬರದಿಂದ ಹಾನಿಗೊಳಗಾದ ಜಮೀನು, ಮನೆಗಳು, ಹಳ್ಳ ಮತ್ತು ರಸ್ತೆಗಳನ್ನು ಸಚಿವರು ವೀಕ್ಷಣೆ ನಡೆಸಿದರು. ಡೋಣಿ ನದಿ ಪ್ರವಾಹದಿಂದ  ನೀರು ನದಿ ಅಂಚಿನ ಗ್ರಾಮಗಳ ಸಂಪರ್ಕದ ಕೆಲವು ಒಳ ರಸ್ತೆಗಳ ಸಂಚಾರ ಸ್ಥಗಿತಗೊಂಡಿದ್ದವು. ತಿಕೋಟಾ-ಬಬಲೇಶ್ವರ ಮಧ್ಯದ ರಸ್ತೆಯು ಹರನಾಳ ಬಳಿಯಲ್ಲಿ ಕಿತ್ತು ಹೋಗಿರುವುದನ್ನು ಸಚಿವರು ಖುದ್ದು ವೀಕ್ಷಣೆ ನಡೆಸಿದರು. ಡೋಣಿ ನದಿ ತುಂಬಿ ಹರಿದು ತೊಂದರೆಗೊಳಗಾದ ಡೋಣಿ ನದಿ ಪಾತ್ರದ ಗ್ರಾಮಗಳಾದ ದನ್ಯಾಳ, ದಾಸ್ಯಾಳ, ಕೋಟ್ಯಾಳ ಮತ್ತು ಹರನಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಚಿವರು ಭೇಟಿ ನೀಡಿದರು. ಉಕ್ಕಿ ಹರಿದ ಡೋಣಿ ನದಿ ನೀರಿನಿಂದಾಗಿ ನಮ್ಮ ಜಮೀನುಗಳಲ್ಲಿನ ಬೆಳೆ ಹಾನಿಯಾಗಿದೆ. ವಿಪರೀತ ಸುರಿದ ಮಳೆಯಿಂದಾಗಿ ಗ್ರಾಮಗಳಲ್ಲಿನ ಕೆಲವು ಮನೆಗಳು ಕುಸಿದಿವೆ ಎಂದು ಆಯಾ ಗ್ರಾಮಸ್ಥರು ಸಚಿವರ ಎದುರು ಅಳಲು ತೋಡಿಕೊಂಡರು. ನದಿ ನೀರಿನಿಂದಾಗಿ ಗ್ರಾಮದ ಸುತ್ತಲಿನ ಹಳ್ಳಗಳು ತುಂಬಿ ಹರಿದಿದ್ದವು. ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಮನೆಗಳಿಗೆ ನೀರು ನುಗ್ಗಿತ್ತು ಎಂದು ಆಯಾ ಗ್ರಾಮಸ್ಥರು ತಾವು ಎದುರಿಸಿದ ಸಂಕಟ-ತೊಂದರೆಯನ್ನು ಸಚಿವರ ಎದುರು ಎಳೆಎಳೆಯಾಗಿ ಬಿಚ್ಚಿಟ್ಟರು.

ಸ್ಥಳಾಂತರಕ್ಕೆ ಮನವಿ ಮಾಡಿದ ಹರನಾಳ ಗ್ರಾಮಸ್ಥರು! 
ಸಚಿವರು ಹರನಾಳ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸಚಿವ ಉಮೇಶ ಕತ್ತಿ ಗ್ರಾಮಸ್ಥರು ಬೇಡಿಕೆ ಆಲಿಸಿದರು. ಈ ವೇಳೆ ಗ್ರಾಮಸ್ಥರು ತಾವು 12 ವರ್ಷಗಳಿಂದಲೂ ಇಂತಹ ಪ್ರವಾಹದ ದುಸ್ಥಿತಿಯನ್ನು ಎದುರಿಸುತ್ತಲೇ ಬಂದಿದ್ದೇವೆ. ಜೋರು ಮಳೆಯಾಗುತ್ತಲೇ ನದಿಗೆ ನೀರು ರಭಸದಿಂದ ಬಂದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗುತ್ತದೆ. ಕೆಲವರು ಮಾಳಿಗೆ ಏರುತ್ತಾರೆ. ಇನ್ನೂ ಕೆಲವು ಊರಿನಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುತ್ತಾರೆ.

