ದೇಗುಲಗಳಿಗೆ ಧರ್ಮಸ್ಥಳದಿಂದ 14 ಕೋಟಿ ರು.: ಡಾ.ಹೆಗ್ಗಡೆ

By Kannadaprabha NewsFirst Published Oct 25, 2020, 10:12 AM IST
Highlights

ಧರ್ಮಸ್ಥಳದ ವತಿಯಿಂದ ಕಳೆದ ವರ್ಷ ರಾಜ್ಯದ 1,135 ದೇವಾಲಯಗಳಿಗೆ 14 ಕೋಟಿ ರು. ಹಣವನ್ನು ಪ್ರಸಾದ ರೂಪದಲ್ಲಿ ನೀಡಲಾಗಿದೆ 

ಬೆಳ್ತಂಗಡಿ (ಅ.25):  ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಕಳೆದ ವರ್ಷ ರಾಜ್ಯದ 1,135 ದೇವಾಲಯಗಳಿಗೆ 14 ಕೋಟಿ ರು. ಹಣವನ್ನು ಪ್ರಸಾದ ರೂಪದಲ್ಲಿ ನೀಡಲಾಗಿದೆ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಧರ್ಮಸ್ಥಳದಲ್ಲಿ ಶನಿವಾರ ನಡೆದ ಡಾ.ಹೆಗ್ಗಡೆಯವರ ಪಟ್ಟಾಭಿಷೇಕದ 53ನೇ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಕ್ಷೇತ್ರದಿಂದ ನಡೆಯುವ ವಿವಿಧ ಕಾರ್ಯಕ್ರಮಗಳನ್ನು ವಿವರಿಸಿ, ಸರ್ಕಾರ ಹಾಗೂ ಧರ್ಮೋತ್ಥಾನ ಟ್ರಸ್ಟ್‌ ವತಿಯಿಂದ ಪರಂಪರೆಗೆ ಚ್ಯುತಿ ಬಾರದಂತೆ ರಾಜ್ಯಾದ್ಯಂತ 250ಕ್ಕೂ ಹೆಚ್ಚು ದೇವಸ್ಥಾನಗಳನ್ನು ನವೀಕರಿಸಲಾಗಿದೆ. ನಮ್ಮೂರ ನಮ್ಮ ಕೆರೆ ಯೋಜನೆಯಲ್ಲಿ ಸರ್ಕಾರದ ನೆರವಿನಿಂದ 10 ಕೋಟಿ ರು. ವೆಚ್ಚದಲ್ಲಿ 150 ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಎಂದರು.

ಮತ್ತೆರಡು ಮಾರ್ಗವಾಗಿ ಧರ್ಮಸ್ಥಳಕ್ಕೆ KSRTC ಬಸ್ ಸಂಚಾರ : ಮನವಿ ..

ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿನ ಸದಸ್ಯರ ಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕಾಗಿ 21 ಕೋಟಿ ರು. ವಿನಿಯೋಗಿಸಿ 20,000 ಟ್ಯಾಬ್‌, 10,000 ಲ್ಯಾಪ್‌ಟಾಪ್‌, ವಾತ್ಸಲ್ಯ ಯೋಜನೆಯಡಿ 10,400 ನಿರ್ಗತಿಕರಿಗೆ 2 ಕೋಟಿ ಖರ್ಚಿನಲ್ಲಿ ಹಾಸಿಗೆ, ಮಂಚ, ಹೊದಿಕೆ ಇತ್ಯಾದಿ ಜೀವನಾವಶ್ಯಕ ಸಾಮಗ್ರಿ ಒದಗಿಸಲಾಗುವುದು. ಸಿರಿ ಧಾನ್ಯ ಬೆಳೆ ಪ್ರೋತ್ಸಾಹಿಸುವ ಉದ್ದೇಶದಿಂದ ಧಾರವಾಡದಲ್ಲಿ ಕೇಂದ್ರವೊಂದನ್ನು ತೆರೆಯಲಾಗುವುದು. ಯಂತ್ರಶ್ರೀ ಯೋಜನೆಯಲ್ಲಿ 8 ಸಾವಿರ ಎಕರೆ ಭತ್ತದ ಕೃಷಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಜಾನಪದ ವಿವಿ ನಿವೃತ್ತ ಉಪಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಶುಭಾಶಂಸನೆಗೈದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಕಾಂತಾವರದ ಕನ್ನಡ ಸಂಘ ಪ್ರಕಟಿಸಿದ ‘ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು’ ಕೃತಿಯನ್ನು ಹಾಗೂ ಹೇಮಾವತೀ ವೀ.ಹೆಗ್ಗಡೆಯವರು ಹೆಗ್ಗಡೆಯವರ ಪರಿಚಯದ ವಿಡಿಯೋವನ್ನು ಬಿಡುಗಡೆಗೊಳಿಸಿದರು.

click me!