ಅಪಾಯ ಮಟ್ಟಮೀರಿ ಹರಿಯುತ್ತಿರುವ ವೇದಾವತಿ

By Kannadaprabha NewsFirst Published Oct 22, 2022, 11:10 AM IST
Highlights
  • ಅಪಾಯ ಮಟ್ಟಮೀರಿ ಹರಿಯುತ್ತಿರುವ ವೇದಾವತಿ
  • ಮುಳ್ಳು ತಂತಿ ಬೇಲಿ ದಾಟಿ ನೀರಿಗಿಳಿಯದಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಮನವಿ

ಹಿರಿಯೂರು (ಅ.22) : ವಿವಿ ಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಸಾರ್ವಜನಿಕರು ಮುಳ್ಳು ತಂತಿ ದಾಟಿ ನೀರಿಗಿಳಿವ ಪ್ರಯತ್ನ ಮಾಡಬಾರದೆಂದು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಮನವಿ ಮಾಡಿದ್ದಾರೆ. ಜಲಾಶಯ ಭರ್ತಿಯಾಗಿ ಕೋಡಿಯಿಂದ ಹೊರಬರುತ್ತಿರುವ ನೀರು ಹೊಸದುರ್ಗ ರಸ್ತೆಯ ಮೇಲೆ ಅಪಾಯದ ಮಟ್ಟಮೀರಿ ಹರಿಯುತ್ತಿದೆ. ಹೊಸದುರ್ಗ ಮಾರ್ಗದ ಡಾಂಬಾರು ರಸ್ತೆ ಯಾವುದೇ ಕ್ಷಣದಲ್ಲಿ ಕೊಚ್ಚಿಕೊಂಡು ಹೋಗಿ ಪ್ರಾಣಾಪಾಯವಾಗುವ ಸಂಭವವಿದೆ. ಮಾರಿಕಣಿವೆ ಹಾಗೂ ಹಾರನಕಣಿವೆ ಕಡೆಯಿಂದಾಗಲಿ ಸಾರ್ವಜನಿಕರು ಮುಳ್ಳು ತಂತಿ ಬೇಲಿ ದಾಟಿ ನೀರಿಗೆ ಇಳಿಯಬಾರದು ಎಂದು ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಮುನ್ನೆಚ್ಚರಿಕೆ ನೀಡಿದ್ದಾರೆ.

ಬಳ್ಳಾರಿ: ಆಂಧ್ರ ಗಡಿಭಾಗದಲ್ಲಿ ಭಾರೀ ಮಳೆ, ನದಿಯಲ್ಲಿ ಕೊಚ್ಚಿಹೋದ ಎತ್ತು

ವಿವಿಸಾಗರ ಜಲಾಶಯ ಮತ್ತು ವಿವಿಪುರ ನಡುವೆ ಇರುವ ಸಂಪರ್ಕ ಸೇತುವೆ ಮೇಲೆ ದೊಡ್ಡ ಗುಂಡಿಗಳು ಬಿದ್ದು ಸೇತುವೆ ದುರಸ್ಥಿಯಲ್ಲಿರುವುದರಿಂದ ತಾತ್ಕಾಲಿಕವಾಗಿ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಿವಿ ಸಾಗರಕ್ಕೆ ಬರುವ ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸಬೇಕು. ಕಳೆದ ಎರಡು ವಾರಗಳಿಂದ ವಾಣಿವಿಲಾಸ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ವಿವಿ ಸಾಗರ ಜಲಾಶಯಕ್ಕೆ ಒಳ ಹರಿವು ಜಾಸ್ತಿಯಾಗುತ್ತಿದೆ.

ಬಯಲುಸೀಮೆ ಸೇರಿ 6 ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಶುಕ್ರವಾರ 13 ಸಾವಿರ ಕ್ಯುಸೆಕ್‌ ಒಳಹರಿವು ಇದ್ದು, ಇನ್ನೂ ಹೆಚ್ಚಾಗುವ ಸಂಭವವಿದೆ. ನದಿಪಾತ್ರದ ಮೂಲಕ ನೀರು ಹೆಚ್ಚುವರಿಯಾಗಿ ಹರಿಯುತ್ತಿರುವುದರಿಂದ ಹಿರಿಯೂರು ಮತ್ತು ಚಳ್ಳಕೆರೆ ತಾಲೂಕು ವ್ಯಾಪ್ತಿಯ ವೇದಾವತಿ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಬರುವ ವಾಣಿವಿಲಾಸಪುರ, ಅರಮನೆ ಹಟ್ಟಿ,ಕುರುಬರಹಳ್ಳಿ, ಅಮ್ಮನಹಟ್ಟಿ, ಕಾತ್ರಿಕೇನಹಳ್ಳಿ, ಹೊಸ ಕಾತ್ರಿ ಕೇನಹಳ್ಳಿ, ಕೂನಿಕೆರೆ, ಲಕ್ಕವ್ವನಹಳ್ಳಿ, ಹಿರಿಯೂರು, ಮಾರುತಿ ನಗರ, ರಂಗನಾಥಪುರ, ಉಪ್ಪಳಗೆರೆ, ನಾಗೇನಹಳ್ಳಿ, ಯಳನಾಡು, ಕೂಡ್ಲಹಳ್ಳಿ, ಲಂಬಾಣಿ ಹಟ್ಟಿ, ಬ್ಯಾಡರಹಳ್ಳಿ, ದೇವರಕೊಟ್ಟ, ತೊರೆ ಒಬೇನಹಳ್ಳಿ, ಕಂಬತ್ತಳ್ಳಿ, ಬಿದರಕೆರೆ, ಸಂಗೇನಹಳ್ಳಿ, ಶಿಡ್ಲಯ್ಯನಕೋಟೆ ಹಾಗೂ ನದಿ ಪಾತ್ರದ ಗ್ರಾಮಗಳಲ್ಲಿ ವಾಸಿಸುವ ಜನರು ಎಚ್ಚರಿಕೆ ವಹಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

click me!