ದೇಶಕ್ಕೊಂದೇ ಮೀನುಗಾರಿಕಾ ನೀತಿ ಜಾರಿ..?

By Kannadaprabha NewsFirst Published Feb 1, 2020, 7:45 AM IST
Highlights

ಕರಾವಳಿ ರಾಜ್ಯಗಳ ಆದಾಯದ ಪ್ರಮುಖ ಮೂಲವಾಗಿರುವ ಮೀನುಗಾರಿಕೆಗೆ ಪೂರಕವಾಗಿ ಕೇಂದ್ರ ಸರ್ಕಾರ, ಈ ಬಾರಿಯ ಬಜೆಟ್‌ ಮೂಲಕ ಸಮಗ್ರ ಮೀನುಗಾರಿಕಾ ನೀತಿಯೊಂದನ್ನು ಘೋಷಿಸುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಉಡುಪಿ ಜಿಲ್ಲೆಯ ಮೀನುಗಾರರು.

ಉಡುಪಿ(ಫೆ.01): ಕರಾವಳಿ ರಾಜ್ಯಗಳ ಆದಾಯದ ಪ್ರಮುಖ ಮೂಲವಾಗಿರುವ ಮೀನುಗಾರಿಕೆಗೆ ಪೂರಕವಾಗಿ ಕೇಂದ್ರ ಸರ್ಕಾರ, ಈ ಬಾರಿಯ ಬಜೆಟ್‌ ಮೂಲಕ ಸಮಗ್ರ ಮೀನುಗಾರಿಕಾ ನೀತಿಯೊಂದನ್ನು ಘೋಷಿಸುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಉಡುಪಿ ಜಿಲ್ಲೆಯ ಮೀನುಗಾರರು.

ಅದೇ ರೀತಿ ಜಿಲ್ಲೆಯಲ್ಲಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕೆಲವು ಸಮಸ್ಯೆಗಳಿಗೂ ಈ ಬಜೆಟ್‌ನಲ್ಲಿ ಮುಕ್ತಿ ದೊರೆಯುತ್ತದೆ ಎಂದು ಜಿಲ್ಲೆಯ ಕೈಗಾರಿಕೋದ್ಯಮಿಗಳು ಆಶಾಭಾವನೆಯಲ್ಲಿದ್ದಾರೆ.

ಮಂಗಳೂರು ಪಂಪ್‌ವೆಲ್‌ ಫ್ಲೈಓವರ್‌ಗೆ ಕೊನೆಗೂ ಸಿಕ್ತು ಉದ್ಘಾಟನೆ ಭಾಗ್ಯ

ಪ್ರಸ್ತುತ ದೇಶದ ಕರಾವಳಿ ರಾಜ್ಯಗಳಲ್ಲಿ ಮಳೆಗಾಲದ ಮೀನುಗಾರಿಕೆ ನಿಷೇಧಕ್ಕೆ ದೇಶದ ಎಲ್ಲ ರಾಜ್ಯಗಳಿಗೆ ಏಕರೀತಿಯ ನಿಯಮವನ್ನು ರೂಪಿಸಬೇಕು, ಸಮುದ್ರದಲ್ಲಿ ಮೀನುಗಾರರ ಸುರಕ್ಷೆತೆಗೆ ತಂತ್ರಜ್ಞಾನ ರೂಪಿಸಬೇಕು, ಮೀನುಗಾರಿಕೆಯ ಸಂದರ್ಭದಲ್ಲಿ ಅಕ್ಕಪಕ್ಕದ ರಾಜ್ಯಗಳ ಗಡಿ ಉಲ್ಲಂಘನೆಯ ಸಮಸ್ಯೆಯನ್ನು ನಿವಾರಿಸಬೇಕು, ಈ ರೀತಿ ಸಮಗ್ರ ಯೋಜನೆಯೊಂದನ್ನು ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಜಿಲ್ಲೆಯ ಮೀನುಗಾರ ನಾಯಕರು ಆಭಿಪ್ರಾಯಪಡುತ್ತಿದ್ದಾರೆ.

