ಜಲಜೀವನ್‌ ಯೋಜನೆಗೆ ಅನುಮೋದನೆ: ಸಚಿವ ಜೋಶಿ ಹರ್ಷ

By Kannadaprabha NewsFirst Published May 28, 2021, 12:47 PM IST
Highlights

* 1032 ಕೋಟಿ ವೆಚ್ಚದಲ್ಲಿ ಧಾರವಾಡ ಜಿಲ್ಲೆಯ ಹಳ್ಳಿಗಳಿಗೆ ಶುದ್ಧ ನೀರು ಸರಬರಾಜು ಯೋಜನೆ
* ನೀರು ಪೂರೈಸುವ ಜಲಮೂಲಗಳ ನವೀಕರಣ
* ಪ್ರತಿ ವ್ಯಕ್ತಿಗೆ ಪ್ರತಿದಿನ 55 ಲೀ. ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶ

ಹುಬ್ಬಳ್ಳಿ(ಮೇ.28):  ಗ್ರಾಮಗಳ ಜನತೆಗೆ ಶುದ್ಧ ಕುಡಿವ ನೀರು ಒದಗಿಸುವ ಧ್ಯೇಯದೊಂದಿಗೆ ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ ಯೋಜನೆಯಡಿ ಹಾಗೂ ನಬಾರ್ಡ್‌ ಇನ್ಫ್ರಾಸ್ಟ್ರಕ್ಚರ್‌ ಡವಲಪ್‌ಮೆಂಟ್‌ ಅಸಿಸ್ಟೆನ್ಸ್‌ ನೆರವಿನಿಂದ ಜಿಲ್ಲೆಯ 388 ಗ್ರಾಮಗಳಿಗೆ ಬಹುಗ್ರಾಮ ಕುಡಿವ ನೀರು ಸರಬರಾಜು ಯೋಜನೆಗೆ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ.

ಕುಂದಗೋಳ, ನವಲಗುಂದ ಹಾಗೂ ಕಲಘಟಗಿ ಪಟ್ಟಣವೂ ಸೇರಿದಂತೆ ಒಟ್ಟು 144 ಗ್ರಾಪಂಗಳ 388 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯಿದು. 1032.49 ಕೋಟಿ ರು. ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದಂತಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಸವದತ್ತಿಯ ಮಲಪ್ರಬಾ ಜಲಾಶಯದಿಂದ ನೀರು ಪೂರೈಸುವ ಈ ಯೋಜನೆಯ ಅನುಷ್ಠಾನ ಜಿಲ್ಲೆಯ ನೀರಿನ ಬವಣೆ ತಪ್ಪಿಸಲು ಅತ್ಯಂತ ಮಹತ್ವದ್ದಾಗಿದೆ. ಗ್ರಾಮದ ಪ್ರತಿ ಮನೆಗೂ ನಳದ ನೀರು ಸಂಪರ್ಕ ಒದಗಿಸುತ್ತಿರುವುದು ವಿಶೇಷ. ಧಾರವಾಡ ಜಿಲ್ಲೆಯಲ್ಲಿ 388 ಗ್ರಾಮಗಳಲ್ಲಿ 179130 ಮನೆಗಳಿವೆ. ಈ ಪೈಕಿ ಧಾರವಾಡ ತಾಲೂಕಿನ 114, ಹುಬ್ಬಳ್ಳಿ- 47, ಕಲಘಟಗಿ - 88, ಕುಂದಗೋಳ -51, ನವಲಗುಂದ - 59 ಜನವಸತಿಗಳಿಗೆ ನಳದ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಯೋಜನೆಯ ಅನುಷ್ಠಾನ ಕಾರ್ಯ ಆರಂಭಗೊಂಡಿದ್ದು, ಜಿಲ್ಲೆಯ ಎಲ್ಲ ಮನೆಗಳಿಗೂ ನಳದ ನೀರು ಸಂಪರ್ಕ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹುಬ್ಬಳ್ಳಿಯಲ್ಲಿ ಸೋನು ಸೂದ್‌ ನೆರವಿನ ತುರ್ತು ಆಕ್ಸಿಜನ್‌ ಸೇವಾ ಕೇಂದ್ರ ಆರಂಭ

ಯೋಜನೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿರುವ ಪ್ರತಿ ವ್ಯಕ್ತಿಗೆ ಪ್ರತಿದಿನ 55 ಲೀ. ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶ ಜಲಜೀವನ್‌ ಮಿಷನ್‌ ಹೊಂದಿದೆ. ಈ ಯೋಜನೆ ಮೂಲಕ ಗ್ರಾಮಗಳಿಗೆ ನೀರು ಪೂರೈಸುವ ಜಲಮೂಲಗಳ ನವೀಕರಣವನ್ನು ಮಾಡಲಾಗುತ್ತದೆ. ಈಗಾಗಲೇ ಇರುವ ಓವರ್‌ಹೆಡ್‌ ಟ್ಯಾಂಕ್‌ಗಳ ನವೀಕರಣ, ಅಗತ್ಯವಾದರೆ ಹೊಸ ಓವರ್‌ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಯೋಜನೆ ಅನುಮೋದನೆ ನೀಡಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ, ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರಿಗೆ ಅಭಿನಂದನೆ ತಿಳಿಸುವುದಾಗಿ ತಿಳಿಸಿದ್ದಾರೆ.
 

click me!