Udupi: ಫೇಸ್‌ಬುಕ್ ಫ್ರೆಂಡ್ ಕಳುಹಿಸಿದ 'ಡಾಲರ್‌' ನಂಬಿ ₹7.10 ಲಕ್ಷ ಕಳೆದುಕೊಂಡ ಕುಂದಾಪುರ ಮಹಿಳೆ; ನೀವೂ ಹುಷಾರ್!

Published : Feb 19, 2026, 09:38 PM IST
Facebook Scam

ಸಾರಾಂಶ

ಉಡುಪಿಯ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿದೇಶಿ ವ್ಯಕ್ತಿಯ ಮಾತು ನಂಬಿ, ಬೆಲೆಬಾಳುವ ಉಡುಗೊರೆಯ ಆಮಿಷಕ್ಕೆ ಒಳಗಾಗಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಬಂದ ವಂಚಕರು, ಪಾರ್ಸೆಲ್ ಬಿಡುಗಡೆ ನೆಪದಲ್ಲಿ ಅವರಿಂದ ಹಂತ ಹಂತವಾಗಿ ₹7.10 ಲಕ್ಷ ರೂಪಾಯಿಗಳನ್ನು ಪಡೆದು ಮೋಸ ಮಾಡಿದ್ದಾರೆ.

ಕುಂದಾಪುರ (ಫೆ.19): ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸೈಬರ್ ವಂಚಕರ ಬಲೆಗೆ ಸುಶಿಕ್ಷಿತರೇ ಬೀಳುತ್ತಿರುವುದು ಆತಂಕಕಾರಿ ಸಂಗತಿ. ಫೇಸ್‌ಬುಕ್ ಪರಿಚಯವನ್ನೇ ಬಂಡವಾಳವಾಗಿಸಿಕೊಂಡು ವಿದೇಶಿ ವ್ಯಕ್ತಿಯ ಸೋಗಿನಲ್ಲಿ ಬಂದ ವಂಚಕನೊಬ್ಬ, ಉಡುಪಿಯ 37 ವರ್ಷದ ಮಹಿಳೆಗೆ ಬರೋಬ್ಬರಿ ₹7.10 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾನೆ.

ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ದಿವ್ಯಾ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಫೆಬ್ರವರಿ 4ರಂದು ಫೇಸ್‌ಬುಕ್‌ನಲ್ಲಿ "Amadeo Luca" ಎಂಬ ಹೆಸರಿನ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಮತ್ತು ಸಂದೇಶ ಬಂದಿತ್ತು. ಆರಂಭದಲ್ಲಿ ಮೆಸೆಂಜರ್ ಹಾಗೂ ವಾಟ್ಸಾಪ್ ಮೂಲಕ ಆತ್ಮೀಯವಾಗಿ ಮಾತನಾಡಿದ ಅಪರಿಚಿತ ವ್ಯಕ್ತಿ, ತಾನು ವಿದೇಶದಿಂದ ಬೆಲೆಬಾಳುವ ಉಡುಗೊರೆ ಕಳುಹಿಸುವುದಾಗಿ ನಂಬಿಸಿದ್ದ.

ಬಂಗಾರ, ಡಾಲರ್ ಆಮಿಷದ ಪಾರ್ಸೆಲ್!

ಫೆಬ್ರವರಿ 8ರಂದು ವಂಚಕನು ತಾನು ಪಾರ್ಸೆಲ್ ಕಳುಹಿಸಿರುವುದಾಗಿ ತಿಳಿಸಿ, ಅದರಲ್ಲಿ ಬಂಗಾರದ ಒಡವೆಗಳು, ಐಫೋನ್ ಹಾಗೂ ಸಾವಿರಾರು ಡಾಲರ್ ಹಣವಿದೆ ಎಂದು ಫೋಟೋಗಳನ್ನು ಕಳುಹಿಸಿ ಆಮಿಷವೊಡ್ಡಿದ್ದ. ಈ ಪಾರ್ಸೆಲ್ ದೆಹಲಿ ವಿಮಾನ ನಿಲ್ದಾಣ ತಲುಪಿದೆ ಎಂದು ನಂಬಿಸಲು ಆತನ ತಂಡದ ಇತರ ಸದಸ್ಯರು ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿದ್ದರು.

ಹಂತ ಹಂತವಾಗಿ ₹7.10 ಲಕ್ಷ ವಸೂಲಿ

ಪಾರ್ಸೆಲ್ ಬಿಡುಗಡೆ ಮಾಡಲು ವಿಮಾನ ನಿಲ್ದಾಣದ ಶುಲ್ಕ, ತೆರಿಗೆ ಹಾಗೂ ಪ್ರೊಸೆಸಿಂಗ್ ಚಾರ್ಜ್‌ಗಳ ನೆಪದಲ್ಲಿ ವಂಚಕರು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಸೂಚಿಸಿದರು. ಇದನ್ನು ನಂಬಿದ ಮಹಿಳೆ NEFT ಮತ್ತು RTGS ಮೂಲಕ ಹಂತ ಹಂತವಾಗಿ ಒಟ್ಟು 7,10,000 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಇಷ್ಟೆಲ್ಲಾ ಹಣ ನೀಡಿದರೂ ಪಾರ್ಸೆಲ್ ತಲುಪದೆ, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ತಾನು ಮೋಸ ಹೋಗಿರುವುದು ಮಹಿಳೆಗೆ ಅರಿವಾಗಿದೆ.

ಪೊಲೀಸ್ ತನಿಖೆ ಮತ್ತು ಎಚ್ಚರಿಕೆ

ಈ ಬಗ್ಗೆ ಉಡುಪಿ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ ಹಾಗೂ ಬಿಎನ್‌ಎಸ್ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ: "ಯಾವುದೇ ಅಪರಿಚಿತ ವ್ಯಕ್ತಿ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ಮೂಲಕ ಬೆಲೆಬಾಳುವ ಉಡುಗೊರೆ ಕಳುಹಿಸುತ್ತೇವೆ ಎಂದರೆ ನಂಬಬೇಡಿ. ಕಸ್ಟಮ್ಸ್ ಅಧಿಕಾರಿಗಳು ಎಂದೂ ವೈಯಕ್ತಿಕ ಖಾತೆಗಳಿಗೆ ಹಣ ವರ್ಗಾಯಿಸಲು ಕೇಳುವುದಿಲ್ಲ. ಯಾವುದೇ ಹಣ ಪಾವತಿಸುವ ಮುನ್ನ ಎಚ್ಚರ ವಹಿಸಿ," ಎಂದು ಸೈಬರ್ ಪೊಲೀಸರು ಕಟ್ಟುನಿಟ್ಟಿನ ಮನವಿ ಮಾಡಿದ್ದಾರೆ.

 

PREV
Read more Articles on
click me!

Recommended Stories

ನಂದಿನಿ ಉತ್ಪನ್ನ 'ವಿಷ' ಎಂದ ವೈದ್ಯೆಗೆ ಶಾಕ್: ಡಾ. ಶರಣ್ಯಾ ಪದ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ಕೆಎಂಎಫ್!
ಗುಡ್ಡದ ದುರುಗಮ್ಮ ದೇವರ ಮೇಲಿನ ಹಕ್ಕಿಗಾಗಿ ಯಡಚಿ ಮತ್ತು ಕ್ಯಾತನಕೇರಿ ಗ್ರಾಮಸ್ಥರ ಹೊಡೆದಾಟ; 10 ಮಂದಿಗೆ ಗಾಯ!