ಅಲ್ಲದೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ನೆಪದಲ್ಲಿ ಭಾರಿ ಗಾತ್ರದ ಬೋಟುಗಳಲ್ಲಿ ಮೀನುಗಾರಿಕೆ ನಡೆಸಲಾಗುತ್ತಿದೆ, ಇದು ಮತ್ಸ್ಯಕ್ಷಾಮಕ್ಕೆ ಕಾರಣವಾಗುತ್ತದೆ, ಈ ಬಗ್ಗೆಯೂ ಸೂಕ್ತ ಕ್ರಮ ಬಜೆಟ್‌ನಲ್ಲಿಯೇ ಘೋಷಣೆಯಾಗಬೇಕು ಎನ್ನುತ್ತಿದ್ದಾರೆ ಮೀನುಗಾರರು.

ಟ್ರೋಲಿಗರನ್ನು ಅಭಿನಂದಿಸಿದ ಸಂಸದ ನಳಿನ್

ಇನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯುವುದಕ್ಕೆ ಆಗುತ್ತಿರುವ ಕಿರುಕುಳವನ್ನು ತಡೆಯಲು ನಿಯಮಗಳನ್ನು ಸರಳೀಕರಿಸಬೇಕು, ಸಣ್ಣ ಉದ್ಯಮಗಳಿಗೆ ಜಟಿಲವಾಗಿರುವ ತೆರಿಗೆ ನೀತಿಯನ್ನು ಪುನರ್‌ರೂಪಿಸಬೇಕು. ಕಂಪನಿ ಸೆಕ್ರಟರಿ ನಿಯಮ, ಕಾರ್ಮಿಕರ ಕನಿಷ್ಠ ವೇತನ ಸಂಹಿತೆ ಇತ್ಯಾದಿಗಳನ್ನು ಕೂಡ ಸಡಿಲಗೊಳಿಸಬೇಕು ಎಂಬ ಬೇಡಿಕೆಯನ್ನು ಈಗಾಗಲೇ ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಲಾಗಿದೆ. ಅದೇನಾಗುತ್ತದೆ ಎಂದು ಸಣ್ಣ - ಮಧ್ಯಮ ಕೈಗಾರಿಕಾ ಉದ್ಯಮಿಗಳು ಕಾಯುತ್ತಿದ್ದಾರೆ.

ಅಂಗವನಾಡಿ ಕಾರ್ಯಕರ್ತೆಯರು ತಮ್ಮ ಉದ್ಯೋಗ ಕಾಯಂ, ಕನಿಷ್ಠ ವೇತನ, ಉದ್ಯೋಗ ಭದ್ರತೆ ಇತ್ಯಾದಿಗಳಿಗೂ ಬಜೆಟ್‌ನಲ್ಲಿ ಉತ್ತರ ಸಿಗಬಹುದೆಂದು ನಿರೀಕ್ಷಿಸುತ್ತಿದ್ದಾರೆ. ಕಳೆದ ಮುಂಗಾರು ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ನಷ್ಟದ ಪರಿಹಾರ ಇನ್ನೂ ಪೂರ್ಣ ವಿಚಾರಣೆಯಾಗಿಲ್ಲ, ಬಜೆಟ್‌ ಮೂಲಕ ಪ್ರಕೃತಿ ವಿಕೋಪ ಪರಿಹಾರಕ್ಕೆ ಹೊಸ ನೀತಿಯೇನಾದರೂ ಘೋಷಣೆಯಾಗಬಹುದೇ ಎಂದೂ ರೈತರ ನಿರೀಕ್ಷೆ ಇದೆ.

ಒಂದೇ ಕಾಮನ್‌ ತೆರಿಗೆ ಬೇಕು

ಕಂಪ್ಯೂಟರ್‌ ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಬಿಡಿಭಾಗಗಳ ಮೇಲೆ ಶೇ.12ರಿಂದ ಶೇ.28ರ ವರೆಗೆ ಬೇರೆಬೇರೆ ಸ್ಲಾಬ್‌ ತೆರಿಗೆಗಳಿವೆ, ಇದರಿಂದ ಮಾರಾಟಗಾರರಿಗೆ ತೊಂದರೆ, ಗ್ರಾಹಕರಿಗೂ ಹೊರೆಯಾಗಿದೆ. ಇವೆಲ್ಲವನ್ನೂ ಒಟ್ಟುಗೂಡಿಸಿ ಒಂದೇ ಕಾಮನ್‌ ತೆರಿಗೆಯನ್ನು ಘೋಷಿಸಬೇಕು ಎಂದು ಶ್ರೀ ಕಂಪ್ಯೂಟರ್ಸ್‌ನ  ಶ್ರೀಕಾಂತ್‌ ಶೆಟ್ಟಿಗಾರ್‌ ಹೇಳಿದ್ದಾರೆ.

click me!