ಬಡತನದಿಂದ ಬಂದವರಿಗೆ ಕಾರ್ಮಿಕರ ನೋವು ಅರಿವಾಗುತ್ತೆ: ಆಯನೂರು

By Kannadaprabha NewsFirst Published Dec 7, 2022, 8:07 AM IST
Highlights

 ರಾಜ್ಯದಲ್ಲಿ 1.30 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರಿದ್ದಾರೆ. ಕಡು ಬಡತನದಲ್ಲಿ ಬೆಳೆದುಬಂದ ಜನಪ್ರತಿನಿಧಿಗಳಿಗೆ ಮಾತ್ರ ಕಾರ್ಮಿಕರ ನೋವು ಗೊತ್ತಿರುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಹೇಳಿದರು.

ಶಿವಮೊಗ್ಗ (ಡಿ.7) : ರಾಜ್ಯದಲ್ಲಿ 1.30 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರಿದ್ದಾರೆ. ಕಡು ಬಡತನದಲ್ಲಿ ಬೆಳೆದುಬಂದ ಜನಪ್ರತಿನಿಧಿಗಳಿಗೆ ಮಾತ್ರ ಕಾರ್ಮಿಕರ ನೋವು ಗೊತ್ತಿರುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಹೇಳಿದರು.

ಇಲ್ಲಿನ ಶುಭಮಂಗಳ ಸಮುದಾಯ ಭವನದಲ್ಲಿ ಮಂಗಳವಾರ ಕಾರ್ಮಿಕ ಇಲಾಖೆ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಟನೆಗಳ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮಿಷನ್‌ ಕಿಟ್‌, ಎಲೆಕ್ಟ್ರಿಕಲ್‌ ಕಿಟ್‌ ಹಾಗೂ ಶಾಲಾ ಕಿಟ್‌ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಧಾನಿ Narendra Modi ಜಗತ್ತು ಕಂಡ ಮಹಾನ್‌ ನಾಯಕ - ಶಾಸಕ ಆಯನೂರು ಮಂಜುನಾಥ

ರಾಜ್ಯದ ಸರ್ಕಾರದಲ್ಲಿ ಇರುವ ಕಾರ್ಮಿಕ ಮಂತ್ರಿ ಶಿವರಾಮ್‌ ಹೆಬ್ಬಾರ್‌ ಒಬ್ಬರು ಡ್ರೈವರ್‌ ಆಗಿದ್ದವರು. ನಾನು ಆಟೋ ಡ್ರೈವರ್‌ ಆಗಿದ್ದೆ. ಈಶ್ವರಪ್ಪನವರು ಕೂಡ ಬಡತನದಲ್ಲೇ ಹುಟ್ಟಿದವರು. ಅಂತಹವರ ಕೈಗೆ ಅಧಿಕಾರ ಸಿಕ್ಕಿದಾಗ ಮಾತ್ರ ಬದಲಾವಣೆ ಸಾಧ್ಯ. ಪ್ರಧಾನಿ ಮೋದಿಯವರ ತಾಯಿ ಕೂಡ ಮನೆ ಮನೆ ಕೆಲಸಮಾಡಿದ್ದರು. ತಂದೆ ಚಹಾ ಮಾರುತ್ತಿದ್ದರು. ಆದ್ದರಿಂದ ಮೋದಿಯವರು ಪ್ರಧಾನಿ ಆದ ತಕ್ಷಣ ದೇಶದ ಶೇ.30ರಷ್ಟುಅಸಂಘಟಿತ ಕಾರ್ಮಿಕರಿಗೆ ವಿವಿಧ ಯೋಜನೆಗಳನ್ನು ರೂಪಿಸಿದರು ಎಂದರು.

ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರಷ್ಟೆಅಲ್ಲದೆ ಇನ್ನಿತರ ಹಲವಾರು ಸಣ್ಣಪುಟ್ಟಕಾರ್ಮಿಕರಿಗೆ ಒಟ್ಟಾರೆ 2.68 ಲಕ್ಷ ಮಂದಿಗೆ ಇಶ್ರಮ ಕಾರ್ಡ್‌ ನೋಂದಣಿ ಮಾಡಲಾಗಿದೆ. ಕರೋನಾ ಸಂದರ್ಭದಿಂದ ಇಲ್ಲಿಯವರೆಗೆ 100 ಕೋಟಿಗೂ ಹೆಚ್ಚು ರು. ಗಳನ್ನು ಜಿಲ್ಲೆಯ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳ ಮುಖಾಂತರ ನೀಡಲಾಗಿದೆ. ಕಾರ್ಮಿಕ ಭವನ ನಿರ್ಮಾಣ, ಅಪಾರ್ಚ್‌ಮೆಂಡ್‌ಗಳ ನಿರ್ಮಾಣ, ಕಾರ್ಮಿಕರಿಗಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗುತ್ತಿದೆ. ನಗರದ ರಾಗಿಗುಡ್ಡದಲ್ಲಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ನಿರ್ಮಾಣ ಭರದಿಂದ ಸಾಗಿದೆ. ಅಷ್ಟೇ ಅಲ್ಲದೆ ಬರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಅಷ್ಟುಸಂಸದರು ಒಟ್ಟಾಗಿ ಕಾರ್ಮಿಕರಿಗೆ ಇನ್ನು ಹೆಚ್ಚಿನ ಸೌಲಭ್ಯ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಕಾರ್ಮಿಕ ಸಂಘಟನೆಗಳು ಯಾವಾಗಲೂ ಒಟ್ಟಾಗಿರಬೇಕು. ಆಗ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ. ನಕಲಿ ಕಾರ್ಮಿಕ ಕಾರ್ಡ್‌ ಪಡೆದು ನಿಜವಾದ ಕಾರ್ಮಿಕನ ಸೌಲಭ್ಯವನ್ನು ಪಡೆದ ವಂಚಕರಿಗೆ ಜೈಲು ಶಿಕ್ಷೆಯಾಗುತ್ತದೆ. ಬಡ ಕಾರ್ಮಿಕನ ಹೊಟ್ಟೆಯ ಮೇಲೆ ಹೊಡೆದು ಅವನಿಗೆ ಸಿಗಬೇಕಾದ ಸೌಲಭ್ಯವನ್ನು ಯಾರಾದರೂ ಸುಳ್ಳು ಹೇಳಿ ಪಡೆದಲ್ಲಿ ಅವರು ಖಂಡಿತವಾಗಿಯೂ ಉದ್ದಾರವಾಗಲ್ಲ. ಇವತ್ತು ಒಟ್ಟು 885 ಕಾರ್ಮಿಕ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಕಾರ್ಮಿಕರಿಗು ವಿಶೇಷವಾಗಿ 50 ಕಿಟ್‌ಗಳನ್ನು ನೀಡಲಾಗುತ್ತಿದೆ. ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ನೀಡಲು ಪ್ರಯತ್ನಿಸಲಾಗುವುದು ಎಂದರು.

ಹಿಂದುಳಿದ ಹಣೆ ಪಟ್ಟಿಹೊತ್ತ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿ: ಸಚಿವ ಹೆಬ್ಬಾರ್

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌, ಪಾಲಿಕೆ ಮೇಯರ್‌ ಶಿವಕುಮಾರ್‌, ಸೂಡಾ ಅಧ್ಯಕ್ಷ ಎನ್‌.ಜಿ.ನಾಗರಾಜ್‌, ಕಾರ್ಮಿಕ ಸಂಘಟನೆಯ ಗೌರವಾಧ್ಯಕ್ಷ ಕೆ.ಈ.ಕಾಂತೇಶ್‌, ಕಾರ್ಮಿಕ ಒಕ್ಕೂಟದ ಅಧ್ಯಕ್ಷ ರವಿ, ಕಾರ್ಯದರ್ಶಿ ಸಂಜಯ್‌ ಕುಮಾರ್‌, ಕಾರ್ಮಿಕ ಸಂಘಟನೆಯ ಪ್ರಮುಖರಾದ ಪರಂದಾಮರೆಡ್ಡಿ, ಶಶಿಧರ್‌, ಅಹಮ್ಮದ್‌ ಪಾಷ, ಎನ್‌.ಡಿ.ಸತೀಶ್‌, ರಾಜು, ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ಬಿ.ರಂಗಯ್ಯ, ಕಾರ್ಮಿಕ ನಿರೀಕ್ಷಕ ಪಿ.ಭೀಮೇಶ್‌, ಕಾರ್ಮಿಕ ಯೋಜನಾ ನಿರ್ದೇಶಕ ರಘುನಾಥ್‌ ಮತ್ತಿತರರು ಇದ್ದರು.

click me!