ಹುಬ್ಬಳ್ಳಿ: ನಿವೃತ್ತಿ ವೇತನಕ್ಕೆ ಲಂಚ, ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು

By Kannadaprabha NewsFirst Published Aug 11, 2021, 10:39 AM IST
Highlights

*  ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಥಮ ದರ್ಜೆ ಸಹಾಯಕ ಹಾಗೂ ಖಜಾನಾಧಿಕಾರಿ 
*  ಲಂಚದ ಹಣ ಪಡೆಯುತ್ತಿದ್ದ ವೇಳೆ ಟ್ರ್ಯಾಪ್‌ ಮಾಡಿ ಆರೋಪಿಗಳನ್ನು ಬಂಧಿಸಿದ ಎಸಿಬಿ
*  ಡಿಎಸ್‌ಪಿ ಎಲ್‌. ವೇಣುಗೋಪಾಲ ಸೂಚನೆ ಮೇರೆಗೆ ದಾಳಿ 
 

ಹುಬ್ಬಳ್ಳಿ(ಆ.11): ಜಿಲ್ಲಾ ಖಜಾನೆಗೆ ಬಂದ ದಾಖಲಾತಿ ಪರಿಶೀಲನೆ ಮತ್ತು ನಿವೃತ್ತಿ ಪುಸ್ತಕ ನೀಡಲು ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಥಮ ದರ್ಜೆ ಸಹಾಯಕ ಹಾಗೂ ಖಜಾನಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಜಿಲ್ಲಾ ಖಜಾನೆ ಪ್ರಥಮ ದರ್ಜೆ ಸಹಾಯಕ ಅಭಿಲಾಷ ಶ್ರೀಶೈಲ ಆಲೂರ ಹಾಗೂ ಖಜಾನಾಧಿಕಾರಿ ಪ್ರಕಾಶ ಎಸ್‌. ಹಳಪೇಟ ಎಸಿಬಿ ಬಲೆಗೆ ಬಿದ್ದವರು. ನಿವೃತ್ತ ಪಿಎಸ್‌ಐ ಮಲ್ಲಣ್ಣ ಅಂದಾನಪ್ಪ ಬಿರಾದರ ದೇಸಾಯಿ ವಯೋನಿವೃತ್ತಿ ಹೊಂದಿದ್ದು, ಡಿಸಿಆರ್‌ ಅರ್ಜಿ, ಕಮ್ಯುಟೇಷನ್‌ ಮೊತ್ತ 13.54 ಲಕ್ಷವನ್ನು 2021ಮೇ ತಿಂಗಳಿಂದ ಮಂಜೂರು ಮಾಡಲು ಬೆಂಗಳೂರಿನ ಎ.ಜಿ. ಕಚೇರಿಯಿಂದ ಹುಬ್ಬಳ್ಳಿಯ ಜಿಲ್ಲಾ ಖಜಾನೆಗೆ ಆದೇಶ ಪತ್ರ ಬಂದಿತ್ತು. ಅದರಂತೆ ಮೊತ್ತದ ಮಂಜೂರಿ ಬಗ್ಗೆ ವಿಚಾರಿಸಲು ಬಂದಾಗ ಆರೋಪಿಗಳು 10 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಕೊನೆಗೆ 3 ಸಾವಿರಕ್ಕೆ ಕೆಲಸ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದರು. ಆ. 9ರಂದೇ ದಾಖಲಾತಿ ಕೆಲಸಗಳು ಪೂರ್ತಿಯಾಗಿದ್ದರೂ, ಲಂಚದ ಹಣಕ್ಕಾಗಿ ತಮ್ಮ ಬಳಿಯೇ ಪೆನಷನ್‌ ಪುಸ್ತಕ ಇದ್ದರೂ ನೀಡದೇ ವಾಪಸ್‌ ಕಳುಹಿಸಿದ್ದರು. ಮಂಗಳವಾರ ಲಂಚದ ಹಣ ಪಡೆಯುತ್ತಿದ್ದ ವೇಳೆ ಎಸಿಬಿ ತಂಡ ಟ್ರ್ಯಾಪ್‌ ಮಾಡಿ ಆರೋಪಿಗಳನ್ನು ಬಂಧಿಸಿದೆ.

ಅರಮನೆಯಂಥಾ ಮನೆ ಕಟ್ಟಿದ್ಹೇಗೆ ಜಮೀರ್ ಸಾಹೇಬ್ರು.? ಸುವರ್ಣ ನ್ಯೂಸ್‌ ವರದಿಗೆ ಶಾಸಕರು ಗರಂ.!

ಎಸಿಬಿ ಉತ್ತರ ವಲಯದ ಎಸ್ಪಿ ಬಿ.ಎಸ್‌. ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಎಲ್‌. ವೇಣುಗೋಪಾಲ ಸೂಚನೆ ಮೇರೆಗೆ ದಾಳಿ ನಡೆಸಲಾಗಿತ್ತು. ಪಿಐಗಳಾದ ವಿ.ಎನ್‌. ಕಡಿ, ಅಲಿ ಶೇಖ, ಸಿಬ್ಬಂದಿಗಳಾದ ಎಸ್‌.ಎಸ್‌. ಕಾಜಗಾರ, ಜಿ.ಎಸ್‌. ಮನಸೂರು, ಎಸ್‌.ಐ. ಬೀಳಗಿ, ಎಸ್‌.ಕೆ. ಕೆಲವಡಿ, ಕೆ.ಆರ್‌. ಹುಯಿಲಗೋಳ, ಎಸ್‌.ಎಸ್‌.ನರಗುಂದ, ಎಸ್‌. ವೀರೇಶ, ಆರ್‌.ಬಿ. ಯರಗಟ್ಟಿ, ವಿ.ಎಸ್‌. ದೇಸಾಯಿಗೌಡ್ರ, ಗಣೇಶ ಶಿರಹಟ್ಟಿ ಸೇರಿದಂತೆ ಮತ್ತಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.
 

click me!