
ಉಡುಪಿ (ಏ.26): ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸೋಡು ಗ್ರಾಮದಲ್ಲಿ ಹದಿನೈದು ಅಡಿ ಆಳದ ವಾರಾಹಿ ಕಾಲುವೆಗೆ ಬಿದ್ದಿದ್ದ ಬೃಹತ್ ಗಾತ್ರದ ಕಾಡುಕೋಣವೊಂದನ್ನು ಸತತ 20 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಯಶಸ್ವಿಯಾಗಿ ರಕ್ಷಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಮೂಕ ಪ್ರಾಣಿಯೊಂದು ಸಾವಿನ ದವಡೆಯಿಂದ ಪಾರಾಗಿದೆ.
ಅಸೋಡು ಗ್ರಾಮದ ಶ್ರೀಕುಮಾರ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪವಿರುವ ವಾರಾಹಿ ಕಾಲುವೆಗೆ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಈ ಕಾಡುಕೋಣ ಆಕಸ್ಮಿಕವಾಗಿ ಬಿದ್ದಿತ್ತು. ಕಾಡಿನಿಂದ ನಾಡಿನತ್ತ ಆಹಾರ ಮತ್ತು ನೀರು ಅರಸಿಕೊಂಡು ಬಂದಿದ್ದ ಕಾಡುಕೋಣ, ಕಾಲುವೆಯ ಪಾರ್ಶ್ವ ಗೋಡೆಗಳ ಎತ್ತರ ಅರಿಯದೆ ಒಳಕ್ಕೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಕಾಲುವೆಯ ಪಾರ್ಶ್ವ ಗೋಡೆಗಳು ಕಡಿದಾಗಿದ್ದರಿಂದ ಕಾಡುಕೋಣಕ್ಕೆ ತನ್ನಷ್ಟಕ್ಕೆ ತಾನೇ ಮೇಲೆ ಬರಲು ಸಾಧ್ಯವಾಗಲಿಲ್ಲ. ಶುಕ್ರವಾರ ರಾತ್ರಿಯಿಡೀ ಕಾಲುವೆಯ ನೀರು ಮತ್ತು ಕತ್ತಲಲ್ಲೇ ಕಾಲ ಕಳೆದ ಪ್ರಾಣಿ, ಮೇಲೆ ಬರಲು ಹರಸಾಹಸ ಪಟ್ಟಿತ್ತು. ವಿಷಯ ತಿಳಿದ ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ರೂಪಿಸಿದರು. ಆರಂಭದಲ್ಲಿ ಪ್ರಾಣಿಯನ್ನು ಮೇಲಕ್ಕೆತ್ತುವುದು ಸವಾಲಾಗಿತ್ತು. ಹೀಗಾಗಿ, ಶನಿವಾರ ಬೆಳಿಗ್ಗೆ ಕಾಲುವೆಯ ಒಂದು ಭಾಗಕ್ಕೆ ಜೆಸಿಬಿ ಮೂಲಕ ಮಣ್ಣು ತುಂಬಿಸಿ ಇಳಿಜಾರು (Slope) ನಿರ್ಮಿಸಲಾಯಿತು. ಈ ಇಳಿಜಾರಿನ ಮೂಲಕ ಕಾಡುಕೋಣ ಸುಲಭವಾಗಿ ಮೇಲೆ ಬರಲು ದಾರಿ ಮಾಡಿಕೊಡಲಾಯಿತು.
ನಂತರ ಹಗ್ಗಗಳ ಸಹಕಾರ ಹಾಗೂ ಜೆಸಿಬಿ ನೆರವಿನಿಂದ ಕಾಡುಕೋಣವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಬರೋಬ್ಬರಿ 20 ಗಂಟೆಗಳ ಕಾಲ ಕಾಲುವೆಯಲ್ಲಿದ್ದ ಕಾಡುಕೋಣ ಮೇಲೆ ಬರುತ್ತಿದ್ದಂತೆಯೇ ಕಾಡಿನತ್ತ ಓಡಿ ಹೋಗಿದೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಜೆಸಿಬಿ ಚಾಲಕರು ಮತ್ತು ಅಸೋಡು ಗ್ರಾಮದ ನೂರಾರು ಸ್ಥಳೀಯರು ಕೈಜೋಡಿಸಿದ್ದರು.
ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಕಾಡಿನಲ್ಲಿ ನೀರಿನ ಮೂಲಗಳು ಬತ್ತುತ್ತಿವೆ. ಈ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳು ನಾಡಿನತ್ತ ವಲಸೆ ಬರುತ್ತಿವೆ. ಸರ್ಕಾರ ಈ ಭಾಗದ ಕಾಲುವೆಗಳಿಗೆ ಪ್ರಾಣಿಗಳು ಬೀಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಡೆಬೇಲಿ ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸದ್ಯ ಕಾಡುಕೋಣ ಪ್ರಾಣಾಪಾಯದಿಂದ ಪಾರಾಗಿರುವುದು ಗ್ರಾಮಸ್ಥರಲ್ಲಿ ಸಮಾಧಾನ ತಂದಿದೆ.