ದೋಣಿ ನದಿ ಅಂಚಿನ ಗ್ರಾಮಗಳಾದ ಕಣಮುಚನಾಳ, ಕೋಟ್ಯಾಳ, ದಾಸ್ಯಾಳ, ಧನ್ಯಾಳ ಸೇರಿದಂತೆ ವಿವಿಧ ಗ್ರಾಮಗಳನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ, ನಮ್ಮೂರನ್ನು ಇದುವರೆಗೆ ಸ್ಥಳಾಂತರ ಮಾಡಿಲ್ಲ. ನಮ್ಮ ಗ್ರಾಮದ ಸ್ಥಳಾಂತರಕ್ಕೆ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಇದೆ ವೇಳೆ ಹರನಾಳ ಗ್ರಾಮಸ್ಥರಾದ ಮಾಳಪ್ಪ, ಮಲ್ಲಿಕಾರ್ಜುನ ಕಾಳೆ ಹಾಗೂ ಇತರರು ಸಚಿವರಲ್ಲಿ ಮನವಿ ಮಾಡಿದರು.

Chitradurga; ಜಿಟಿ ಜಿಟಿ ಮಳೆಗೆ ಅಡಿಕೆ, ಈರುಳ್ಳಿ ಬೆಳೆ ಸಂಪೂರ್ಣ ನಾಶ

ಪರಿಹಾರ ಕ್ರಮಕ್ಕೆ ಸೂಚನೆ ನೀಡಿದ ಸಚಿವರು! 
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.68ರಷ್ಟು ಹೆಚ್ಚು ಮಳೆಯಾಗಿದೆ. ಆಗಸ್ಟ್ ಮಾಹೆಯಲ್ಲಿ ವಾಡಿಕೆಗಿಂದ ಶೇ.383ರಷ್ಟು ಹೆಚ್ಚು ಮಳೆಯಾಗಿದೆ. ಮಳೆ ನೀರು ಮನೆಗೆ ನುಗ್ಗಿ ವಿವಿಧ ತಾಲೂಕುಗಳಲ್ಲಿ ಮನೆಗಳಿಗೆ ಹಾನಿಯಾದ ಪ್ರಕರಣಗಳಿಗೆ ಈಗಾಗಲೇ 10,000 ರೂ. ಪರಿಹಾರ ಧನ ನೀಡಲಾಗಿದೆ. ಮಾನವ ಹಾನಿ ಜಾನುವಾರು ಹಾನಿ ಪ್ರಕರಣಗಳಿಗೆ ಪರಿಹಾರ ವಿತರಿಸಲಾಗುತ್ತಿದೆ. ಆಗಸ್ಟ್ ಮಾಹೆಯಲ್ಲಿ ಭಾರಿ ಮಳೆಯಿಂದಾಗಿ 11.236 ಹೆಕ್ಟೇರನಲ್ಲಿ ಕೃಷಿ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ.

CHIKKAMAGALURU RAIN; ತತ್ತರಿಸಿದ ಮಲೆನಾಡು, ಮಳೆ ಅಬ್ಬರಕ್ಕೆ ಓರ್ವ ಬಲಿ

ಇದಕ್ಕೆ ಪರಿಹಾರ ತಂತ್ರಾಂಶದಲ್ಲಿ ಬೆಳೆಹಾನಿ ದಾಖಲಿಸಿ ಪರಿಹಾರ ಧನ ವಿತರಿಸಲಾಗುತ್ತಿದೆ. ಅದೇ ರೀತಿ 265.80 ಹೆಕ್ಟೇರ್ ತೋಟಗಾರಿಕಾ ಪ್ರದೇಶದಲ್ಲಿ ಹಾನಿಯಾಗಿದೆ. ಇದಕ್ಕೆ ಪರಿಹಾರ ಕ್ರಮಕ್ಕೆ ಸೂಚಿಸಲಾಗಿದೆ. ಅಂಗನವಾಡಿ ಕಟ್ಟಡ ಹಾನಿ, ಶಾಲಾ ಕಟ್ಟಡ ಹಾನಿ, ವಿದ್ಯುತ್ ಕಂಬ ಹಾನಿ, ರಸ್ತೆಗಳ ಹಾನಿ ಮತ್ತು ಸೇತುವೆ ಹಾನಿ ಹಾಗೂ ಇನ್ನೀತರ ಹಾನಿ ಸೇರಿ ಅಂದಾಜು 6101 ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಪರಿಹಾರ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

click me!