
ಕುಂದಾಪುರ(ಮೇ.28): ಇರಾಕ್, ಕುವೈಟಿನ ಮೇಲೆ ಯುದ್ಧ ಸಾರಿದ ಸಮಯದಲ್ಲಿ ವಿಮಾನ ಹಾಗೂ ರಸ್ತೆ ಮೂಲಕ ಹಲವಾರು ಭಾರತೀಯರನ್ನು ಸ್ವದೇಶಕ್ಕೆ ಕರೆ ತಂದ ಹೆಗ್ಗಳಿಕೆ ಹೊಂದಿದ್ದ, ಉಡುಪಿಯಲ್ಲಿ ಜೆಎಂಜೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಕ, ಸಮಾಜಸೇವಕ ಜಾರ್ಜ್ ಡಿ. ಅಲ್ಮೇಡಾ(75) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಕುಂದಾಪುರ ಪಡುಕೋಣೆಯವರಾಗಿದ್ದ ಇವರು ತ್ರಾಸಿಯಲ್ಲಿ ನೆಲೆಸಿ 30 ವರ್ಷಗಳ ಕಾಲ ಕುವೈಟಿನ ದರ್ ಅಲ್ ಸಫಿ ಆಸ್ಪತ್ರೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದರು. ಈ ಸಂದರ್ಭ ನೂರಾರು ಯುವಕರನ್ನು ವಿದೇಶಕ್ಕೆ ಕರೆದೊಯ್ದು ಉದ್ಯೋಗ ನೀಡಿದ್ದರು.
ಉಡುಪಿ ದತ್ತು ಸ್ವೀಕಾರ ಕೇಂದ್ರದಲ್ಲಿ 13 ಮಕ್ಕಳಿಗೆ ಕೊರೊನಾ ಪಾಸಿಟಿವ್
ಜಾರ್ಜ್ ಅವರು ವೃತ್ತಿಯಲ್ಲಿ ತೋರಿದ ಶ್ರೇಷ್ಠ ವೈಯಕ್ತಿಕ ಸಾಧನೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಅಮೆರಿಕದ ಅಂತಾರಾಷ್ಟ್ರೀಯ ತಮಿಳು ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿತ್ತು.
ಗ್ಲೋಬಲ್ ಎಕಾನಮಿಕ್ಸ್ ಪ್ರೋಗ್ರೆಸ್ ರಿಸರ್ಚ್ ಅಸೋಸಿಯೇಷನ್ ವತಿಯಿಂದ ಮದರ್ ಥೆರೆಸಾ ಎಕ್ಸಲೆನ್ಸ್ ಅವಾರ್ಡ್ 2010 ಪ್ರಶಸ್ತಿ ಪುರಸ್ಕೃತರಾಗಿದ್ದರು. ರಾಷ್ಟ್ರಮಟ್ಟದಲ್ಲಿ 100 ಮಂದಿ ಸಾಧಕರಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗಿದ್ದು ಕರ್ನಾಟಕದಲ್ಲಿ ಜಾರ್ಜ್ ಡಿ. ಅಲ್ಮೇಡಾ ಮಾತ್ರ ಈ ಪ್ರಶಸ್ತಿ ಪಡೆದಿದ್ದಾರೆ. ಕುವೈಟ್ ಯುದ್ಧದ ಬಳಿಕ ಭಾರತದಲ್ಲಿಯೇ ನೆಲೆಸಿದ ಇವರು 90ರ ದಶಕದ ಅಂತ್ಯದಲ್ಲಿ ಉಡುಪಿಯಲ್ಲಿ ಜೆಎಂಜೆ ಎಂಬ ಹೆಸರಿನ ಅತ್ಯಾಧುನಿಕ ಆಸ್ಪತ್ರೆ ಸ್ಥಾಪಿಸಿ ಅದರ ಆಡಳಿತ ನಿರ್ದೇಶಕರಾಗಿದ್ದರು.