ಗದಗ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಹೆಚ್ಚಾಯ್ತು ದೇವಾಲಯ, ದೇವರ ಮೂರ್ತಿಗಳ ಧ್ವಂಸ!

Published : Feb 19, 2026, 08:46 PM IST
Gadag Temple desecration

ಸಾರಾಂಶ

ಗದಗ ಜಿಲ್ಲೆಯಲ್ಲಿ ದೇವಸ್ಥಾನಗಳ ಧ್ವಂಸ ಪ್ರಕರಣಗಳು ಮುಂದುವರೆದಿದ್ದು, ಮುಂಡರಗಿ ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ ಮತ್ತೆರಡು ಘಟನೆಗಳು ವರದಿಯಾಗಿವೆ. ಕಿಡಿಗೇಡಿಗಳು ಪುರಾತನ ಹಾಗೂ ಜನವಸತಿಯಿಲ್ಲದ ದೇಗುಲಗಳನ್ನು ಗುರಿಯಾಗಿಸಿಕೊಂಡು ಶಿವಲಿಂಗ ಮತ್ತು ದೇವಿಯ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ.

ಗದಗ (ಫೆ.19): ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಚಿನ್ನದ ನಿಧಿ ಸಿಕ್ಕಿದ ಬೆನ್ನಲ್ಲಿಯೇ 101 ದೇವಾಲಯಗಳ ಉತ್ಖನನ ಕಾರ್ಯವೂ ನಡೆಯುತ್ತಿದೆ. ಈ ಶುಭ ಸುದ್ದಿಯ ಬೆನ್ನಲ್ಲಿಯೇ ಜಿಲ್ಲೆಯಾದ್ಯಂತ ವಿವಿದೆಡೆ ದೇವಾಲಯಗಳ ಧ್ವಂಸ ಹಾಗೂ ದೇವರ ಮೂರ್ತಿಗಳ ಧ್ವಂಸ ಮಾಡುವುದು, ವಿರೂಪಗೊಳಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮೂಲಕ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಕಿಡಿಗೇಡಿಗಳ ಕೃತ್ಯವು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಮಹಾಶಿವರಾತ್ರಿಯಂದು ಶಿಂಗಟಾಲೂರು ಗ್ರಾಮದಲ್ಲಿ ನಡೆದ ಘೋರ ಕೃತ್ಯದ ಕಲೆ ಮಾಸುವ ಮುನ್ನವೇ ಜಿಲ್ಲೆಯ ಮತ್ತೊಂದು ಎರಡು ಕಡೆಗಳಲ್ಲಿ ದೇವರ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ.

ಸರಣಿ ದಾಳಿ ಎಲ್ಲೆಲ್ಲಿ?

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿ ಗ್ರಾಮದ ದೇವಸ್ಥಾನಗಳಲ್ಲಿ ಈ ಕೃತ್ಯ ನಡೆದಿದೆ. ಮಲ್ಲಿಕಾರ್ಜುನಪುರದಲ್ಲಿರುವ ಶಿವನ ದೇವಾಲಯದಲ್ಲಿ ಶಿವಲಿಂಗವನ್ನು ಧ್ವಂಸಗೊಳಿಸಲಾಗಿದ್ದರೆ, ಆದರಳ್ಳಿಯ ದಂಡಿನ ಮರಿಯಮ್ಮ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ಅವಮಾನ ಮಾಡಲಾಗಿದೆ. ದುರುಳರು ಮರಿಯಮ್ಮ ದೇವಿಯ ಮೂರ್ತಿಯ ಮುಖಕ್ಕೆ ಮಸಿ ಬಳಿದಿದ್ದಲ್ಲದೆ, ಮುಖದ ಭಾಗವನ್ನು ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ.

ಪುರಾತನ ಗುಡಿಗಳೇ ಟಾರ್ಗೆಟ್

ಈ ಕೃತ್ಯಗಳನ್ನು ಗಮನಿಸಿದರೆ ಕಿಡಿಗೇಡಿಗಳು ವ್ಯವಸ್ಥಿತವಾಗಿ ಸಂಚು ರೂಪಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜನವಸತಿ ಇಲ್ಲದ ಪ್ರದೇಶಗಳಲ್ಲಿರುವ ಮತ್ತು ಪುರಾತನ ಕಾಲದ ದೇವಸ್ಥಾನಗಳನ್ನೇ ಇವರು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಶಿವರಾತ್ರಿಯ ದಿನದಂದು ಶಿಂಗಟಾಲೂರು ಗ್ರಾಮದಲ್ಲಿ ಶಿವಲಿಂಗ, ನಂದಿ ವಿಗ್ರಹ ಹಾಗೂ ಹೊನ್ನತ್ತೆಮ್ಮ ಮೂರ್ತಿಯನ್ನು ಭಗ್ನಗೊಳಿಸಿದ್ದ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಈಗ ಮತ್ತೆ ಎರಡು ಕಡೆಗಳಲ್ಲಿ ಕೃತ್ಯ ನಡೆಸಿರುವುದು ಭಕ್ತರ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದೆ.

ಗ್ರಾಮಸ್ಥರ ಆಕ್ರೋಶ:

ದೇವಸ್ಥಾನಗಳಲ್ಲಿ ಮೂರ್ತಿಗಳು ಭಗ್ನಗೊಂಡಿರುವ ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಗ್ರಾಮಸ್ಥರು ದೇವಸ್ಥಾನಗಳ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 'ನಮ್ಮ ಧರ್ಮದ ಭಾವನೆಗಳ ಜೊತೆ ಆಟವಾಡುತ್ತಿರುವ ಇಂತಹ ದುಷ್ಟರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು' ಎಂದು ಒತ್ತಾಯಿಸಿದ್ದಾರೆ. ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ಪೊಲೀಸ್ ಇಲಾಖೆಯ ವೈಫಲ್ಯವೋ ಅಥವಾ ವ್ಯವಸ್ಥಿತ ಸಂಚೋ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ.

PREV
Read more Articles on
click me!

Recommended Stories

ಚಿಕ್ಕಮಗಳೂರು ನೈತಿಕ ಪೊಲೀಸ್‌ಗಿರಿ: ಮುಸ್ಲಿಂ ಹುಡುಗಿ ಜೊತೆಗಿದ್ದ ಯುವಕನಿಗೆ ಹಲ್ಲೆ; ಕೇಳಿದ ತಾಯಿ ಮೇಲೂ ಹಲ್ಲೆ ಯತ್ನ!
ವಾಲ್ಮೀಕಿ ಶ್ರೀಗಳಿಗೆ ಲಘು ಹೃದಯಾಘಾತ, ಇಲ್ಲಿದೆ ಈಗಿನ ಹೆಲ್ತ್ ಅಪ್ಡೇಟ್; ಫೋನಲ್ಲಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ!